ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಮೂರು ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ವರ್ತಕರು ಸೇರಿದಂತೆ ವಿವಿಧ ವಲಯಗಳ ವ್ಯಾಪಾರಸ್ಥರು ಸಭೆ ನಡೆಸಿ ಜು.1 ರಿಂದ 14ರವರೆಗೇ ಮಧ್ಯಾಹ್ನ 2 ಗಂಟೆಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ವಲಯಗಳ ವ್ಯಾಪಾರಸ್ಥರು ದೂರದ ಎಲ್ಲೋ ಇದ್ದ ಕರೊನಾ ವೈರಸ್ ಸೋಂಕು ಈಗ ನಮ್ಮ ಮನೆಗಳ ಪಕ್ಕಕ್ಕೆ ಬಂದಿದೆ.ನಮ್ಮ ಮನೆಗಳಿಗೂ ಬಾರದಂತೆ ತಡೆಯುವ ಸಲುವಾಗಿ ಅಂಗಡಿ,ಹೋಟೆಲ್ಗಳ ವಹಿವಾಟನ್ನು ಅನಿವಾರ್ಯವಾಗಿ ಬಂದ್ ಮಾಡಲೇ ಬೇಕಿದೆ.ಎಲ್ಲಾ ರೀತಿಯ ವ್ಯಾಪಾರಸ್ಥರು ಅಭಿಪ್ರಾಯವನ್ನು ಗೌರವಿಸಿ ತಾಲ್ಲೂಕು ಮತ್ತು ನಗರಸಭೆ ಆಡಳಿತ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ,ಇಡೀ ತಾಲೂಕಿನಲ್ಲಿ ಇರುವಷ್ಟೇ ಸಂಖ್ಯೆ ಜನ ನಗರದಲ್ಲಿ ವಾಸವಾಗಿದ್ದಾರೆ.ಇಲ್ಲಿ ಕರೊನಾ ವೈರಸ್ ಸೋಂಕು ಹರಡಲು ಆರಂಭವಾದ ಅದನ್ನು ತಡೆಯುವುದು ಕಷ್ಟವಾಗಲಿದೆ.ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಯುವುದು ಸುಲಭದ ಕೆಲಸ.ಆದರೆ ನಗರ ಪ್ರದೇಶದಲ್ಲಿ ಸೋಂಕು ಬೇಗನ ಹರಡಲಿದೆ. ಹೀಗಾಗಿ ಈ ಸೋಂಕು ಹರಡುವುದನ್ನು ತಡೆಯುವುದು ಕಷ್ಟವಾಗಲಿದೆ.ವರ್ತಕರು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಸೇರಿದಂತೆ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸುವುದು ತುರ್ತು ಅಗತ್ಯವಾಗಿದೆ.ಸಭೆಯಲ್ಲಿ ವರ್ತಕರು, ಸಂಘಟನೆಗಳ ಮುಖಂಡರು ತಿಳಿಸಿರುವ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಆದೇಶ ನೀಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಮಾತನಾಡಿ,ನಗರಸಭೆ ವ್ಯಾಪ್ತಿಯಲ್ಲಿನ ಮೂರು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ತಡೆಗೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತವೆ ಎಂದರು.
ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಸರ್ಕಾರದ ಮಾರ್ಗದರ್ಶನದಂತೆ ಕೆಲಸಮಾಡುವುದು ನಮ್ಮ ಇಲಾಖೆಯ ಕರ್ತವ್ಯ. ಆದರೆ ಕೋವಿಡ್-19 ತಡೆಗೆ ಸ್ಥಳೀಯರ ವ್ಯಾಪಾರಸ್ತರು ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂ ಪ್ರೇರಣೆಯಿಂದ ಬಂದ್ ಕೈಗಳ್ಳುವುದಾದರೆ ನಮ್ಮ ಯಾವುದೇ ರೀತಿಯ ಅಡ್ಡಿಯು ಇರುವುದಿಲ್ಲ. ಆದರೆ ನಾವು ಬಲವಂತವಾಗಿ ಬಾಗಿಲು ಮುಚ್ಚಿಸುವುದಿಲ್ಲ ಎಂದರು.
ಸಾರ್ವಜನಿ ಸ್ಥಳದಲ್ಲಿ ಧೂಮಪಾನ ಕ್ರಮ: ಈ ಹಿಂದೆಯ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು, ಗುಟ್ಕ ಉಗುಳುವುದನ್ನು ನಿಷೇಧಿಸಿದೆ. ಅಲ್ಲದೆ ದಂಡ ವಿಧಿಸುವ ಅಧಿಕಾರವನ್ನು ನೀಡಿದೆ. ಈ ನಿಟ್ಟಿನಲ್ಲಿ ಮಂಗಳವಾರದಿಂದಲೇ ಪೊಲೀಸರು, ನಗರಸಭೆ ಅಧಿಕಾರಿಗಳ ತಂಡ ಕಾರ್ಯಾಚರಣೆಯನ್ನು ನಿಯಮಿತವಾಗಿ ಕೈಗೊಂಡು ಗುಟ್ಕ ಮಾರಾಟ, ಸಾರ್ವಜನಿಕ ಸ್ಥಳ ಹಾಗೂ ಹೋಟೆಲ್ಗಳಲ್ಲಿ ಕುಳಿತು ಧೂಮಪಾನ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿವುದು ಎಂದರು.
