ಹರಿತಲೇಖನಿ ವಿಶೇಷ ಅಂಕಣವಾದ ” ಬೆತ್ತಲೆ ಸತ್ಯ-ಸುಳ್ಳಿನ ಸೆರಗು ” ಇಂದಿನಿಂದ ಚಿಂತಕ, ಅಂಕಣಕಾರ, ಕನ್ನಡಪರ ಹೋರಾಟಗಾರ ಜಿ.ಎನ್.ಪ್ರದೀಪ್ ಕುಮಾರ್ ಪ್ರತಿ ಶನಿವಾರ ತಮ್ಮ ಮುಂದಿಡಲಿದ್ದಾರೆ.
ನಾನ್ನೂರು ಕೆಜಿ ಸ್ಫೋಟಕದ ಜಾಡು……..ವಾಮಪಂಥೀಯರ ಪ್ರಶ್ನೆಗೆ ಉತ್ತರ….
ಅಂದು ಫೆಬ್ರವರಿ 14 2019. ಜಮ್ಮು ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಭಾರತೀಯ ಸೇನಾ ವಾಹನಗಳಿಗೆ ಸಿನಿಮೀಯ ರೀತಿಯಲ್ಲಿ ಅಡ್ಡಲಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿತ್ತಷ್ಟೇ,. ಆ ಕ್ಷಣ…. ನೋಡನೋಡುತ್ತಿದ್ದಂತೆಯೇ ರಣಭೀಕರ ಸ್ಫೋಟವೊಂದು ಘಟಿಸಿಬಿಟ್ಟಿತ್ತು.
ಈ ಘಟನೆಯಲ್ಲಿ ಭಾರತೀಯ ಸೇನೆಯ ನಲವತ್ತು ಜನ ಯೋಧರು ತಮ್ಮ ಪ್ರಾಣತ್ಯಾಗ ಮಾಡಿದ್ದರು. ಸ್ಫೋಟದ ತೀವ್ರತೆಗೆ ನಮ್ಮ ಯೋಧರ ದೇಹಗಳು ಛಿದ್ರಗೊಂಡು ಮಾಂಸದ ಮುದ್ದೆಗಳಾಗಿ, ರಸ್ತೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಈ ಇಡೀ ಘಟನೆಯ ಸೂತ್ರಧಾರ ನಮ್ಮ ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನ ಎಂಬುದನ್ನು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಂದು ನಡೆದ ದುರ್ಘಟನೆಗೆ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು.. ನಂತರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸಿ, “ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ” ಎಂಬ ಸಂದೇಶದೊಂದಿಗೆ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ರವಾನಿಸಿದ್ದರು. ಇದಾಗಿ ಕೇವಲ ಹನ್ನೆರಡನೇ ದಿನ ಅಂದರೆ ಫೆಬ್ರವರಿ 26 ರಂದು ಪ್ರಧಾನಿಯವರ ನಿರ್ಣಯದಂತೆ ನಮ್ಮ ದೇಶದ ವಾಯುಸೇನೆಯು ಪರಮನೀಚ ಪಾಕಿಸ್ತಾನದೊಳಗೆ ನುಗ್ಗಿ , ಪಾಕಿಸ್ತಾನದ ‘ಅಭಯಹಸ್ತ’ದ ನೆರಳಿನಲ್ಲಿ ಆಶ್ರಯಿಸಿದ್ದ ಬರೋಬ್ಬರಿ ನೂರ ಎಪ್ಪತ್ತಕ್ಕಿಂತಲೂ ಹೆಚ್ಚು ಉಗ್ರರನ್ನು ಸದೆಬಡಿದು ತಾಯಿ ಭಾರತಾಂಬೆಗೆ ರಕ್ತಶಾಂತಿ ಮಾಡಿಸಿ, ಮಡಿದ ಯೋಧರಿಗೆ ಪ್ರತೀಕಾರದ ಶ್ರದ್ಧಾಂಜಲಿ ಅರ್ಪಿಸಿತ್ತು….
