ನವದೆಹಲಿ,(ಜ.08): ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಪರಾಧಿಗಳನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದು ಈ ತೀರ್ಪು ತೋರಿಸಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಗುಜರಾತ್ನಲ್ಲಿ 2002 ರಲ್ಲಿ ನಡೆದ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಹಾಗೂ ಅವರ ಕುಟುಂಬದ ಸದಸ್ಯರನ್ನು ಹತ್ಯೆಗೈದಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ಈ ಆದೇಶವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ಮುಂದಿನ 2 ವಾರದೊಳಗೆ ಅಪರಾಧಿಗಳು ಜೈಲಿಗೆ ಮರಳುವಂತೆ ಆದೇಶಿಸಿದೆ.
ಒಬ್ಬ ಮಹಿಳೆ ಯಾವುದೇ ಮತಕ್ಕೆ ಸೇರಿರಬಹುದು ಅಥವಾ ಯಾವುದೇ ನಂಬಿಕೆಯನ್ನು ಅನುಸರಿಸುತ್ತಿರಬಹುದು. ಆದರೆ ಅವರ ಮೇಲೆ ಘೋರ ಅಪರಾಧ ನಡೆಸಿದವರಿಗೆ ಕ್ಷಮಾಪಣೆ ನೀಡಲು ಸಾಧ್ಯವೇ? ಎಂದು ಸುಪ್ರೀಂ ಕೋರ್ಟ್ ನ್ಯಾ ಬಿವಿ ನಾಗರತ್ನ ಹಾಗೂ ನ್ಯಾ ಉಜ್ವಲ್ ಭುಯಾನ್ ಅವರ ಪೀಠ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದೆ.
ಇದನ್ನೇ ಉಲ್ಲೇಖಿಸಿ ಎಕ್ಸ್ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ಚುನಾವಣಾ ಲಾಭಕ್ಕಾಗಿ ನ್ಯಾಯವನ್ನು ಕೊಲ್ಲುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಅಪರಾಧಿಗಳಿಗೆ ಯಾರು ನೆರವಾಗುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ನ ಇಂದಿನ ತೀರ್ಪು ಸಾಬೀತುಪಡಿಸಿದೆ. ಬಿಲ್ಕಿಸ್ ಬಾನು ಅವರ ಈ ದಣಿವರಿಯದ ಪ್ರಯತ್ನ ದುರಹಂಕಾರಿ ಬಿಜೆಪಿ ಸರ್ಕಾರದ ವಿರುದ್ಧದ ನ್ಯಾಯದ ಗೆಲುವಾಗಿದೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ: 2002ರಲ್ಲಿ ಘಟನೆ ನಡೆಯುವಾಗ ಬಿಲ್ಕಿಸ್ ಬಾನು 21 ವರ್ಷದವರಾಗಿದ್ದು, 5 ತಿಂಗಳ ಗರ್ಭಿಣಿಯಾಗಿದ್ದರು. ಅದೇ ವರ್ಷ ಫೆಬ್ರವರಿಯಲ್ಲಿ ಗೋಧ್ರಾ ರೈಲಿನ ಅಗ್ನಿ ದುರಂತದ ಬಳಿಕ ಬುಗಿಲೆದ್ದ ಕೋಮು ಗಲಭೆಯಲ್ಲಿ ಬಿಲ್ಕಿಸ್ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಅಂದು ಅವರ 3 ವರ್ಷದ ಮಗಳು ಸಹಿತ ಕುಟುಂಬದ 7 ಜನರನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ 11 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿತ್ತು. ಆದರೆ 2022ರ ಆಗಸ್ಟ್ 15 ರಂದು ಗುಜರಾತ್ ಸರ್ಕಾರ ಈ 11 ಜನರನ್ನು ಬಿಡುಗಡೆಗೊಳಿಸಿ ಆದೇಶಿಸಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….