ದೊಡ್ಡಬಳ್ಳಾಪುರ: ಕೊವಿಡ್-19 ಕಾರಣದಿಂದಾಗಿ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರು ಸಂಕಷ್ಟದಲ್ಲಿರುವಾಗ,ಶಿಕ್ಷಕರ ನೆರವಿಗೆ ಬಾರದೇ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಆರಂಭಿಸಲು ಹೊರಟಿರುವ ಶಿಕ್ಷಣ ಸಚಿವರಿಗೆ ಯಾವುದೇ ನೈತಿಕತೆ ಇಲ್ಲ.ಸರ್ಕಾರ ಶಿಕ್ಷಕರಿಗೆ ಆರ್ಥಿಕ ನೆರವು ಹಾಗೂ ವೈದ್ಯಕೀಯ ಪ್ಯಾಕೇಜ್ ನೀಡದಿದ್ದರೆ ಶಿಕ್ಷಕರು ಮೌಲ್ಯ ಮಾಪನ ಬಹಿಷ್ಕಾರದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಶಿಕ್ಷಕರ ಮತ್ತು ಆಡಳಿತ ಮಂಡಲಿ ಫೋರಂ, ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊವಿಡ್-19 ಲಾಕ್ಡೌನ್ ಕಾರಣದಿಂದಾಗಿ ಬಹಳಷ್ಟು ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ 3 ತಿಂಗಳಿನಿಂದ ಸಂಬಳ ನೀಡದೇ ಇರುವುದರಿಂದ ಶಿಕ್ಷಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಹಠಕ್ಕೆ ಬಿದ್ದು ನಡೆಸಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿಯೇ ಪರೀಕ್ಷೆ ಎದುರಿಸಿದ್ದಾರೆ. ಶಿಕ್ಷಕರ ನೆರವಿಗೆ ಬಾರದ ಸರ್ಕಾರ ಎಸ್ಎಸ್ಎಲ್ಸಿ ಮೌಲ್ಯ ಮಾಪನ ಮಾಡುವಂತೆ ಆದೇಶಿಸಿರುವುದು ಎಷ್ಟು ಸರಿ. ಇತ್ತೀಚೆಗೆ ನಡೆದ ಪಿಯುಸಿ ಮೌಲ್ಯಮಾಪನದ ವೇಳೆ ನೂರಾರು ಕಿ.ಮೀ ದೂರದಿಂದ ಬೆಂಗಳೂರಿಗೆ ಉಪನ್ಯಾಸಕರು ಆಗಮಿಸಿದ್ದರು. ಈಗ ಎಸ್ಎಸ್ಎಲ್ಸಿ ಮೌಲ್ಯಮಾಪನ ಮಾಡಲು ನೂರಾರು ಶಿಕ್ಷಕರು ಸೇರುತ್ತಾರೆ. ಆದರೆ ಶಿಕ್ಷಕರಿಗೆ ಯಾವುದೇ ವೈದ್ಯಕೀಯ ಭದ್ರತೆ ಇಲ್ಲ. ಶಾಲಾ ಶಿಕ್ಷಕರಿಗೆ ಈ ವೇಳೆ ಕೊವಿಡ್-19 ಸೋಂಕು ತಗುಲಿದರೆ ಯಾರು ಹೊಣೆ ? ಎಂದರು.
ಖಾಸಗಿ ಶಾಲೆಗಳಿಗೆ ಸರ್ಕಾರ ಬಾಕಿ ಇರಿಸಿಕೊಂಡಿರುವ ಸುಮಾರು 1025 ಕೋಟಿ ಆರ್.ಟಿ.ಇ ಹಣವನ್ನು ಕೂಡಲೇ ಬಿಡುಗಡೆ ಮಾಡಿದರೆ ಶಾಲೆಗಳಿಗೆ ಸಹಕಾರಿಯಾಗುತ್ತದೆ. ಶಿಕ್ಷಕರಿಗೆ ಈ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಶಿಕ್ಷಕರಿಗೆ ವೈದ್ಯಕೀಯ ವಿಮೆ ಒದಗಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮೌಲ್ಯಮಾಪನ ಬಹಿಷ್ಕಾರ..?
ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರೀ 4.5 ಸಾವಿರ ರೂಗಳ ಸಂಬಳಕ್ಕೆ ದುಡಿಯುತ್ತಿದ್ದಾರೆ. ಖಾಸಗಿ ಆಡಳಿತ ಮಂಡಲಿಗಳು ಶಿಕ್ಷಕರಿಗೆ ಸಂಬಳ ನೀಡದೇ ಶಿಕ್ಷಕರು ಅನ್ಯ ಉದ್ಯೋಗಗಳತ್ತ ತೆರಳಬೇಕಿದೆ. ಆದರೆ ಸರ್ಕಾರಿ ಶಾಲೆಯ ಶಿಕ್ಷಕರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಬೇಕು.
ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ದಿಸೆಯಲ್ಲಿ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಹಾಗೂ ವೈದ್ಯಕೀಯ ವಿಮೆಯ ಬೇಡಿಕೆಗಳು ಈಡೇರದಿದ್ದರೆ ಜುಲೈ 13ರಂದು ನಡೆಯಲಿರುವ ಎಸ್ಎಸ್ಎಲ್ಸಿ ಮೌಲ್ಯ ಮಾಪನ ಕಾರ್ಯವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಸುಮಾರು 2.5 ಲಕ್ಷ ಶಿಕ್ಷಕರಿದ್ದು, ಒತ್ತಡಕ್ಕೆ ಮಣಿದ ಕೆಲವಷ್ಟು ಶಿಕ್ಷಕರನ್ನು ಹೊರತುಪಡಿಸಿ ಬಹಳಷ್ಟು ಶಿಕ್ಷಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶಿಕ್ಷಕರ ಮತ್ತು ಆಡಳಿತ ಮಂಡಲಿ ಫೋರಂ ಕಾರ್ಯದರ್ಶಿ ಸೂಡಿ ಸುರೇಶ್, ಜಂಟಿ ಕಾರ್ಯದರ್ಶಿ ಟಿ.ಕೆ.ನರಸೇಗೌಡ, ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೋಹನ್ ನಾಯಕ್, ಪ್ರಧಾನ ಸಂಚಾಲಕ ದಾದಾಪೀರ್ ಭಾಗವಹಿಸಿದ್ದರು.