
ದೊಡ್ಡಬಳ್ಳಾಪುರ; ಒಪ್ಪಂದದಂತೆ JDS ಪಕ್ಷಕ್ಕೆ ದೊರಕಬೇಕಿದ್ದ ನಗರಸಭೆ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಕುರಿತು ಪಕ್ಷದೊಳಗೆ ಕುದಿಯುತ್ತಿದ್ದ ಅಸಮಾಧಾನ ಏಕಾಏಕಿ ಸ್ಪೋಟಗೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 90 ಸಾವಿರ ಮತ ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯದ್ದು 89 ಓಟ್ ಇತ್ತು. 39 ಸಾವಿರ ಜೆಡಿಎಸ್ ಗೆ ಬಂದ ಓಟ್ ಇತ್ತು.. ಎರಡು ಸೇರಿ ಲಕ್ಷಕ್ಕೂ ಹೆಚ್ಚು ಬರಬೇಕಿತ್ತು. ಏಕೆ ಬರಲಿಲ್ಲ? ಎಂದು ಪ್ರಶ್ನಿಸಿದ್ದಾರೆ
ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯವರು ಸುಧಾಕರ್ ಪರ ಕೆಲಸ ಮಾಡಿಲ್ಲ. ಈ ಮಾತಿಗೆ ಬಿಜೆಪಿ ಕಾರ್ಯಕರ್ತರು ಬೇಜಾರ್ ಮಾಡಿಕೊಂಡರು ಪರವಾಗಿಲ್ಲ. ಬಿಜೆಪಿ-ಜೆಡಿಎಸ್ ವರಿಷ್ಠರ ಸೂಚನೆಯಂತೆ ನಮ್ಮ ಪಕ್ಷದ ಗೌರವ ನಾವು (JDS) ಪಕ್ಷದವರು ಉಳಿಸಿದ್ದೇವೆ. ಆದರೆ ಬಿಜೆಪಿಯವರು ಧಿಕ್ಕಾರ ಕೂಗಿದರು.
ಡಾ.ಕೆ.ಸುಧಾಕರ್ ಅವರು ಸಂಸದರಾಗಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರೇ ಪ್ರಮುಖ ಕಾರಣ. ಅವರ ಶ್ರಮವನ್ನು ಸುಧಾಕರ್ ಅವರು ಪರಿಗಣನೆಗೆ ತಗೆದುಕೊಳ್ಳಬೇಕು ಎಂದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿಜೆಪಿ ಶಾಸಕ ಇಲ್ಲದಾಗಲೇ ಕಮಲ-ದಳ ಮೈತ್ರಿ ಮೂಲಕ ನಗರಸಭೆ ಅಧಿಕಾರ ನಡೆಸಿದ್ದೇವೆ. ಅಂದು ನೀಡಿದ ಮಾತಿನಂತೆ ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ ಪಕ್ಷದಲ್ಲಿ ಇಬ್ಬರಿದ್ದಾರೆ.. ಲುಕ್ಕಿಂಗ್ ಲಂಡನ್, ಟಾಕಿಂಗ್ ಟೋಕಿಯೋದವರು ಅಂತವರಿಂದ ಅಧಿಕಾರ ಕೈತಪ್ಪಿದೆ. ಅವರಿಗೆ ವಿಶ್ರಾಂತಿ ನೀಡುವವರೆಗೆ ಅವರು ನಮ್ಮ ಪಕ್ಷವನ್ನು ಉದ್ಧಾರ ಆಗಲು ಬಿಡಲ್ಲ ಎಂದು ಕುಟುಕಿದರು.
ಅವರಿಗೆ ಜೆಡಿಎಸ್ ಪಕ್ಷವನ್ನು ಕಟ್ಟಬೇಕು, ಕಾರ್ಯಕರ್ತರಿಗೆ ಅಧಿಕಾರ ದೊರಕಿಸಬೇಕು ಎಂಬ ಉದ್ದೇಶ ಇಲ್ಲವಾಗಿದೆ. ಒಂದು ದಿನದ ಮಟ್ಟಿಗೆ ನಡೆಯಬೇಕಷ್ಟೆ ಆ ಮೇಲ್ ಕಣ್ಮರೆ ಆಗ್ಬಿಡ್ತಾರೆ. ಅವರು ಯಾರೆಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು.. ಬಿಜೆಪಿ ಮುಖಂಡರ ಜೊತೆ ರೆಸಾರ್ಟ್ ಸೇರಿದ್ದ ಸ್ವಪಕ್ಷೀಯ ಮುಖಂಡರ ವರ್ತನೆ ವಿರುದ್ಧ ಹರೀಶ್ ಗೌಡ ಬೇಸರ ವ್ಯಕ್ತಪಡಿಸಿದರು.
ಟಿ.ವೆಂಕಟರಮಣಯ್ಯ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಂತರ ಕುಮಾರಸ್ವಾಮಿ ಅವರು ನೀಡಿದ ಅನುದಾನ ತಾಲೂಕಿಗೆ ಅನುಕೂಲವಾಗಿದೆ. ಆದರೆ ಕಳೆದ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕ ಎಂದು ಮಾಡಿದ ದ್ವೇಷ ರಾಜಕಾರಣದಿಂದ ದೊಡ್ಡಬಳ್ಳಾಪುರ ಅಭಿವೃದ್ಧಿಯಿಂದ ಹಿಂದುಳಿದಿದೆ. ಅಂತೆಯೇ ಈಗ ಬಿಜೆಪಿ ಶಾಸಕ ಎಂದು ಕಾಂಗ್ರೆಸ್ ಮಾಡ್ತಾ ಇದೆ ಅಷ್ಟೇ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ತಾಲೂಕಿನ ಅಭಿವೃದ್ಧಿ ಕುರಿತು ಕಾಳಜಿ ಇಲ್ಲ, ಇಎಸ್ಐ ಆಸ್ಪತ್ರೆ ಉದ್ಘಾಟನೆ ವಿಳಂಬ ಕುರಿತು ಪ್ರತಿಕ್ರಿಯೆ ನೀಡಿದ ಹರೀಶ್ ಗೌಡ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಿದ್ದನ್ನೇ ಕಾಂಗ್ರೆಸ್ ಈಗ ಮಾಡ್ತಾ ಇದೆ ಎಂದರು. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

