ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ (MSV Public School) 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರದ ನಗರಸಭೆಯ ಮಾಜಿ ಉಪಾಧ್ಯಕ್ಷ ಡಿ.ವಿ.ನಾರಾಯಣ ಶರ್ಮಾರವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, “ಭಾರತದ ಮೇಲೆ ದಾಳಿ ಮಾಡಿದ ಅನೇಕ ವಿದೇಶೀಯರ ಬಗ್ಗೆ, ಅವರು ಭಾರತದ ಮೇಲೆ ನಡೆಸಿದ ನಿರಂತರ ದಾಳಿ, ಅದರಿಂದ ಭಾರತಕ್ಕೆ ಆದ ನಷ್ಟ ಹಾಗೂ ನಮ್ಮ ವೀರರ ಹೋರಾಟ – ತ್ಯಾಗ ಬಲಿದಾನಗಳ ಬಗ್ಗೆ, ಅದರಿಂದ ನಾವು ಪಡೆದ ಸ್ವಾತಂತ್ರ ಎಂದು ತಿಳಿಸಿದರು.

ಜೊತೆಗೆ ಚಂದ್ರಶೇಖರ ಆಜ಼ಾದರ ಧೈರ್ಯ, ಸಾಹಸಗಳನ್ನು ಕೊಂಡಾಡಿದರು. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಯಾವುದೇ ದ್ವೇಷ, ತಾರತಮ್ಯಗಳಿಲ್ಲದೆ ಒಗ್ಗಟ್ಟಿನಿಂದ ಬದುಕಿ ಬಾಳಬೇಕು ಎಂಬ ಸಂದೇಶವನ್ನು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಎ. ಸುಬ್ರಮಣ್ಯ ಅವರು ಮಾತನಾಡಿ, “ಸ್ವಾತಂತ್ರ್ಯ ಸಂಗ್ರಾಮವನ್ನು ಸ್ವತಃ ಅನುಭವಿಸಿದ ಹಾಗೂ ತುರ್ತುಪರಿಸ್ಥಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನಾರಾಯಣ ಶರ್ಮ ಅವರ ಕಾಣಿಕೆ ನಮ್ಮೆಲ್ಲರಿಗೂ ಆದರ್ಶಪ್ರಾಯ. ಇಂತಹ ಮೇರು ವ್ಯಕ್ತಿತ್ವದ ಹಿರಿಯ ಜೀವಿಯೊಂದಿಗೆ ಇಂದು ಆಚರಿಸಿದ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ವಿಶೇಷವಾದದ್ದು ಹಾಗೂ ಅರ್ಥಪೂರ್ಣವಾದದ್ದು.

1919 ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಹಾಗೂ 2025 ರಲ್ಲಿ ನಡೆದ ಪಹಲ್ಗಾಮ್ ಹತ್ಯಾಕಾಂಡದ ಬಗ್ಗೆ ತಿಳಿಸಿ, “ಆಪರೇಷನ್ ಸಿಂಧೂರ” ದ ಯಶಸ್ಸಿಗೆ ಕಾರಣರಾದ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯ ಸಾಧನೆಯನ್ನು ಕೊಂಡಾಡಿದರು.
ಪ್ರಾಂಶುಪಾಲರಾದ ರೆಮ್ಯ ಬಿ.ವಿ ಮಾತನಾಡಿ, ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನ ಪಾಲಿಗೆ ಅತ್ಯಂತ ಪವಿತ್ರ ದಿನ. ಆಗಸ್ಟ್ 15 ಎಂದಾಕ್ಷಣ ಪ್ರತಿಯೊಬ್ಬ ಭಾರತೀಯನ ಹೃನ್ಮನಗಳು ಪುಳಕಗೊಳ್ಳುತ್ತವೆ, ರೋಮಾಂಚನಗೊಳ್ಳುತ್ತವೆ. ರಾಷ್ಟ್ರಭಕ್ತಿ ಮೇಳೈಸುತ್ತದೆ. ನರನಾಡಿಗಳಲ್ಲಿ ರಾಷ್ಟ್ರಭ್ರಾತೃತ್ವ ಹರಿದಾಡುತ್ತದೆ. ಭಾರತಾಂಬೆಯ ಪುತ್ರರೆಲ್ಲರೂ ಜಾತಿ ಮತ ಭಾಷೆ ಧರ್ಮ ಪ್ರಾಂತ್ಯ ಎಂಬ ಯಾವುದೇ ಬೇಧ ಭಾವವಿಲ್ಲದೆ ಅತ್ಯಂತ ಸಂಭ್ರಮ ಸಡಗರದಿಂದ ವಿಜೃಂಭಣೆಯಿಂದ ಆಚರಣೆ ಮಾಡುವ ನಮ್ಮೆಲ್ಲರ ಹೆಮ್ಮೆಯ ಗೌರವ ಹಬ್ಬ- ಅದುವೇ ಭಾರತಾಂಬೆಯ ಜನುಮದಿನ. ಭಾರತೀಯರ ಶೌರ್ಯ ಮೆರೆದ ದಿನ.