ಇದೇನಪ್ಪಾ… ಒಂದು ಮುಕ್ಕಾಲು ವರ್ಷ ಹಿಂದಿನ ಘಟನೆಯನ್ನು ಮತ್ತೇಕೆ ನೆನಪಿಸುತ್ತಿದ್ದಾನೆ ಎಂದು ನೀವೆಲ್ಲರೂ ಅಂದುಕೊಳ್ಳಬಹುದು. ವಿಚಾರ ಇರುವುದು ಇಲ್ಲಿಯೇ…!!!
ಕಳೆದ ವರ್ಷ ಪುಲ್ವಾಮ ದುರಂತ ನಡೆದದ್ದು, ಭಾರತದ ಸಂಸತ್ ಚುನಾವಣೆ ಇನ್ನು ಕೇವಲ ಎರಡೂವರೆ ತಿಂಗಳು ಬಾಕಿ ಇರುವಾಗ…
ನಮ್ಮ ದೇಶದಲ್ಲಿ 2014 ರಿಂದೀಚೆಗೆ (ಹಿಂದೆಯೂ ಹಲವಾರು ದೇಶದ್ರೋಹಿ ಘಟನೆಗಳು ನಡೆದಾಗ ಅವುಗಳನ್ನು ಆರ್ಎಸ್ಎಸ್ ಮತ್ತು ಬಿಜೆಪಿಯ ಮೇಲೆ ಎತ್ತಿಕಟ್ಟುವ ವಿಫಲ ಯತ್ನಗಳು ನಡೆದಿವೆ) ಯಾವ ಘಟನಾವಳಿ ನಡೆದರೂ *ಸರ್ವಾನಿಷ್ಠಕ್ಕೆಲ್ಲಾ ಶನೇಶ್ವರನೇ ಕಾರಣ* ಎಂಬಂತೆ ನರೇಂದ್ರ ಮೋದಿಯವರ ಮೇಲೆ ಗೂಬೆ ಕೂರಿಸುವ ಭಗೀರಥ ಪ್ರಯತ್ನ ನಡೆಸುವ ಒಂದು ದೊಡ್ಡವರ್ಗವೇ ಇದೆ. ಅದೇ ವಾಮಪಂಥೀಯ ವರ್ಗ.
ಈ ವಾಮಪಂಥೀಯ ವರ್ಗದ ರಾಜಕೀಯ ಅಪ್ಪ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಹಾಗೂ ಅಮ್ಮ ಎನಿಸಿಕೊಂಡಿರುವ ಕಮ್ಯುನಿಸ್ಟ್ ಪಕ್ಷಗಳು ಪುಲ್ವಾಮಾ ದುರಂತವನ್ನು ರಾಜಕೀಯ ದೃಷ್ಠಿಕೋನದಲ್ಲಿರಿಸಿ, “ಕುಕೃತ್ಯಕ್ಕೆ ಬಳಸಿದ ಬರೋಬ್ಬರಿ ನಾನ್ನೂರು ಕೆಜಿ ಸ್ಫೋಟಕ ನಮ್ಮ ದೇಶದೊಳಗೆ ಉಗ್ರರ ಕೈಗೆ ಸಿಕ್ಕಿದ್ದಾದರೂ ಹೇಗೆ!!?
ಇದರ ಹಿಂದೆ ನರೇಂದ್ರ ಮೋದಿಯವರ ಕೈವಾಡ ಇದೆ. ಮೋದಿಯವರು ನೇರವಾಗಿ ಚುನಾವಣೆಯನ್ನು ಎದುರಿಸಲಾಗದೇ ಪುಲ್ವಾಮ ದಾಳಿಯ ಯೋಜನೆ ರೂಸಿಸಿ, ಯೋಧರ ಶವಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿಯೇ ಬಿಟ್ಟಿತು.
