ದೊಡ್ಡಬಳ್ಳಾಪುರ: ನೇಕಾರರ ಕುಂದು ಕೊರತೆಗಳನ್ನು ಆಲಿಸಲು ದೊಡ್ಡಬಳ್ಳಾಪುರಕ್ಕೆ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.
ನಗರದ ಬಸವಣ್ಣನ ದೇವಾಲಯದ ಸಮೀಪವಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ 11ಗಂಟೆಗೆ ನೇಕಾರರ ಚಿಂತನ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ನೇಕಾರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಸಭೆಗೂ ಮುನ್ನ ಇತ್ತೀಚೆಗೆ ಆತ್ಮಹತ್ಯೆಗೆ ಒಳಗಾದ ನೇಕಾರನ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ನೇಕಾರರು ತಮ್ಮ ಬೇಡಿಕೆಗಳನ್ನು ಕ್ರೂಡಿಕರಣಗೊಳಿಸಿದ್ದಾರೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಗೂ ತುಮಕೂರು ಸೇರಿದಂತೆ 10 ರಿಂದ 15 ಜಿಲ್ಲೆಗಳ ನೇಕಾರರು ಒಂದೇ ಕಸುಬನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರ ಬೇಡಿಕೆಗಳನ್ನು ಆಲಿಸುವಲ್ಲಿ ಸರಕಾರ ಯಾವುದೇ ರೀತಿಯ ಉತ್ಸಾಹ ತೋರದೆ ಇರುವುದರಿಂದ ವಿಪಕ್ಷ ನಾಯಕರ ಮೂಲಕ ಚರ್ಚೆ ನಡೆಸಿ ಸರಕಾರದ ಗಮನ ಸೆಳೆಯಲು ಸಿದ್ದವಾಗಿದ್ದಾರೆ.
ಗುಜರಾತ್, ಮಹಾರಾಷ್ಟ್ರದಲ್ಲಿ ಇರುವಂತೆ ಕಪಡ ಮಾರುಕಟ್ಟೆ ನಿರ್ಮಾಣವಾಗಬೇಕು, ಎಪಿಎಂಸಿ ಮಾದರಿಯಲ್ಲಿ ಮಳಿಗೆಗಳನ್ನು ಸರಕಾರ ನಿರ್ಮಿಸಿ, ಬಟ್ಟೆ ಉತ್ಪಾದನೆ ಮಾಡುವವರಿಗೆ ನೀಡಬೇಕು, ಹಾಗೂ ಕೇರಳ ತಮಿಳುನಾಡು ಮಾದರಿಯಲ್ಲಿ ನೇಕಾರರ ಕಲ್ಯಾಣ ಮಂಡಳಿಯನ್ನು ರೂಪಿಸಬೇಕು. ನೇಕಾರರ ಉತ್ಪನ್ನ ಮಾರುಕಟ್ಟೆಗಳ ನಿರ್ಮಾಣವಾಗಬೇಕು ಎಂಬುದು ನೇಕಾರರ ಬೇಡಿಕೆಯಾಗಿವೆ.
ರಾಜ್ಯದಲ್ಲಿ ರೈತರ ರೀತಿಯಲ್ಲಿ ನೇಕಾರರು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ 11 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತವರ ಕುಟುಂಬಕ್ಕೆ ಸರಕಾರ ಕನಿಷ್ಠ ಸಾಂತ್ವನ ಹೇಳಿತ್ತಿಲ್ಲ ಎಂಬುದು ನೇಕಾರರ ಅಳಲು.
ಮುಖ್ಯ ಬೇಡಿಕೆಗಳು.
1, ವಿದ್ಯುತ್ ಬಿಲ್ , ಗೃಹ ಬಳೆಕೆಯೂ ಸೇರಿ ಸಂಪೂರ್ಣ ಮನ್ನಾ ಮಾಡಬೇಕು.
2, ನೂತನವಾಗಿ ಬಂಡವಾಳ ಹೂಡಲು ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಅಗತ್ಯವಿರುವ ಹಣಕಾಸು ಸೌಲಭ್ಯ ನೀಡಬೇಕು.
3, ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ 10ಲಕ್ಷ ರೂ ಪರಿಹಾರ ನೀಡಬೇಕು. ವಿಧವಾ ಮಹಿಳೆಯರಿಗೆ ಮಾಸಿಕ 5 ಸಾವಿರ ವಿಶೇಷ ನೆರವು ನೀಡಬೇಕು.
4. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೇಕಾರರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು.
ಹಾಗೂ ಇನ್ನೂ ಅನೇಕ ಬೇಡಿಕೆಗಳನ್ನು ಸಿದ್ದರಾಮಯ್ಯ ಮುಂದೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಇಡಲಿದೆ.
ಕಾಂಗ್ರೆಸ್ ಸಮಾವೇಶಕ್ಕೆ ನೇಕಾರರ ಹೆಸರು – ಬಿಜೆಪಿ: ಇಂದು ನಡೆಯುತ್ತಿರುವ ನೇಕಾರರ ಚಿಂತನಾ ಸಭೆಯಲ್ಲಿ ಬಿಜೆಪಿ ಮುಖಂಡರು ಗೈರಾಗಬಹುದೆನ್ನಲಾಗುತ್ತಿದೆ. ಈ ಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ವಿವಿಧ ಘಟಕಗಳ ಮುಖಂಡರು ಕಾಂಗ್ರೆಸ್ ಸಮಾವೇಶಕ್ಕೆ ನೇಕಾರರ ಬಳಸಿಕೊಳ್ಳುತ್ತಿದ್ದಾರೆ, ನೇಕಾರರ ಬಗ್ಗೆ ಕಾಳಜಿ ಇದ್ದಲ್ಲಿ ಪಕ್ಷಾತೀತ ಸಭೆ ನಡೆಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಕೆಲವರು ನೇಕಾರರ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದರೆ. ರಾಜಕೀಯ ಶುರುಮಾಡಿ ರಾಜಕೀಯ ಬೇಡ ಎಂದರೆ ಹೇಗೆ ಎಂದು ಪರ ವಿರೋಧ ಚರ್ಚೆ ನಡೆಯುತ್ತಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

