ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರವು ಮರಾಠ ಸಮುದಾಯ ಅಭಿವೃದ್ದಿ ನಿಗಮ (ಮರಾಠ ಅಭಿವೃದ್ದಿ ಪ್ರಾಕಾರ) ಸ್ಥಾಪನೆ ಮಾಡಲು ಹೊರಟಿರುವುದು ಸ್ವಾಗತಾರ್ಹವಾಗಿದೆ. ಇದು ಭಾಷೆ ಆಧಾರಿತವಾಗಿರದೇ ಮರಾಠ ಜನಾಂಗದ ಅಭಿವೃದ್ದಿಗೆ ಪೂರಕವಾಗಿದ್ದು, ನಾವು ಯಾರ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿಲ್ಲ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ಸುರೇಶ್ ರಾವ್ ಮಾನೆ ಹೇಳಿದ್ದಾರೆ.
ನಗರದ ಶಾಂತಿನಗರದಲ್ಲಿನ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದೊಡ್ಡಬಳ್ಳಾಪುರ ತಾಲೂಕು ಘಟಕದ ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಹಲವಾರು ದಶಕಗಳಿಂದ ಕರ್ನಾಟಕದಲ್ಲಿ ವಾಸ ಮಾಡಿಕೊಂಡು ಕನ್ನಡಿಗರಂತೆಯೇ ನಾವು ಬದುಕುತ್ತಿದ್ದೇವೆ. ಆದರೆ ಕೆಲವು ಕಿಡಿಗೇಡಿಗಳು ರಾಜಕೀಯ ದುರುದ್ದೇಶದಿಂದ ಕನ್ನಡಿಗರನ್ನು ಮರಾಠಗರನ್ನು ಒಡೆದು ಆಳುತ್ತಿದ್ದಾರೆ. ಗಡಿ ಸಮಸ್ಯೆ, ಬಾಷೆ ವಿಚಾರಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡುತ್ತಿದ್ದಾರೆ. ಮರಾಠ ಸಮುದಾಯ ನಿಗಮವನ್ನು ನಾವು ನೀಡಿ ಎಂದು ಕೇಳಿರಲಿಲ್ಲ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯ ಮುನ್ನಡೆಯಲು ಪೂರಕವಾಗಿ ಈ ನಿಗಮ ಅಸ್ತಿತ್ವಕ್ಕೆ ಬರುತ್ತಿರುವುದಕ್ಕೆ ನಮ್ಮ ಸಹಮತವಿದೆ. ಈ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ವಿರೋಧ ಮಾಡದೇ ಸಮುದಾಯದ ಹಿತದೃಷ್ಟಿಯಿಂದ ಸಹಕರಿಸಬೇಕಿದೆ. ಈ ವಿಚಾರವಾಗಿ ರಾಜ್ಯ ಬಂದ್ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಾನೂನು ಸಲಹೆಗಾರರಾದ ರವಿ ಮಾವಿನಕುಂಟೆ ಮಾತನಾಡಿ, ಮರಾಠ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು,ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಿದ್ದು, ಮರಾಠ ಅಭಿವೃದ್ಧಿ ಸಮುದಾಯ ನಿಗಮ ಇದಕ್ಕೆ ಇಂಬು ನೀಡಲಿದೆ. ಕನ್ನಡ ನಾಡು ನುಡಿಗೆ ದಕ್ಕೆ ಬಂದಾಗಲೆಲ್ಲಾ ನಾವು ಹೋರಾಟಕ್ಕೆ ಇಳಿದಿದ್ದೇವೆ. ನಮ್ಮ ಸಮುದಾಯದ ಬಹಳಷ್ಟು ಮಂದಿ ವಿವಿಧ ಕನ್ನಡಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಗಮ ಸ್ಥಾಪನೆ ಬೆಳಗಾವಿಗೆ ಮಾತ್ರ ಸೀಮಿತವಲ್ಲ.ಇದು ಇಡೀ ರಾಜ್ಯದ ಮರಾಠ ಸಮುದಾಯಕ್ಕೆ ನೆರವಾಗಲಿದೆ. ಬೆಳಗಾವಿ ಎಂದು ಸಹ ಕರ್ನಾಟಕದ ಭಾಗವಾಗಿದ್ದು, ಈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ಖಂಡನೀಯವಾಗಿದೆ. ಗಡಿ ವಿಚಾರವನ್ನು ಕೆದಕಿ ಶಾಂತಿ ಭಂಗ ಮಾಡುತ್ತಿರುವ ಎಂ.ಇ.ಎಸ್ ಪುಂಡರನ್ನು ಸರ್ಕಾರ ಗಡಿ ಪಾರು ಮಾಡಲು ನಮ್ಮ ಅಭ್ಯಂತರವಿಲ್ಲ. ಸಮುದಾಯದ ಅಭಿವೃದ್ದಿಯನ್ನು ರಾಜಕೀಯವಾಗಿ ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುವುದಕ್ಕೂ ಸಹ ನಮ್ಮ ವಿರೋಧವಿದೆ ಎಂದರು.
ಸಭೆಯಲ್ಲಿ ತಾಲೂಕು ಕ್ಷತ್ರಿಯ ಮರಾಠ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದರಾವ್, ಉಪಾಧ್ಯಕ್ಷ ಈಶ್ವರ್ ರಾವ್, ಖಜಾಂಚಿ ವಿಠಲ್ ರಾವ್ ಮಾನೆ ಮುಖಂಡರಾದ ಮನೋಹರ್ ಕಾಳೆ, ಪ್ರಕಾಶ್ ರಾವ್ ಮತ್ತಿತರರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