ನಗರದ ಡಿ.ಕ್ರಾಸ್ ವೃತ್ತದಿಂದ ಪ್ರವಾಸಿ ಮಂದಿರ ವೃತ್ತ ಹಾಗೂ ಎಪಿಎಂಸಿ ಸಮೀಪದ ಹೆದ್ದಾರಿ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಮಾರಾಟ ಹಾಗೂ ಮೀನು, ಮಾಂಸದ ಅಂಗಡಿಗಳನ್ನು ತೆರವು ಮಾಡಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗುವುದು.ಗ್ರಾಹಕರು ವ್ಯಾಪಾರ ವಹಿವಾಟು ನಡೆಸಲು ಹೆದ್ದಾರಿ ಬದಿಯಲ್ಲಿಯೇ ವಾಹನಗಳ ನಿಲುಗಡೆ ಮಾಡುವುದರಿಂದ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕು ಅಡ್ಡಿಯಾಗಿದೆ. ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವವರು ಸಹ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಕೆ ನೀಡಲು ಗಸ್ತು ನಡೆಸುವಂತೆಯು ಸೂಚನೆ ನೀಡಲಾಗುವುದು ಎಂದರು.
ಲಾಕ್ಡೌನ್-ಕರ್ಪ್ಯೂ
ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಜು.5 ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೆ ತರಲು ಸೂಚನೆ ನೀಡಿದೆ. ಔಷಧಿ, ಹಾಲು, ಆಸ್ಪತ್ರೆಯಂತಹ ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಉಳಿದಂತೆ ಯಾವುದು ಇರುವುದಿಲ್ಲ. ಜನ ಅನಾವಶ್ಯಕವಾಗಿ ತಿರುಗಾಡಿದರೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ನಾಲ್ಕು ಶನಿವಾರಗಳು ಸಹ ಸರ್ಕಾರಿ ಕಚೇರಿಗಳು ರಜೆ ಇರಲಿವೆ. ಆದರೆ ಲಾಕ್ಡೌನ್ ಇರುವುದಿಲ್ಲ ಎಂದರು.
ನಾಳೆಯಿಂದಲೇ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆವರೆಗೆ ಪೂರ್ಣ ಪ್ರಮಾಣದ ರಾತ್ರಿ ಕರ್ಪ್ಯೂ ಜಾರಿಯಲ್ಲಿ ಇರಲಿದೆ.ಈ ಸಂದರ್ಭದಲ್ಲಿ ಹೋಟಲ್, ಡಾಬಾ,ಬಾರ್ ಸೇರಿದಂತೆ ಎಲ್ಲವು ಸಹ ಬಂದ್ ಆಗಿರಲಿವೆ. ಜನರು ಸಹ ತಿರುಗಾಡುವಂತಿಲ್ಲ. ಈ ಹಿಂದೆ 28 ದಿನಗಳವರೆಗೆ ಕಂಟೈನ್ಮೆಂಟ್ ಪ್ರದೇಶದ ನಿಯಮ ಜಾರಿಯಲ್ಲಿ ಇತ್ತು. ಈಗ 14 ದಿನಗಳವರೆಗೆ ಮಾತ್ರ ಯಾವುದೇ ಒಂದು ಪ್ರದೆಶವನ್ನು ಕಂಟೈನ್ಮೆಂಟ್ ಮಾಡಲಾಗುವುದು ಎಂದು ಹೇಳಿದರು.
ಸಂಘಟನೆಗಳ ಸಭೆ: ಲಾಕ್ಡೌನ್ ತೆರವಿನ ನಂತರ ತಾಲ್ಲುಕು ಸೇರಿದಂತೆ ಎಲ್ಲಾ ಕಡೆಯಲ್ಲೂ ಸಹ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಗುಂಪು ಸೇರಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಸಹ ಇದೆ. ಆದರೆ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸದೆ ಕಡಿಮೆ ಸಂಖ್ಯೆಯಲ್ಲಿ ಅಂತರ ಕಾಪಾಡಿಕೊಂಡು ಸಭೆಗಳನ್ನು ನಡೆಸಬೇಕು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದು ಡಿವೈಎಸ್ಪಿ ಟಿ.ರಂಗಪ್ಪ ಹೇಳಿದರು.
ಈ ವೇಳೆ ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್, ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಇದ್ದರು.