
ಬೆಂ.ಗ್ರಾ.ಜಿಲ್ಲೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೊಂದಾಯಿತ ಕ್ರೀಡಾ ವಿಜ್ಞಾನ ಸಂಸ್ಥೆಗಳಲ್ಲಿ ಸೇವೆಯನ್ನು ಪಡೆಯಲು ಸಹಾಯಧನ ನೀಡುವ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯ ಸೌಲಭ್ಯಗಳನ್ನು ಪಡೆಯಲು ಬೇಕಾದ ಅರ್ಹತೆಗಳು: ಭಾರತೀಯ ನಾಗರೀಕರಾಗಿದ್ದು ಅಥವಾ ಕರ್ನಾಟಕದಲ್ಲಿ ಕನಿಷ್ಟ ಹತ್ತು ವರ್ಷಗಳ ಕಾಲ ಸಾಮಾನ್ಯ ನಿವಾಸಿಯಾಗಿರುವ, ಹಿಂದಿನ ಮೂರು ಕ್ಯಾಲೆಂಡರ್ ವರ್ಷಗಳಲ್ಲಿ ನಿರಂತರವಾಗಿ ರಾಜ್ಯವನ್ನು ಪ್ರತಿನಿಧಿಸಿರುವ ಯುವ ಕ್ರೀಡಾಪಟುಗಳಾಗಿರಬೇಕು. ಹಿಂದಿನ ಕ್ಯಾಲೆಂಡರ್ ವರ್ಷಗಳಲ್ಲಿನ ಅಂತರರಾಷ್ಟ್ರೀಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಥವಾ ರಾಜ್ಯ ಮಟ್ಟದ/ ಅಂತರರಾಜ್ಯ, ಅಂತರ ವಿಶ್ವವಿದ್ಯಾಲಯ/ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ದಾಖಲಿಸಿರುವ ಕ್ರೀಡಾಪಟುಗಳು(ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ), ಆಯಾ ಕ್ರೀಡೆಗಳ ವೈಶಿಷ್ಟ್ಯತೆ ಆಧರಿಸಿ, ಭಾಗವಹಿಸುವಿಕೆ/ಪದಕ ವಿಜೇತರಾಗಿ ಗಣನೀಯ ಸಾಧನೆ ದಾಖಲಿಸಿದ/ದಾಖಲಿಸುವ ಸಂಭಾವ್ಯ ಕ್ರೀಡಾಪಟುಗಳು, ಒಂದು ಬಾರಿ ಈ ಕಾರ್ಯಕ್ರಮದಡಿ ಸೌಲಭ್ಯ ಪಡೆದ ಕ್ರೀಡಾಪಟುಗಳು ಮುಂದಿನ ಸಾಲುಗಳಲ್ಲಿ ಸೌಲಭ್ಯ ಪಡೆಯಲು ಹಿಂದಿನ ಸಾಲುಗಳ ಸಾಧನೆಯೊಂದಿಗೆ ಈಗಾಗಲೇ ಪಡೆದ ಸೌಲಭ್ಯಗಳ ಸದ್ವಿನಿಯೋಗ ಮಾಡಿರುವ ಬಗ್ಗೆ ಹಾಗೂ ಕ್ರೀಡಾ ಸಾಧನೆಯಲ್ಲಿನ ಪ್ರಗತಿಯ ಬಗ್ಗೆ ಮರು ನೊಂದಾವಣಿಯಾಗಿರುವ ಕ್ರೀಡಾಪಟುಗಳು ಸೂಕ್ತ ದಾಖಲೆಗಳನ್ನು ಒದಗಿಸಬೇಕು.
19 ವರ್ಷ ವಯೋಮಾನದೊಳಗಿನ ಯುವ ಕ್ರೀಡಾಪಟುಗಳಿಗೆ ಈ ಕಾರ್ಯಕ್ರಮದಡಿ ಸೌಲಭ್ಯ ನೀಡಲು ಆದ್ಯತೆ ನೀಡಲಾಗುವುದು ಹಾಗೂ ಕನಿಷ್ಟ 75% ರಷ್ಟು ಪ್ರಾತಿನಿಧ್ಯ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಭವನ, 1ನೇ ಮಹಡಿ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ಹಾಗೂ ಕಚೇರಿಯ ದೂ.ಸಂ.: 080-29787443, ಮೊ.ಸಂ.: 9845608598 ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

