ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಆರ್ ಸಿಬಿ ತಂಡ 37 ರನ್ಗಳ ಭರ್ಜರಿ ಜಯ ಸಾಧಿಸಿದೆ.ಈ ಟೂರ್ನಿಯಲ್ಲಿ ಇದು ಆರ್ ಸಿಬಿಗೆ 4ನೇ ಗೆಲುವಾಗಿದೆ.
ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ (ಅಜೇಯ 90 ರನ್ಗಳು) ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 170 ರನ್ ಗಳ ಗುರಿಯನ್ನು ನೀಡಿತು.
ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡು 169 ರನ್ಗಳನ್ನು ಗಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ಗೆ 170 ರನ್ಗಳ ಸ್ಪರ್ಧಾತ್ಮ ಗುರಿಯನ್ನು ನೀಡಿದೆ. ಆರಂಭಿಕರಾಗಿ ಕಣಕ್ಕೆ ಇಳಿದ ಆರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ, ಚೆನ್ನೈ ಸೂಪರ್ ಕಿಂಗ್ಸ್ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು. ಆರಂಭದಲ್ಲಿಯೇ ಹೆಣಗಾಡುತ್ತಿದ್ದ ಆರೋನ್ ಫಿಂಚ್(2), ದೀಪಕ್ ಚಹರ್ಗೆ ಕ್ಲೀನ್ ಬೌಲ್ಡ್ ಆದರು. ನಂತರದ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿ ಎರಡನೇ ವಿಕೆಟ್ಗೆ 53 ರನ್ಗಳನ್ನು ಗಳಿಸಿತು.
ಉತ್ತಮವಾಗಿ ಆಡುತ್ತಿದ್ದ ದೇವದತ್ ಪಡಿಕ್ಕಲ್ 34 ಎಸೆತಗಳಲ್ಲಿ 33 ರನ್ಗಳನ್ನು ಗಳಿಸಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ಗೆ ಕ್ಯಾಚ್ ನೀಡಿದರು. ನಂತರ ಕ್ರೀಸ್ಗೆ ಬಂದ ಎಬಿ ಡಿವಿಲಿಯರ್ಸ್ ಯಾವುದೇ ರನ್ ಗಳಿಸದೆ ಶಾರ್ದೂಲ್ ಠಾಕೂರ್ಗೆ ಕ್ಲೀನ್ ಬೌಲ್ಡ್ ಆದರು. ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಸ್ಯಾಮ್ ಕರನ್ಗೆ ವಿಕೆಟ್ ಕೊಟ್ಟರು. ಮತ್ತೊಂದು ತುದಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ಚೆನ್ನೈ ಬೌಲರ್ಗಳನ್ನು ಬೆವರಿಳಿಸಿದರು. ಆಡಿದ 52 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ನೆರವಿನೊಂದಿಗೆ 52 ಎಸೆತಗಳಲ್ಲಿ ಅಜೇಯ 90 ರನ್ಗಳನ್ನು ದಾಖಲಿಸಿದರು. ಆ ಮೂಲಕ ತಂಡದ ಮೊತ್ತ 160 ರ ಗಡಿ ದಾಟುವಲ್ಲಿ ನೆರವಾದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಶಿವಮ್ ದುಬೆ 14 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಯೊಂದಿಗೆ 22 ರನ್ಗಳನ್ನು ಚಚ್ಚಿದರು. ಕೊಹ್ಲಿ ಹಾಗೂ ಶಿವಮ್ ದುಬೆ ಐದನೇ ವಿಕೆಟ್ಗೆ 34 ಎಸೆತಗಳಲ್ಲಿ 76 ರನ್ ಜತೆಯಾಟ ದಾಖಲಿಸಿದರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 169 ರನ್ಗಳನ್ನು ಗಳಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ಮಾಡಿದ ದೀಪಕ್ ಚಹರ್ ನಾಲ್ಕು ಓವರ್ಗಳಿಗೆ 10 ರನ್ಗಳನ್ನು ನೀಡಿ ಒಂದು ವಿಕೆಟ್ ಪಡೆದರು. ಶಾದೂರ್ಲ್ ಠಾಕೂರ್ 4 ಓವರ್ಗಳಿಗೆ 40 ರನ್ಗಳನ್ನು ನೀಡಿ ಎರಡು ವಿಕೆಟ್ ಪಡೆದರು.
ಆರ್ ಸಿಬಿ ನೀಡಿದ 170 ರನ್ ಗಳ ಗುರಿ ಬೆನ್ನತ್ತಿದ ಚೆನ್ನೈ ಆರಂಭದಲ್ಲೇ ಆಘಾತ ಅನುಭವಿಸಿತು. 25 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡುಪ್ಲೆಸಿ (8), ವಾಟ್ಸನ್ (14) ಬೇಗನೆ ನಿರ್ಗಮಿಸಿದರು. 3 ನೇ ವಿಕೆಟ್ ಗೆ ಜಗದೀಸನ್ ಹಾಗೂ ಅಂಬಟಿ ರಾಯುಡು ತಂಡಕ್ಕೆ ನೆರವಾದರು. ಆರಂಭದಲ್ಲಿ ನಿಧಾನಗತಿಯ ಆಟವಾಡಿ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ನಂತರ ಬಿರುಸಿನ ಆಟಕ್ಕೆ ಮುಂದಾಯಿತು. ಈ ವೇಳೆ ಜಗದೀಸನ್ (33) ರನ್ಗಳಿಸಿದ್ದಾಗ ರನೌಟ್ ಗೆ ಬಲಿಯಾದರು. ನಾಯಕ ಧೋನಿ (10) ಹೆಚ್ಚು ಹೊತ್ತು ನಿಲ್ಲಲು ಸ್ಪಿನ್ನರ್ ಚಹಲ್ ಅವಕಾಶ ನೀಡಲಿಲ್ಲ. ಸ್ಯಾಮ್ ಕರ್ರನ್ (0) ಮೋರಿಸ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಏಕಾಂಗಿ ಹೋರಾಟ ಮಾಡಿದ ರಾಯುಡು (42) ಉದಾನಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಜಡೇಜಾ (7), ಡ್ವೇನ್ ಬ್ರಾವೋ (7) ಮೋರಿಸ್ ಅವರ 19 ನೇ ಓವರಲ್ಲಿ ಔಟಾದರು. ಚೆನ್ನೈ 20 ಓವರಲ್ಲಿ 8 ವಿಕೆಟ್ ಗೆ 132 ರನ್ ಗಳಿಸಿ ಸೋಲಿಗೆ ಶರಣಾಯಿತು.

