ಬೆಂಗಳೂರು: ಮೂರು ತಿಂಗಳ ವೇತನ ಶನಿವಾರದೊಳಗೆ ನೀಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ 108 ambulance ನೌಕರರು ಎಚ್ಚರಿಕೆ ನೀಡಿದ್ದಾರೆ.
108 ambulance ನೌಕರರಿಗೆ ಆರೋಗ್ಯ ಇಲಾಖೆ ಮತ್ತೆ ಸಂಬಳ ನೀಡಿಲ್ಲ. ಹೀಗಾಗಿ ಸಿಬ್ಬಂದಿಗಳು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರದೊಳಗೆ ವೇತನ ನೀಡದಿದ್ದರೆ ಸೇವೆಗೆ ಹಾಜರಾಗದಿರಲು ನೌಕರರು ನಿರ್ಧರಿಸಿದ್ದಾರೆ. ಈ ಕುರಿತು ಗುರುವಾರ ಸರಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ಆರೋಗ್ಯ ಕವಚ ಯೋಜನೆಯಲ್ಲಿ ಸುಮಾರು ಎರಡು ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯೆ ಉಂಟಾಗಿದ್ದು ಹಲವು ಬಾರಿ ಸರಕಾರ ಮತ್ತು ಸಂಸ್ಥೆ ಹಾಗೂ ಸಂಘಟನೆಗಳು ಸಭೆ ಮಾಡಿದರೂ ಸಹ ವೇತನದ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯ ಸೆ.12ರಂದು ಮಧ್ಯಂತರ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶ ಮೂರು ಸಂಘಟನೆಯ ಸರ್ವ ಸದಸ್ಯರು ಸ್ವೀಕರಿಸಿದ್ದರೂ ಸಹ ಸಂಸ್ಥೆ ನಮಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಆ ಮೂಲಕ ಮೇಲೋಟಕ್ಕೆ ನ್ಯಾಯಾಲಯದ ಆದೇಶ ಧಿಕ್ಕರಿಸಿರುವುದಾಗಿ ಸಂಘಟನೆ ವತಿಯಿಂದ ಸರಕಾರದ ಅಧಿಕಾರಿಗಳ ಹತ್ತಿರ ಮನವಿ ಮಾಡಿದಾಗ ಸರಕಾರದ ಅಧಿಕಾರಿಗಳು ನಮ್ಮ ಕಡೆಯಿಂದ ಜಿವಿಕೆ ಸಂಸ್ಥೆಯವರಿಗೆ ಸಂಪೂರ್ಣ ಅನುದಾನ ನೀಡಿರುತ್ತೇವೆ. ಹಾಗಾಗಿ ನಮಗೆ ಯಾವುದೇ ಸಂಬಂಧ ಇರುವುದಿಲ್ಲ ಎನ್ನುವ ಉಡಾಫೆ ಉತ್ತರ ನೀಡಲಾಗಿತ್ತು ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಗಳ ಸಂಸಾರಗಳು ಕಷ್ಟದಲ್ಲಿ: ಸಂಸ್ಥೆಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೆ ಸರಕಾರದಿಂದ ಹಣ ಬಂದಿಲ್ಲ ಎಂದು ಹೇಳುತ್ತಿದ್ದು, ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳ ಮಧ್ಯಭಾಗವಾದರೂ ಸಹ ರಾಜ್ಯದ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರನ್ನು ನೋಡಿಕೊಂಡು ಹೋದರೆ ಕರ್ತವ್ಯ ನಿರತ ಸಿಬ್ಬಂದಿಗಳ ಸಂಸಾರಗಳು ಬೀದಿಗೆ ಬರುವ ಪ್ರಸಂಗ ಉದ್ಭವವಾಗುತ್ತದೆ.
ಅನಿವಾರ್ಯ ಕಾರಣಗಳಿಂದ ನ.16ರ ರಾತ್ರಿ 8 ಗಂಟೆಯ ಒಳಗಾಗಿ 3 ತಿಂಗಳ ಸಂಪೂರ್ಣ ವೇತನ ಪಾವತಿ ಆಗದಿದಲ್ಲಿನ. 16ರ ರಾತ್ರಿ 8 ಗಂಟೆಯ ನಂತರ ಎಲ್ಲಾ ಸಿಬ್ಬಂದಿಗಳು ಕರ್ತವ್ಯದಲ್ಲಿ ಇದ್ದುಕೊಂಡು ಯಾವುದೇ ತುರ್ತು ಸೇವೆ ನೀಡದೆ ಆಂಬ್ಯುಲೆನ್ಸ್ ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.