ದೊಡ್ಡಬಳ್ಳಾಪುರ: ಅಪರಣಹಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಪಹರಣಾಕಾರನ ಮೇಲೆ ದೊಡ್ಡಬಳ್ಳಾಪುರ ಪೊಲೀಸರು ಗುಂಡು ಹಾರಿಸಿರುವ ಘಟನೆ ರಾಜನಕುಂಟೆ ವ್ಯಾಪ್ತಿಯ ಮಾವಳ್ಳಿಪುರದ ಬಳಿ ನಡೆದಿದೆ.
ಆಸ್ತಿ ವಿಭಾಗದ ಕುರಿತಂತೆ ಛಾಯಾಗ್ರಾಹಕ ಅಂಜನಾಗೌಡ ಎನ್ನುವವರನ್ನ ಆರೋಪಿಗಳು ಟಿಬಿ ಸರ್ಕಲ್ ಬಳಿ ಅಪಹರಿಸಿದ್ದು, ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕರಾದ ರವಿ ಡಿ ಚನ್ನಣ್ಣನವರ್, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಹಾಗೂ ಡಿವೈಎಸ್ಪಿ ರಂಗಪ್ಪ ರವರ ಮಾರ್ಗದರ್ಶನದಲ್ಲಿ. ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ರವರ ನೇತೃತ್ವದಲ್ಲಿ ಮಹಿಳಾ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್, ರಾಜಾನುಕುಂಟೆ ಪೊಲೀಸ್ ಶಂಕರಪ್ಪ,ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಸಬ್ಇನ್ಸ್ ಪೆಕ್ಟರ್ ರಂಗಶಾಮಯ್ಯ, ರಾಜನಕುಂಟೆ ಸಬ್ಇನ್ಸ್ಪೆಕ್ಟರ್ ಶ್ರೀಮಾನ್ ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು.
ಆರೋಪಿಯ ಮಾಹಿತಿ ಸಂಗ್ರಹಿಸಿದ ಪೊಲೀಸ್ ತಂಡ, ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಮತ್ತು ರಾಜಾನುಕುಂಟೆ ಪಿಎಸ್ ಐ ಶಂಕರಪ್ಪ ರವರು ಮಾವಳ್ಳಿಪುರದ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಅಪಹೃತನನ್ನು 1ಇನೋವಾ ಕಾರಿನಲ್ಲಿ ಬಲವಂತವಾಗಿ ಒತ್ತೆಯಾಳಾಗಿಟ್ಟುಕೊಂಡು ಹೋಗುತ್ತಿರುವುದರ ಬಗ್ಗೆ ಗುಪ್ತ ಮಾಹಿತಿ ಬಂದಿದ್ದು ಅವರನ್ನು ತಡೆದು ಅಪಹೃತನನ್ನು ರಕ್ಷಿಸಲು ಹೋದಾಗ 3ಜನ ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದು ಅಪಹರಣಕ್ಕೆ ಒಳಗಾದ ಅಂಜನ್ ಗೌಡರನ್ನು ರಕ್ಷಣೆ ಮಾಡಲಾಗಿದೆ.
ಈ ವೇಳೆ ಪ್ರಮುಖ ಆರೋಪಿ ಮನೋಜ್ ಕುಮಾರ್ ನನ್ನು ಶಂಕರಪ್ಪರವರು ಬಂಧಿಸಲು ತೆರಳಿದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಕೂಡಲೇ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು.
ಗಾಯಗೊಂಡ ಶಂಕರಪ್ಪ ಹಾಗೂ ಆರೋಪಿ ಮನೋಜ್ ನನ್ನು ಚಿಕಿತ್ಸೆಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

