ದೊಡ್ಡಬಳ್ಳಾಪುರ, (ಸೆ.10); ಜಗತ್ತು ಸದಾ ಬದಲಾವಣೆ ಬಯಸುತ್ತದೆ. ಜಾಗತಿಕ ಸವಾಲುಗಳಿಗೆ ಪೂರಕವಾಗಿ ಇಂದು ಶಿಕ್ಷಣ ಸೇರಿದಂತೆ ದೇಶದ ಸ್ಥಿತಿಗಳಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿದ್ದು, ಇದಕ್ಕೆ ಇಂದಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ನ ಹೆಚ್ಚು ಘಟಕಗಳನ್ನು ತೆರೆಯುವ ಮೂಲಕ ಸಂಘಟನೆಯ ಆಶಯಗಳನ್ನು ನೆರವೇರಿಸಬೇಕಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಕರೆ ನೀಡಿದರು.
ನಗರದ ಹೊರವಲಯದ ಬೆಸೆಂಟ್ ಪಾರ್ಕ್ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು, ಸಿಆರ್ಸಿ, ಬಿಆರ್ಸಿ, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಗೆ ಒಂದು ದಿನದ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಶ್ರಮದಾನವನ್ನು ಕಲಿಸಬೇಕು. ಆದರೆ ಇಂದು ವ್ಯವಸ್ಥೆಯ ಬಗ್ಗೆ ತೀವ್ರ ಬೇಸರವಿದೆ. ಮಕ್ಕಳನ್ನು ವ್ಯವಸ್ಥಿತವಾಗಿ ಬೆಳೆಸುತ್ತಿಲ್ಲ. ಅವರಿಗೆ ಪರಿಸರ ಹಾಗೂ ಜಾಗತಿಕ ವಿದ್ಯಮಾನಗಳ ಬಗ್ಗೆ ಅರವು ಮೂಡಿಸುತ್ತಿಲ್ಲ. ತತ್ವಜ್ಞಾನಿ ಸಾಕ್ರೆಟಿಸ್ ಪ್ರಜಾಪ್ರಭುತ್ವದ ಋಣಾತ್ಮಕ ಅಂಶಗಳ ಬಗ್ಗೆ ಹಿಂದೆಯೇ ಎಚ್ಚರಿಸಿದ್ದನು. ಇಂದು ಸೋವಿಯತ್ ಒಕ್ಕೂಟ ಒಡೆದು ಚೂರಾಗಿದೆ. ಉಕ್ರೇನ್ ಮೇಲಿನ ಯುದ್ದ ಕರಾಳ ಅಧ್ಯಾಯವಾಗಿದ್ದು, ಇದನ್ನ ತಡೆಯುವಲ್ಲಿ ವಿಶ್ವ ಸಂಸ್ಥೆ ಸಹ ವಿಫಲವಾಗಿದೆ ಎಂದರು.
ಯಾವ ಪಠ್ಯಕ್ರಮ ಕಲಿಸುವುದು ?: ಶಾಲೆಗಳಲ್ಲಿ ಕಲಿಸುವ ವಿಷಯ ಒಂದೇ ಆದರೂ ಎನ್ಇಪಿ, ಎಸ್ಇಪಿ ಯಾವ ಪಠ್ಯ ಕ್ರಮದಲ್ಲಿ ಕಲಿಸುವುದು ಎನ್ನುವ ಗೊಂದಲಕ್ಕೆ ಶಿಕ್ಷಕರು ಒಳಗಾಗುತ್ತಿದ್ದಾರೆ. ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯ ಆದರೆ ಅದು ತನ್ನ ಅಸ್ತತ್ವ ಕಳೆದುಕೊಳ್ಳಬಾರದು. ನಮ್ಮ ಪರಿಸರ ಕಲುಷಿತವಾಗುತ್ತಿದ್ದು, ಇದನ್ನು ಉಳಿಸಿಕೊಳ್ಳಬೇಕು. ಗಡಿಮರಗಳನ್ನು ಬೆಳೆಸಬೇಕು.
ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್ಸ್ ಗೈಡ್ಸ್ ತತ್ವಗಳನ್ನು ಅಳವಡಿಸಿಕೊಂಡರೆ ಅವರ ಮುಂದಿನ ಜೀವನ ಶಿಸ್ತು ಬದ್ಧವಾಗಿ, ಉತ್ತಮವಾಗಿರಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಎಲ್ಲಾ ಧರ್ಮ ,ಜಾತಿ ವರ್ಗಗಳೂ ಒಂದೇ ಎಂದು ಸರ್ವ ಧರ್ಮ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಎಲ್ಲಾ ಧರ್ಮಗಳೂ ಸಹ ಸತ್ಯವಂತರಾಗಿರಿ ಎಂದೇ ಹೇಳುತ್ತವೆ. ಆದರೆ ಇಂದು ಮಕ್ಕಳು ಸಹ ಧರ್ಮದ ಆಧಾರದ ಮೇಲೆ ದೂರವಾಗುತ್ತಿರುವುದು ನೋವಿನ ಸಂಗತಿ.
ಮಕ್ಕಳಿಗೆ ಮೊದಲು ಮಾನವೀಯ ನೆಲೆಗಟ್ಟಿನ ಶಿಕ್ಷಣ ದೊರೆಯಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ನ ದ್ಯೇಯೋದ್ದೇಶಗಳಾದ ದೇಶ ಪ್ರೇಮ, ಪರಿಸರ ಕಾಳಜಿ, ಸರ್ವ ಧರ್ಮ ಸಮನ್ವತೆಗಳನ್ನು ಇಂದಿನ ಮಕ್ಕಳಿಗೆ ತುಂಬಬೇಕು. ಶಿಕ್ಷಣ ಇಲಾಖೆಯ ಅಕಾರಿಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಇಂದು ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮೊದಲಾದ ಪ್ರಮುಖ ಸಂಗತಿಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಇದಕ್ಕೆ ಸಹಕಾರಿಯಾಗಿದೆ. ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಬಾಲ್ಯವಿವಾಹ ಮೊದಲಾದ ಅನಿಷ್ಟಗಳ ಬಗ್ಗೆ ,ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ನ ಘಟಕಗಳು ಹೆಚ್ಚು ಸ್ಥಾಪನೆಯಾಗಬೇಕು. ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ಸ್ಕೌಟ್ಸ್ ಮತ್ತು ಗೈಡ್ಸ್ ನ ಚಟುವಟಿಕೆಗಳಿಗೆ ಮೀಸಲಿಟ್ಟು, ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿವೈಪಿಸಿ ಯೋಜನಾಧಿಕಾರಿ ಕೆಂಪಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ನಾಗರಾಜ್, ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ತರಬೇತುದಾರ, ಚಿನ್ನಸ್ವಾಮಿ ರೆಡ್ಡಿ, ಸಹಾಯಕ ಆಯುಕ್ತ ವೆಂಕಟರಾಜು, ಅರುಣ ಮಾಲ ಮತ್ತಿತರರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….