ದೊಡ್ಡಬಳ್ಳಾಪುರ: ಕಳೆದ ದಿನಗಳಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಕುರಿ-ಮೇಕೆಗಳ ಸರಣಿ ಕಳ್ಳತನದ ಹಿನ್ನಲೆಯಲ್ಲಿ, ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಹಾಗೂ ಕಳ್ಳತನದ ಕುರಿತು ತನಿಖೆಗೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ಆವರಣದಲ್ಲಿ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಮುಖಂಡರಾದ ರಾಜಘಟ್ಟರವಿ, ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಗಳಲ್ಲಿ, ಹಲವು ಕುರಿಗಳನ್ನು ರಾತ್ರೋರಾತ್ರಿ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಪದೇ ಪದೇ ಕುರಿ ಕಳವು ಪ್ರಕರಣಗಳು ವರದಿಯಾಗುತ್ತಿದ್ದರೂ ಇದುವರೆವಿಗೂ ಕಳ್ಳರ ಸುಳಿವು ಕೂಡ ಸಿಕ್ಕಿಲ್ಲ.
ಕುರಿ ಸಾಕಾಣಿಕೆಯನ್ನು ಕಸುಬಾಗಿಸಿಕೊಂಡು ಅದರ ಆಧಾರದಲ್ಲೇ ಜೀವನ ನಡೆಸುತ್ತಿದ್ದ ರೈತರ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ರೂ.ಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಮುಂದಿನ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದ್ದು, ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ಪರಿಹಾರ ನೀಡುವ ಬದಲು, ಸಂಕಷ್ಟದಲ್ಲಿರುವ ರೈತನ ನೆರವಿಗೆ ಜಿಲ್ಲಾಡಳಿತ ಬರಬೇಕಿದೆ ಎಂದು ಒತ್ತಾಯಿಸಿದರು.
ಇದೇ ವೇಳೆ ಶಾಸಕ ಟಿ.ವೆಂಕಟರಮಣಯ್ಯ, ತಹಶೀಲ್ದಾರ್, ಪಶುಪಾಲನ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಜಂಟಿ ಸಭೆ ಕರೆದು, ರೈತರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ, ತಾಲೂಕಿನ ರಾಜಘಟ್ಟ, ಕೋಡಿಹಳ್ಳಿ, ಹಾಡೋನಹಳ್ಳಿ, ಸೊಣ್ಣಮಾರನಹಳ್ಳಿಯಲ್ಲಿ ಒಂದೇ ರೀತಿ 90ಕ್ಕು ಹೆಚ್ಚು ಕುರಿ-ಮೇಕೆಗಳು ಕಳವು ಮಾಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದ್ದರು, ಕಳ್ಳರು ಪತ್ತೆಯಾಗಿಲ್ಲ.
ಕೂಡಲೇ ಕಳ್ಳತನದ ತನಿಖೆಗೆ ಆದೇಶಿಸಿ, ತಾಲ್ಲೂಕಿನ ರೈತರ ಮತ್ತು ತಾಲೂಕಿನ ನಾಗರೀಕರ ಆತಂಕ ದೂರ ಮಾಡಬೇಕೆಂದರು.
ಈ ವೇಳೆ ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಈ ಕುರಿತಂತೆ ಜಿಲ್ಲಾಧಿಕಾರಿಯವರಿಗೆ ಗಮನಕ್ಕೆ ತಂದು, ರೈತರಿಗೆ ಪರಿಹಾರ ದೊರಕಿಸುವ ಭರವಸೆ ನೀಡಿದರು.
ಈ ವೇಳೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಎಸ್.ಎನ್ ವೇಣು. ಖಜಾಂಚಿ ಆನಂದ್, ಕಾರ್ಯದರ್ಶಿ ಜೋಗಹಳ್ಳಿ ಅಮ್ಮು, ಕಾನೂನು ಸಲಹೆಗಾರ ಆನಂದ್, ನಗರದ ಅಧ್ಯಕ್ಷ ಶ್ರೀನಗರ ಬಶೀರ್, ಕಾರ್ಯಕರ್ತರಾದ ಘಾಟಿ ತಿಮ್ಮರಾಜು, ರವಿ, ಸೂರಿ, ರಘುನಂದನ್, ನವೀನ್, ಅಯ್ಯಪ್ಪ ಸೇರಿದಂತೆ ಕುರಿ-ಮೇಕೆಗಳನ್ನು ಕಳೆದುಕೊಂಡ ನಾಲ್ಕು ಗ್ರಾಮಗಳ ರೈತರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

