‘ದೇಹು’ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಸಂತ ತುಕಾರಾಮರು ಪಾಂಡುರಂಗನ ಪರಮಭಕ್ತರು. ಜನರ ಮೇಲೆ ಅಪಾರ ಕರುಣೆ ಉಳ್ಳವರು. ದೊಡ್ಡ ವಿದ್ವಾಂಸರು .ಭಕ್ತಿ ,ಶ್ರದ್ಧೆ ಕುರಿತು ಬಹಳ ಆಳವಾಗಿ ಅರಿತಿದ್ದರು. ಅಂಥ ಮಹಾಮಹಿಮರಾದ ಸಂತ ತುಕಾರಾಮರ ಕುರಿತಾದ ಪುಟ್ಟ ಕಥೆ.

ಒಂದು ದಿನ ತುಕಾರಾಮ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಅದೇ ಊರಿನ ‘ಸಾಲೋ ಮಾಲಾ’ ಎಂಬ ಹರಿ ಕೀರ್ತನಕಾರ ಎದುರಿಗೆ ಬರುತ್ತಿದ್ದ. ಆತನಿಗೆ ತುಕಾರಾಮರನ್ನು ಕೆಣಕ ಬೇಕೆನಿಸಿತು. ಏನು ತುಕಾರಾಮ್ಜೀ ನಿಮ್ಮ ಸಂಸಾರವನ್ನೇ ಹಾಳು ಮಾಡಿದ್ದೀರಿ, ಭೂಮಿಗೆ ಭಾರ ಕೂಳಿಗೆ ದಂಡ ಎನ್ನುವಂತಾಗಿ ಬಿಟ್ಟಿರಿ, ಹೆಂಡತಿ ಮಕ್ಕಳ ಕೈಗೆ ಚಿಪ್ಪು ಕೊಟ್ಟು ಈಗ ದೊಡ್ಡದಾಗಿ ಸಂತನ ಹಾಗೆ ವೇಷಹಾಕಿಕೊಂಡು ಎಲ್ಲಿಗೆ ಹೊರಟಿದ್ದೀರಿ? ಎಂದು ಮನಸ್ಸಿಗೆ ಚುಚ್ಚಿದಂತೆ ಕೇಳಿದನು.

ಇಷ್ಟೆಲ್ಲ ಮಾತುಗಳನ್ನು ಕೇಳಿ ತುಕಾರಾಮರು ಸ್ವಲ್ಪವೂ ಕೋಪಗೊಳ್ಳದೆ ಹೀಗೆ ಕೆಲಸ ಹುಡುಕಲು ಹೊರಟಿದ್ದೀನಿ ಎಂದರು. ಅದಕ್ಕೆ ಸುಮ್ಮನಿರದೆ, ಏನು ತುಕಾರಾಮ್ಜೀ ಈಗಾಗಲೇ ನಿಮ್ಮ ಮನೆಯನ್ನು ಹಾಳು ಮಾಡಿದಿರಿ, ಮಕ್ಕಳಿಗೆ ಹೊತ್ತಿಗೆ ತಿನ್ನಲು ಗತಿಯಿಲ್ಲ. ಎಲ್ಲಾ ಬರಿದು ಮಾಡಿದ್ದೀರಿ, ನಿಮ್ಮ ಹೆಂಡತಿ ಜೀಜಾಬಾಯಿ ಕಂಡಕಂಡಲ್ಲಿ ಸಾಲ ಮಾಡಿ ಜೀವನ ಸಾಗಿಸಲು ಪರದಾಡುತ್ತಿದ್ದಾಳೆ. ನಿಮಗೆ ಸಂಸಾರವೆಂದರೆ ಏನೆಂದು ಗೊತ್ತಿಲ್ಲ, ಹೀಗಿರುವಾಗ ನಿಮಗೆ ಯಾರು ಕೆಲಸ ಕೊಡುತ್ತಾರೆ. ಪಾಪ ಇನ್ನೇನು ಮಾಡುತ್ತಿರಿ, ಹೋಗಿ ನಾಲ್ಕು ಮನೆ ಭಿಕ್ಷೆ ಬೇಡಿ ಇದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು ಹಂಗಿಸಿ ಮಾತನಾಡಿದ.
ತುಕಾರಾಮರಿಗೆ ‘ಭಿಕ್ಷೆ ‘ಎಂಬ ಶಬ್ದದಿಂದ ಮನನೊಂದಿತು. ಕಣ್ಣುಗಳು ತುಂಬಿ ಬಂದವು. ಹೇ ಪಾಂಡುರಂಗ, ಪಾಂಡುರಂಗ ಎನ್ನುತ್ತಾ ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
ಅದೇ ಹೊತ್ತಿಗೆ ಊರಿನ ಪರಿಚಯವಿದ್ದ ‘ಜ್ಞಾನೋಬ’ ಆ ದಾರಿಯಲ್ಲಿ ಬರುತ್ತಿದ್ದನು ಇದನ್ನು ಕೇಳಿ, ತುಕಾರಾಮರೇ, ಬನ್ನಿ ಪರಮಾತ್ಮ ದೊಡ್ಡವನು ನಾಳೆ ನಾನು ಬೇರೆ ಊರಿಗೆ ಹೋಗಬೇಕಾಗಿದೆ ನಾನು ಬರುವತನಕ ನಮ್ಮ ಹೊಲವನ್ನು ಕಾಯಿರಿ ಎಂದು ಹೇಳಿ ತುಕಾರಾಮರಿಗೆ ತನ್ನ ಹೊಲವನ್ನು ತೋರಿಸಿಕೊಟ್ಟನು.
