ಬೆಂಗಳೂರು: ಗ್ರಾಮಾಂತರ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆಗೆ ಮುಂದಾದಲ್ಲಿ ಅದರಿಂದ ಉಂಟಾಗುವ ಪರಿಣಾಮವನ್ನು ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಅವರ ಗಮನಕ್ಕೆ ತರಲಾಯಿತು ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ 2020-21ನೇ ಸಾಲಿನ ಅಕ್ಟೋಬರ್-2020ರ ಮಾಹೆಯ ಅಂತ್ಯದವರೆಗಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ನಂತರ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆ ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಹಾಗೂ ಜಿಲ್ಲಾಧಿಕಾರಿ ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹರಿತಲೇಖನಿಗೆ ಮಾಹಿತಿ ನೀಡಿರುವ ಶಾಸಕ ಟಿ.ವೆಂಕಟರಮಣಯ್ಯ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಸಂಸದರು, ನಾಲ್ಕು ತಾಲೂಕುಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿವಿಧ ಸಂಘಟನೆಗಳ ತೀರ್ಮಾನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವೆಂದು ಬೀರಸಂಧ್ರದ ಬಳಿ ನಿರ್ಮಿಸಲಾದ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಆದರೆ ಏಕಾಏಕಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಅಲ್ಲಿನ ಶಾಸಕ ಮನವಿ ಪತ್ರ ಸಲ್ಲಿಸಿರುವುದು ಒಮ್ಮತದ ನಿರ್ಧಾರಕ್ಕೆ ವಿರೋಧವಾದ ನಿಲುವಾಗಲಿದೆ. ಈ ನಿಲುವಿಗೆ ಉಳಿದ ಮೂರು ತಾಲೂಕಿನ ವಿರೋಧವಿದೆ. ಯಾವುದೇ ಕಾರಣಕ್ಕು ಹೆಸರು ಬದಲಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೇನಾದರೂ ಒತ್ತಡಕ್ಕೆ ಮಣಿದು ಜಿಲ್ಲಾ ಕೇಂದ್ರದ ಹೆಸರು ಬದಲಿಸಲು ಮುಂದಾದರೆ ಉಳಿದ ಮೂರು ತಾಲೂಕಿನ ಶಾಸಕರು, ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ. ಇದೇ ವೇಳೆ ಪಿಂಚಣಿ ಅವ್ಯವಸ್ಥೆ ಸರಿಪಡಿಸಲು ಒತ್ತಡ ಹೇರಲಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಕ್ಯಾಬಿನೆಟ್ ಅನುಮೋದನೆ ದೊರಕಿಸುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ.
ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಜಿಪಂ ಅಧ್ಯಕ್ಷೆ (ಪ್ರಭಾರ)ಕನ್ಯಾಕುಮಾರಿ ಶ್ರೀನಿವಾಸ್ ಸಹ ಬೆಂಬಲ ಸೂಚಿಸಿದ್ದು, ಉಪವಿಭಾಗಾಧಿಕಾರಿ ಕಚೇರಿ ದೊಡ್ಡಬಳ್ಳಾಪುರದಲ್ಲಿದ್ದರು ಸಹ ನಾಲ್ಕು ತಾಲೂಕಿಗೆ ಒಳಿತಾಗುತ್ತದೆ ಎಂಬ ಕಾರಣಕ್ಕೆ ಬೀರಸಂಧ್ರದ ಬಳಿ ಜಿಲ್ಲಾ ಕೇಂದ್ರ ಕಟ್ಟಡ ನಿರ್ಮಿಸಲು ಸರ್ಕಾರದ ನಿಲುವಿಗೆ ತಾಲೂಕಿನ ಜನತೆ ಮೌನವಹಿಸಿದರು.ಆದರೆ ಜಿಲ್ಲಾ ಕೇಂದ್ರ ಹೆಸರು ಬದಲಾವಣೆ ಮಾಡಿ ಉಳಿದ ತಾಲೂಕಿನ ಜನರ ಭಾವನೆಗಳಿಗೆ ಕೊಡಲಿಪೆಟ್ಟು ನೀಡುವುದು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