ಗಂಡೆದೆಯ ವೀರರು ಗುಂಡಿಗೆ ಪ್ರಾಣ ಕೊಟ್ಟು ಭಾರತಾಂಬೆಯನ್ನು, ಭಾರತಮಾತೆಯ ಪುತ್ರರನ್ನು ಬ್ರಿಟೀಷರ ಸಂಕೋಲೆಗಳಿಂದ ಬಿಡಿಸಿದ ಮಹಾದಿನ. ಅದುವೇ ಭಾರತೀಯರ ಸ್ವತಂತ್ರ ದಿನ.
ನಾವು ಗೌರವದಿಂದ ಆಚರಿಸುವ ಈ ಹಬ್ಬ ಎಲ್ಲಿಯೂ ನಮಗೆ ಉಚಿತವಾಗಿ ದೊರಕಿದ್ದಲ್ಲ. ಯಾರ ದಯೆ ದಾಕ್ಷಿಣ್ಯದಿಂದಲೂ ಬಂದದ್ದಲ್ಲ. ತಕ್ಕಡಿ ಹಿಡಿದು ವ್ಯಾಪರಕ್ಕೆ ಬಂದ ಆಂಗ್ಲರು ತಮ್ಮ ಸ್ವಾರ್ಥಕ್ಕಾಗಿ ಭಾರತಾಂಬೆಯ ಪುತ್ರರನ್ನು ತಮ್ಮ ಆಳುಗಳಾಗಿ ದಾಸರನ್ನಾಗಿ ಮಾಡಿಕೊಂಡು, ಗುಲಾಮರನ್ನಾಗಿ ಮಾಡಿಕೊಂಡರು. ಅಷ್ಟೇ ಅಲ್ಲದೆ ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡರು.
ಆಂಗ್ಲರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಸಾವಿರಾರು ಭಾರತಾಂಬೆಯ ವೀರಪುತ್ರರು ತಮ್ಮ ತನು ಮನ ಧನಗಳನ್ನು ಅರ್ಪಿಸಿದ್ದಾರೆ. ಅವರ ತ್ಯಾಗ ಬಲಿದಾನ ಹಾಗೂ ನಿಸ್ವಾರ್ಥ ಸೇವೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ.

ನಾವು ಆಚರಿಸುವ ಈ ಹಬ್ಬದ ಹಿಂದೆ ಸಾವಿರ ಸಾವಿರ ಸಂಖ್ಯೆಯ ವೀರರ ತ್ಯಾಗ ಬಲಿದಾನವಿದೆ. ಅವರ ಸಾವಿದೆ ನೋವಿದೆ. ಅವರ ಶೌರ್ಯ ಸಾಹಸ ಅಡಗಿದೆ. ಹಾಗಾಗಿ ಇಂತಹ ಹಬ್ಬವನ್ನು ನಾವೆಲ್ಲರೂ ಸೇರಿ ಸಂಭ್ರಮದಿಂದ ಆಚರಿಸುವುದರ ಜೊತೆಗೆ ಅತ್ಯಂತ ಗೌರವದಿಂದ ಹಾಗೂ ಶ್ರದ್ಧೆಯಿಂದ ಆಚರಿಸಬೇಕಿದೆ. ಆಗ ಮಾತ್ರ ನಾವು ನಿಜವಾಗಿಯೂ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಮಹಾನ್ ನಾಯಕರ ವೇಷಭೂಷಣಗಳು, ಪಥಸಂಚಲನ, ದೇಶಭಕ್ತಿ ಗೀತೆ, ನೃತ್ಯ, ಹಾಗೂ ಪಿರಾಮಿಡ್ ಶೋ ಗಳು ನೋಡುಗರ ಮನಸೂರೆಗೊಂಡವು.
ಇತ್ತೀಚೆಗಷ್ಟೇ ಘಟಿಸಿದ ಆಪರೇಷನ್ ಸಿಂಧೂರ್ ನ ನೃತ್ಯರೂಪಕ ಕಾರ್ಯಕ್ರಮ ಕೇಂದ್ರಬಿಂದುವಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್ ಎಸ್., ಟ್ರಸ್ಟಿ ನಯನಾ ಸ್ವರೂಪ್, ಶಿಕ್ಷಕವೃಂದ, ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.