ಮರುದಿನ ತುಕಾರಾಮರು, ಜ್ಞಾನೋಬನ ಹೊಲಕ್ಕೆ ಹೋಗಿ ಒಮ್ಮೆ ನಿಂತು ಹೊಲದ ಕೊನೆತನಕ ಕಣ್ಣು ಹಾಯಿಸಿದರು. ಹೊಲದ ತುಂಬೆಲ್ಲ ಹಸಿರು ಕಂಗೊಳಿಸುತ್ತಿದೆ. ರಾಶಿ ರಾಶಿ ಬೆಳೆ ಬೆಳೆದು ನಿಂತಿದೆ. ತೆನೆಗಟ್ಟಿ ಕಾಳು ತುಂಬಲು ಸಜ್ಜಾಗಿತ್ತು.
ಪಾಂಡುರಂಗನ ಲೀಲೆಯ ಕುರಿತು ತುಕಾರಾಮರು ಯೋಚಿಸಿದರು. ಹೇ ಪಾಂಡುರಂಗ ಏನಪ್ಪಾ ನಿನ್ನ ಲೀಲೆ, ಒಂದು ಕಾಳಿಗೆ ಇಷ್ಟೊಂದು ಧಾನ್ಯಗಳು ಸಿಗುತ್ತದೆಯಲ್ಲಾ, ಏನು ನಿನ್ನ ಮಹಿಮೆಯೋ, ನಿನ್ನನ್ನು ಅರಿಯಲು ನಮ್ಮಂಥ ಹುಲುಮಾನವರಿಂದ ಸಾಧ್ಯವಿದೆಯೇ? ಹೀಗೆ ಯೋಚಿಸುತ್ತಾ ಮೈಮರೆತು ಒಂದು ಕಡೆ ಕುಳಿತು ಧ್ಯಾನ ಮಗ್ನರಾದರು.
ಇದಕ್ಕಾಗಿ ಹೊಂಚುಹಾಕಿ ಕಾದಿದ್ದ ‘ಸಾಲೋಮಾಲೋ’ ಜಗದ ಪರಿವೆ ಇಲ್ಲದೆ ಪೂರ್ತಿ ಧ್ಯಾನದಲ್ಲಿ ಮುಳುಗಿದ್ದ ತುಕಾರಾಮರಿಗೆ, ಮಾಡುತ್ತೇನೆ ಇವರಿಗೆ ಎನ್ನುತ್ತಾ ಸಾಲೋಮಾಲೋ ಊರ ಹಾದಿಗೆ ಹೋಗಿ ಅಲ್ಲಿದ್ದ ಎರಡು ಹಸುಗಳನ್ನು ತಂದು ತುಕಾರಾಮನು ಕಾಯುತ್ತಿದ್ದ ಹೊಲದಲ್ಲಿ ಮೇಯಲು ಬಿಟ್ಟು ತಾನು ಹೊರಟುಹೋದನು.
ಈ ವೇಳೆ ತುಕಾರಾಮರು ಧ್ಯಾನದಲ್ಲಿ ತಲ್ಲೀನರಾಗಿದ್ದರು. ಹಸುಗಳು ಹೊಲವನ್ನೆಲ್ಲಾ ಮೇಯ್ದವು. ಬೆಳೆದ ಫಸಲುಗಳೆಲ್ಲಾ ನಾಶವಾಯಿತು. ಊರಿಗೆ ವಾಪಸ್ ಬಂದ ‘ಜ್ಞಾನೋಭ’. ತನ್ನ ಹೊಲದ ಬೆಳೆ ನಾಶವಾಗಿದ್ದನ್ನು ಕೇಳಿ ಕಂಗಾಲಾದನು. ಅವನಿಗೆ ತುಕಾರಾಮರ ಮೇಲೆ ಅಸಾಧ್ಯ ಕೋಪ ಬಂದಿತು.
