ಚಿಕ್ಕಬಳ್ಳಾಪುರ, (ನ.22): ನಾದಕ್ಕೆ ತಾನು ಬೆಳೆಯುತ್ತಾ ತನ್ನನ್ನು ಆಶ್ರಯಿಸುವ ಪ್ರತಿಯೊಬ್ಬರನ್ನು ಬೆಳೆಸಿಕೊಂಡು ಹೋಗುವ ಮಾಂತ್ರಿಕ ಶಕ್ತಿ ಇದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ 97ನೇ ಜನ್ಮ ದಿನೋತ್ಸವದ ಪ್ರಯುಕ್ತ, ಆಯೋಜನೆಗೊಂಡ ಭಾರತೀಯ ಶಾಸ್ತ್ರೀಯ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ, ಶ್ರೀ ಸತ್ಯಸಾಯಿ ಸಂಗೀತ ಶಿರೋಮಣಿ ಪುರಸ್ಕಾರವನ್ನು ಪ್ರಧಾನ ಮಾಡಿ ಮಾತನಾಡಿದರು.
ಭಾರತದ ಅನೇಕ ಮಂದಿ ಸಂಗೀತಗಾರರು ನಾದದಿಂದಲೇ ಅದ್ಭುತಗಳನ್ನು ಸಾಧಿಸಿದ ದೃಷ್ಟಾಂತ ನಮ್ಮ ಮುಂದಿದೆ. ಹಿಂದೆ ರಾಜ ಮಹಾರಾಜರುಗಳ ಕಾಲದಲ್ಲಿ ರಾಜ ಮಹಾರಾಜರುಗಳಿಂದ ಮಾತ್ರವೇ ಸಂಗೀತಕ್ಕೆ ಮಾನ್ಯತೆ ದೊರೆಯುತ್ತಿತ್ತು. ಅದನ್ನು ಎಲ್ಲರಿಗೂ ಪಡೆಯಲೂ ಆಗುತ್ತಿರಲಿಲ್ಲ. ಜನಸಾಮಾನ್ಯರಿಗೆ ದೂರದ ಮಾತೇ ಆಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸಂಗೀತವು ಭವ್ಯ ಪರಂಪರೆಯಾಗಿ ಮಾರ್ಪಟ್ಟಿದೆ. ನಮ್ಮ ದೇಶದ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವೆನ್ನುವಷ್ಟು ಜನಪ್ರಿಯತೆಯನ್ನು ಪಡೆದಿದೆ.
ಅದೆಷ್ಟೋ ಮಂದಿ ಸಂಗೀತಗಾರರು ತಮ್ಮ ಪ್ರತಿಭೆಯಿಂದಲೇ ಭವಿಷ್ಯದ ಜೀವನಕ್ಕೆ ಭವ್ಯ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಮಾಂತ್ರಿಕ ಸ್ಪರ್ಶದ ಸಂಗೀತವು ಪರಮಾತ್ಮ ಸನ್ನಿಧಿಯ ಪರಮಾನಂದವನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲೇ ನಿಲ್ಲುತ್ತದೆ. ಇಂದು ಶಿಕ್ಷಣವು ಎಲ್ಲರಿಗೂ ದೊರಕಿದಂತೆ ಸಂಗೀತ ಶಿಕ್ಷಣವೂ ಸಹ ದೊರೆಯಬೇಕೆಂದು ಆಶಿಸುತ್ತೇನೆ ಎಂದರು.
ಪದ್ಮಶ್ರೀ ಅರುಣಾ ಸಾಯಿರಾಂ ಮತ್ತು ಪಂಡಿತ್ ತೆಜೇಂದ್ರ ನಾರಾಯಣ ಮಜುಂದಾರ್ ರವರಿಗೆ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ವತಿಯಿಂದ ಶ್ರೀ ಸತ್ಯಸಾಯಿ ಸಂಗೀತ ಶಿರೋಮಣಿ ಪುರಸ್ಕಾರವನ್ನು ವಿಶ್ವವಿದ್ಯಾನಿಲಯದ ಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನೀಡಿದರು.
ಸನ್ಮಾನಕ್ಕೆ ಉತ್ತರವಾಗಿ ಸಂಗೀತ ಕ್ಷೇತ್ರದ ದಿಗ್ಗಜರಾದ ಪದ್ಮಶ್ರೀ ಅರುಣಾ ಸಾಯಿರಾಂ ಮತ್ತು ಪಂಡಿತ್ ತೇಜೇಂದ್ರ ನಾರಾಯಣ ಮಜುಂದಾರ್ ತಮ್ಮ ಅನಿಸಿಕೆಗಳನ್ನು ಮಂಡಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಭಾ ವೇದಿಕೆಯಲ್ಲಿ ಉಸ್ತಾದ್ ಅಮ್ಜದ್ ಅಲಿ ಖಾನ್, ಕುಲಾಧಿಪತಿ ಬಿ ಎನ್ ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಸಿ ಶ್ರೀನಿವಾಸ್, ಡಾಕ್ಟರ್ ಮೈಸೂರು ಮಂಜುನಾಥ್, ಉಪ ಕುಲಪತಿ ಡಾಕ್ಟರ್ ಶ್ರೀಕಂಠ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಡೆದ ಸಂಗೀತ ಸಮ್ಮೇಳನದಲ್ಲಿ ಡಾಕ್ಟರ್ ಮೈಸೂರು ಮಂಜುನಾಥ್, ಪಂಡಿತ್ ಚೇತನ್ ಜೋಷಿ, ಡಾಕ್ಟರ್ ಬಿ.ಸಿ.ಮಂಜುನಾಥ್, ಮೊದಲಾದ ಸಂಗೀತ ವಿದ್ವಾಂಸರು ಸಮ್ಮೇಳಶನದಲ್ಲಿ ಭಾಗವಹಿಸಿ ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಗೀತ ವಿದುಷಿ ನಿರ್ಮಲಾ ರಾಜಶೇಖರ್ ಅವರು ವೀಣಾ ವಾದನ ಕಚೇರಿಯನ್ನು ನಡೆಸಿಕೊಟ್ಟರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

