ಹುಬ್ಬಳ್ಳಿ: ಪದವೀಧರರು ಅರ್ಜಿ ಸಲ್ಲಿಸಿದ್ದರು ಸಂಬಂಧಪಟ್ಟವರ ನಿರ್ಲಕ್ಷ ಹಾಗೂ ಕರ್ತವ್ಯ ಲೋಪದಿಂದ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳ್ಳದ ಕಾರಣ, ಹಳೆಯ ಮತದಾರರ ಪಟ್ಟಿಯಲ್ಲಿರುವವರನ್ನು ಮತದಾರರೆಂದು ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಿಬೇಕೆಂದು ಕರ್ನಾಟಕ ರಾಜ್ಯ ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ ಅಣವೇಕರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಪದವೀಧರ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಪದವೀಧರರು ಅರ್ಜಿ ತುಂಬಿಕೊಟ್ಟಿದ್ದರು ಸಹ ಸಂಬಂಧಪಟ್ಟವರ ನಿರ್ಲಕ್ಷ ಹಾಗೂ ಕರ್ತವ್ಯ ಲೋಪದಿಂದ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳ್ಳದೆ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಇದರಿಂದ ಚುನಾವಣೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಬಹುತೇಕ ವಕೀಲರು ಮತದಾರರ ನೋಂದಣಿ ಅರ್ಜಿಗಳನ್ನು ತುಂಬಿಕೊಟ್ಟಿದ್ದಾರೆ. ಹುಬ್ಬಳ್ಳಿ ಕಚೇರಿಯ ಚುನಾವಣಾ ಪಟ್ಟಿ ನೋಂದಣಿ ಸಿಬ್ಬಂದಿಗಳು ಎರಡು ದಿನ ನೂತನ ನ್ಯಾಯಾಲಯದ ಆವರಣದಲ್ಲಿ ನೋಂದಣಿಗಾಗಿ ವಕೀಲರಿಂದ ಹಾಗೂ ನ್ಯಾಯಾಂಗ ಸಿಬ್ಬಂದಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು, ಮತದಾರ ಪಟ್ಟಿಯಲ್ಲಿ ಬಹುತೇಕರ ಹೆಸರು ತಪ್ಪಿ ಹೋಗಿದ್ದು ನೋಡಿದರೆ ಉದ್ದೇಶಪೂರ್ವಕವಾಗಿ ವಕೀಲರನ್ನು ಪಟ್ಟಿಯಿಂದ ದೂರ ಇಟ್ಟಂತಾಗಿರುತ್ತದೆ.
ಈ ಬಗ್ಗೆ ವಿಚಾರಿಸಿದರೆ ಕರೊನಾ ಕಾಲದಲ್ಲಿ ಹೆಸರುಗಳನ್ನು ನೋಂದಣಿ ಮಾಡಲು ಅನಾನುಕೂಲತೆಯಾಗಿದ್ದು, ಇನ್ನೊಂದು ಪಟ್ಟಿಯಲ್ಲಿ ಸೇರಿಸುವುದಾಗಿ ತಿಳಿಸುತ್ತಿದ್ದಾರೆ. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿರುವ ಕಾರಣ ಚುನಾವಣೆಗೆ ಹಳೆಯ ಮತದಾರರ ಪಟ್ಟಿಯಲ್ಲಿರುವವರನ್ನು ಈ ಸಾಲಿನ ಮತದಾರರು ಎಂದು ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಬೇಕೆಂದು ಯುವ ವಕೀಲರ ಸಂಘ ಒತ್ತಾಯಿಸುತ್ತದೆ ಎಂದಿದ್ದಾರೆ.

