ದೊಡ್ಡಬಳ್ಳಾಪುರ: ಕರ್ನಾಟಕ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ-2020ರ ಸಂಬಂಧ ಮತದಾನವು ದಿನಾಂಕ: 28/10/2020 ರಂದು ಬೆಳಿಗ್ಗೆ 8:00 ರಿಂದ ಸಂಜೆ 5:00 ಗಂಟೆಯವರೆಗೂ ನಡೆಯಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 4 ತಾಲ್ಲೂಕುಗಳ ಒಟ್ಟು 17 ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸಲಿದ್ದು, ಮತದಾನವು ಶಾಂತಿ, ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಮತದಾನ ಅಂತ್ಯಗೊಳ್ಳುವುದಕ್ಕೆ ನಿಗದಿಪಡಿಸಿರುವ ಅವಧಿಯು 48 ಗಂಟೆಗಳ ಪೂರ್ವದಲ್ಲಿ ಅಂದರೆ ದಿನಾಂಕ: 26/10/2020 ರ ಸಂಜೆ 5:00 ಗಂಟೆಯಿಂದ ದಿನಾಂಕ: 28/10/2020 ರ ಸಂಜೆ 5:00 ಗಂಟೆಯವರೆಗಿನ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಮತದಾರರು ನಿರ್ಭೀತವಾಗಿ ಮತದಾನ ಮಾಡಲು ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದ ವಾತಾವರಣ ಕಲ್ಪಿಸಲು ಪ್ರಜಾ ಪ್ರತಿನಿಧಿ ಕಾಯ್ದೆ, 1951ರ ಕಲಂ 126 ಮತ್ತು 126ಎ ಗಳ ಅನ್ವಯ ಕ್ರಮ ಕೈಗೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ:26/10/2020 ರ ಸಂಜೆ 5:00 ರಿಂದ ಮತದಾನ ನಡೆಯುವ ದಿನಾಂಕ 28/ 10/2020 ರ ಸಂಜೆ 5:00 ಗಂಟೆಯವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಯಾವುದೇ ಮತ ಕ್ಷೇತ್ರಗಳಲ್ಲಿ ಯಾವುದೇ ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆ ನಡೆಸುವುದಾಗಲೀ, ಮೆರವಣಿಗೆ ಮಾಡುವುದಾಗಲಿ, ಯಾವುದೇ ಸಭೆ ಸಮಾರಂಭಗಳನ್ನು ಆಯೋಜಿಸುವುದಾಗಲೀ ಹಾಗೂ ಯಾವುದೇ ಸಭೆಗೆ ಹಾಜರಾಗುವುದಾಗಲೀ ನಿರ್ಬಂಧಿಸಿದೆ ಹಾಗೂ ಎಲ್ಲಾ ಬಹಿರಂಗ ಪ್ರಚಾರಗಳನ್ನು ನಿಷೇಧಿಸಿದೆ.
ಎಲ್ಲಾ ರಾಜಕೀಯ ಪಕ್ಷಗಳಿಂದ ಹಾಗೂ ಅಭ್ಯರ್ಥಿಗಳಿಂದ ಯಾವುದೇ ಪ್ರಚಾರ ಕೈಗೊಳ್ಳಲು ನಿರ್ಬಂಧಿಸಿದೆ. ಆದರೆ 5 ಜನರಿಗೆ ಸೀಮಿತಗೊಳಿಸಿ ಮನೆ ಮನೆ ಭೇಟಿ ನೀಡಿ ಪ್ರಚಾರಕ್ಕೆ ಮಾತ್ರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಪಕ್ಷದ ಕಾರ್ಯಕರ್ತರು, ಪ್ರಚಾರ ಮತ್ತು ಸಭೆಗಳನ್ನು ನಿರ್ವಹಿಸುವವರು ಮುಂತಾದವರು, ಹೊರಗಿನ ಕ್ಷೇತ್ರದವರು, ಕ್ಷೇತ್ರದ ಮತದಾರರಲ್ಲದವರು ಯಾರೂ ಸಹ ಕ್ಷೇತ್ರದ ವ್ಯಾಪ್ತಿಯ ಒಳಗೆ ಇರತಕ್ಕದ್ದಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕರಿಗೆ ಸಿನಿಮಾ, ದೂರದರ್ಶನ ಹಾಗೂ ಇತರೆ ಮಾಧ್ಯಮಗಳ ಮೂಲಕ ಅಂದರೆ ಮೊಬೈಲ್, ರೇಡಿಯೋ ಹಾಗೂ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ರಾಜಕೀಯ ಚರ್ಚೆಗಳು, ವಿಶ್ಲೇಷಣೆ, ದೃಶ್ಯ ಅಥವಾ ಆಡಿಯೋ ಬೈಟ್ ಗಳನ್ನು ಪ್ರಚಾರ ಮಾಡತಕ್ಕದ್ದಲ್ಲ.
ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ಮನೋರಂಜನಾ ಕಾರ್ಯಕ್ರಮಗಳಾದ ನಾಟಕ, ಆರ್ಕೆಸ್ಟ್ರಾ, ಸಂಗೀತ ಸಂಜೆ ಹಾಗೂ ಇತರೆ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸತಕ್ಕದ್ದಲ್ಲ.
ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ135ಸಿ ರ ಅನ್ವಯ ದಿನಾಂಕ: 26/10/2020ರ ಸಂಜೆ 5:00 ಗಂಟೆಯಿಂದ ದಿನಾಂಕ: 28/10/2020ರ ಮಧ್ಯರಾತ್ರಿ 12:00 ಗಂಟೆಯವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿರ್ಬಂಧಿಸಿ ಒಣ ದಿನಗಳನ್ನು (ಡ್ರೈ ಡೇಸ್) ಘೋಷಿಸಿದೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಈ ಅವಧಿಯಲ್ಲಿ ಮುಚ್ಚಲು ಆದೇಶಿಸಿದೆ. ಇದಲ್ಲದೇ ಈ ಅವಧಿಯಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕಗಳನ್ನು ಬಳಸತಕ್ಕದ್ದಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