ಅಷ್ಟುಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಸಾಲೋ ಮಾಲೋ “ಏನು ಜ್ಞಾನೋಬ ನಿನ್ನ ಹೊಲದ ಬೆಳೆಯೆಲ್ಲ ನಾಶವಾಯಿತಾ? ಎಂದು ಕೇಳಿದನು. ಜ್ಞಾನೋಬನು ಏನೂ ಹೇಳದೆ ತಲೆತಗ್ಗಿಸಿದ. ಮತ್ತೆ ಸುಮ್ಮನಿರದ ಸಾಲೋ ಮಾಲೋ ಎಲ್ಲಾ ಬಿಟ್ಟು ಅಂತಹ ಅರೆಬರೆ ಹುಚ್ಚರಿಗೇ ಕೆಲಸ ಕೊಡಬೇಡ ಎಂದಿದ್ದೆ. ಈಗ ನಿನಗೆ ಗೊತ್ತಾಯಿತಾ? ನೀನೇ ಅನುಭವಿಸು. ಆದರೆ ನನ್ನ ಪಾಲಿಗೆ ಬರಬೇಕಾದ ಧಾನ್ಯವನ್ನು ಎಂದಿಗೂ ನಾನು ಬಿಡುವುದಿಲ್ಲ. ಕಳ್ಳತನ ಮಾಡಿದರೂ ಸರಿಯೇ ನನ್ನ ಪಾಲಿನ ಧಾನ್ಯ ನನಗೆ ತಂದು ಕೊಡಬೇಕು ಎಂದು ಧಮಕಿ ಹಾಕಿದ. ಇಷ್ಟೇ ಅಲ್ಲದೆ ಸಾಲೋ ಮಾಲೋ, ತುಕಾರಾಮರನ್ನು ಊರ ಗೌಡರ ಹತ್ತಿರ ನ್ಯಾಯ ತೀರ್ಪಿಗೆ ಕರೆತಂದು ನಿಲ್ಲಿಸಿದ.
ತುಕಾರಾಮರು ಹೊಲದ ಬೆಳೆ ಹಾಳು ಮಾಡಿದ ಕಾರಣ, ಅದರ ಬದಲಿಗೆ ಅವರ ಮನೆಯನ್ನು ಜ್ಞಾನೋಬನಿಗೆ ಕೊಡಬೇಕೆಂದು ತೀರ್ಮಾನವಾಗಿ, ಕಾಗದಪತ್ರಗಳು ತಯಾರಾಯಿತು. ಇತ್ತ ಜ್ಞಾನೋಬನು ತನ್ನ ಹೊಲಕ್ಕೆ ಬಂದು ಹಸುಗಳು ತಿಂದುಬಿಟ್ಟ ಬೆಳೆಯ ದಂಟುಗಳನ್ನೆಲ್ಲ ಆರಿಸಿ, ಜೋಡಿಸಿ ನೋಡುತ್ತಾ, ಎಲ್ಲಾ ಪಾಂಡುರಂಗನ ಲೀಲೆ ಎಂದು ಅಳತೊಡಗಿದ, ಅವನೇ ಕಾಪಾಡುತ್ತಾನೆ. ಎನ್ನುತ್ತಾ ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡು ಪಾಂಡುರಂಗನನ್ನು ಧ್ಯಾನಿಸುತ್ತಾ ಉಳಿದ ಜೋಳವನ್ನು ಕೊಯ್ದು ರಾಶಿಮಾಡಿ ಕಣ ಕಟ್ಟಿದ.
ಕಟ್ಟಿದ ಕಣಗಳು ಅನೇಕ ಖಂಡಗಳ ರಾಶಿಯೇ ಆಯಿತು. ಜ್ಞಾನೋಬನ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಖಂಡದಲ್ಲಿ ಸಾಲೊ ಮಾಲೋನ ಪಾಲು ತೆಗೆದಿಟ್ಟ. ನಂತರ ತನ್ನ ಪಾಲನ್ನು ತೆಗೆದುಕೊಂಡು ಉಳಿದ ರಾಶಿಗಳನ್ನು ಗಾಡಿಯಲ್ಲಿ ತುಂಬಿ ತುಕಾರಾಮರ ಮನೆಗೆ ಕೊಂಡೊಯ್ದು ತುಕಾರಾಮರಿಗೆ ಅವನ್ನೆಲ್ಲ ಒಪ್ಪಿಸಿ, ತಮ್ಮ ಮಹಿಮೆ ಅಪಾರವಾದದ್ದು ಎನ್ನುತ್ತಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದನು.
ತಾವು ಮಹಿಮಾನ್ವಿತರು ತಮ್ಮ ಗುಣವರಿಯದೆ ಮೂಢನಾದೆ. ತಮ್ಮ ಮನವರಿಯದೆ ಮನೆ ಬರೆಸಿಕೊಂಡು ತಮ್ಮನ್ನು ನೋಯಿಸಿದೆ. ನನ್ನ ಅಪರಾಧಗಳನ್ನು ಮನ್ನಿಸಿ. ನನ್ನ ಅಳತೆಗೂ ಮೀರಿದ ಈ ಜೋಳದರಾಶಿ ನಿಮಗೆ ಸೇರಬೇಕು ಎಂದು ಧಾನ್ಯಗಳ ರಾಶಿಗಳನ್ನು ತುಕಾರಾಮರಿಗೆ ಅರ್ಪಿಸಿದನು.
ಬರಹ: ಆಶಾ ನಾಗಭೂಷಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
