ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ರೈತ ವಿರೋಧಿ ಜನ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಹೊಸದಾಗಿ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆಯ ಜಾರಿ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ, ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಮುಷ್ಕರ ನಡೆಸಿದರು.
ಮುಷ್ಕರದ ಅಂಗವಾಗಿ ಕೈಗಾರಿಕಾ ಪ್ರದೇಶದ ಬಹುತೇಕ ಕಾರ್ಖಾನೆಗಳನ್ನು ಬಂದ್ ಮಾಡಿ, ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು. ಜನ ಜೀವನ ಎಂದಿನಂತಿತ್ತು. ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಕಾರ್ಮಿಕ ಪರವಾದ ಕಾಯ್ದೆ ಜಾರಿಗೆ ಆಗ್ರಹಿಸಿದರು.
ನಂತರ ನಗರದ ಬಸ್ ನಿಲ್ದಾಣದ ಕೊಂಗಾಡಿಯಪ್ಪ ತಂಗುದಾಣದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜೆಸಿಟಿಯು ರಾಜ್ಯ ಮುಖಂಡರಾದ ಸತ್ಯಾನಂದ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ಏಪ್ರಿಲ್ನಿಂದ ಅನುಷ್ಠಾನಗೊಳಿಸಲು ಮುಂದಾಗಿರುವುದನ್ನು ವಿರೋಸಿ ಹಾಗೂ ಸಾರ್ವತ್ರಿಕ ಉದ್ಯಮಗಳ ಖಾಸಗೀಕರಣ ಖಂಡಿಸಿ ಹಾಗೂ ಏಳು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟದ ಸಂದರ್ಭವನ್ನು ನೆಪವಾಗಿಟ್ಟುಕೊಂಡು ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. ದೇಶದಲ್ಲಿ ಯೋಜನಾ ರಹಿತವಾಗಿ ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ಲಕ್ಷಾಂತರ ಜನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಇಂದಿಗೂ ಸಹ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಸರ್ಕಾರದ ತಪ್ಪು ನಿರ್ಧಾರದಿಂದಾಗಿಯೇ ಸಂಕಷ್ಟಕ್ಕೆ ಸಿಲುಕುರುವ ಆದಾಯ ತೆರಿಗೆ ಪಾವತಿಯಿಂದ ಹೊರಗಿರುವ ಎಲ್ಲರಿಗೂ ಪ್ರತಿ ತಿಂಗಳು 7.5 ಸಾವಿರ ಪರಿಹಾರವನ್ನು ಅವರ ಖಾತೆಗಳಿಗೆ ಜಮೆ ಮಾಡಬೇಕು,ಕಾರ್ಮಿಕ, ರೈತ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು, ಅಗತ್ಯವಿರುವವರಿಗೆ ತಿಂಗಳಿಗೆ 10 ಕೆ.ಜಿ ಉಚಿತ ಪಡಿತರ ನೀಡಬೇಕು, ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಬೇಕು, ಸರ್ಕಾರಿ ಮತ್ತು ಸಾರ್ವಜನಿಕ ರಂಗದ ನೌಕರರ ಅಕಾಲಿಕ ನಿವೃತ್ತಿ ಹಿಂತೆಗೆದುಕೊಳ್ಳಬೇಕು, ಎಲ್ಲಾ ಕಾರ್ಮಿಕರಿಗೆ ಪಿಂಚಣಿ ಒದಗಿಸಬೇಕು, 21 ಸಾವಿರ ರೂ ಸಮಾನ ಕನಿಷ್ಟ ವೇತನ ನೀಡಬೇಕು, ನರೇಗಾದಡಿ 200 ದಿನಗಳ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಟಿ.ಎನ್ ಪ್ರಭುದೇವ್ ಮಾತನಾಡಿ, ಲಾಕ್ಡೌನ್ ಸಂಕಷ್ಟದಿಂದ ಇನ್ನೂ ಜನತೆ ಚೇತರಿಸಿಕೊಂಡಿಲ್ಲ. ಈ ಸಮಯದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕರ ಹೊತಾಸಕ್ತಿಗೆ ಮಾರಕವಾದ ಕಾನೂನು ತರುತ್ತಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಸಿಪಿಐ(ಎಂ )ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರ ತೇಜಸ್ವಿ , ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಎಂ. ಸಂಜೀವ ನಾಯಕ್ ಎಐಟಿಯುಸಿ ತಾಲೂಕು ಕಾರ್ಯದರ್ಶಿ ಶಿವಾರೆಡ್ಡಿ, ಸಿಐಟಿಯು ಸಂಚಾಲಕ ರೇಣುಕಾರಾಧ್ಯ, ಕೆಐಈಈಎಫ್ ಮುಖಂಡ ಪ್ರಭಾಕರ್, ಎಫ್ಕೆಎಆರ್ಡಿಯು ಕಾರ್ಯದರ್ಶಿ ಇನಾಯತ್ ಪಾಷಾ, ಎಆರ್ಡಿಯು ಕಾರ್ಯದರ್ಶಿ ಮುಸ್ತಫ, ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ನರೇಶ್ ಕುಮಾರ್, ಸೈಯದ್ ಆಲಿ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸುಮಾ, ಬಿರ್ಲಾ ಸೂಪರ್ ಕಾರ್ಮಿಕ ಸಂಘದ ಮುಖಂಡರಾದ ಭರತ್ ಮಣೀಶ್ ಎಚ್ಎಂಕೆಪಿ ರಾಜಣ್ಣ ಸೇರಿದಂತೆ, ಎಐಟಿಯುಸಿ, ಕೆಐಇಇಎಫ್ ಮುಂತಾದ ಕಾರ್ಮಿಕ ಸಂಘಗಳ ಮುಖಂಡರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