ಇದರ ಬಗ್ಗೆ ಸಂಸತ್ನಲ್ಲಿಯೂ ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಪರ-ವಿರೋಧ ವಾಗ್ಯುದ್ಧಗಳಾದವು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ವಾಯುದಾಳಿಯಾದ ಮೇಲೆ ಈ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾದರೂ…. ಪುಲ್ವಾಮಾ ದಾಳಿಗೆ ಉಗ್ರರು ಬಳಸಿದ ನಾನ್ನೂರು ಕೆಜಿ ಸ್ಫೋಟಕ ದೇಶದೊಳಗೆ ಬಂದದ್ದಾದರೂ ಹೇಗೆ ಎಂಬ ಯಕ್ಷ ಪ್ರಶ್ನೆ ವಾಮಪಂಥೀಯ ವರ್ಗಕ್ಕೆ ಕಾಡುತ್ತಿತ್ತು.
ಪಾಪ… ಆರು ದಶಕಗಳ ಕಾಲ ತಮ್ಮ ನೇತಾರರು ದೇಶವನ್ನು ಲೂಟಿ ಹೊಡೆದದ್ದು ಹೇಗೆ ಎಂಬುದರ ಅರಿವೂ ಸಹ ಇಲ್ಲದ ಆ ವರ್ಗಕ್ಕೆ , ಹಲವು ವರ್ಷಗಳ ಹಿಂದೆ ತಮ್ಮದೇ ನೇತಾರರ ಆಡಳಿತದ ಅವಧಿಯಲ್ಲಿ ಮುಂಬೈನ ತಾಜ್ ವರೆಗೆ, ಬೆಂಗಳೂರಿನ ಚರ್ಚ್ ಸ್ಟ್ರೀಟ್ ವರೆಗೆ, ಮಲೆಗಾಂವ್ ವರೆಗೆ , ಬೋಧ್ಗಯಾ ವರೆಗೆ ಪಾಕಿಸ್ತಾನದ ಉಗ್ರರು ಹೇಗೆ ನುಗ್ಗಿದರು ಎಂಬ ಅರಿವೂ ಸಹ ಇಲ್ಲದ ಆ ವರ್ಗಕ್ಕೆ, ನಾನ್ನೂರು ಕೆಜಿ ಸ್ಫೋಟಕ ಪಾಕಿಸ್ತಾನದ ಮಾರ್ಗವಾಗಿ ತಮ್ಮ ಚಿಕ್ಕಪ್ಪಂದಿರು ಆಳುತ್ತಿದ್ದ ( 370 ಆರ್ಟಿಕಲ್ ಸಹಿತ) ಕಾಶ್ಮೀರಕ್ಕೆ ಹೇಗೆ ಬಂತು ಎಂಬ ಅರಿವಿಲ್ಲದಿರುವುದು ಸಹಜವೇ ಸರಿ…..!!!!?
ಒಂದೂಮುಕ್ಕಾಲು ವರ್ಷಗಳ ಬಳಿಕ ಅಂದಿನ ಪುಲ್ವಾಮ ಕುಕೃತ್ಯವನ್ನು ಇಂದು ಪಾಕಿಸ್ತಾನದ ಸಚಿವನೊಬ್ಬ ಅಲ್ಲಿನ ಸಂಸತ್ನಲ್ಲಿ ಅಧಿಕೃತವಾಗಿ ವಿಕೃತ ಸಂತಸದೊಂದಿಗೆ ಒಪ್ಪಿಕೊಂಡಿದ್ದಾನೆ…
ಈಗ ನಮ್ಮ ದೇಶದ ವಾಮಪಂಥೀಯ ವರ್ಗದ ಅತೃಪ್ತ ಆತ್ಮಗಳ “ಯಕ್ಷಪ್ರಶ್ನೆ” ಗೆ ಅವರದ್ದೇ ದೃಷ್ಟಿಯಲ್ಲಿ ಸ್ವರ್ಗವೆನಿಸಿರುವ ಪಾಕಿಸ್ತಾನದ ಸರ್ಕಾರದ ಭಾಗವೆನಿಸಿರುವ ಸಚಿವನೇ ಬಹಿರಂಗವಾಗಿ “ಉತ್ತರ” ನೀಡಿದ್ದಾನೆ. *ಬೆತ್ತಲೆ ಸತ್ಯಕ್ಕೆ ಸುಳ್ಳಿನ ಸೆರಗು* ಮುಚ್ಚುವ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ವಿಫಲ ಪ್ರಯತ್ನಗಳು ಜಗಜ್ಜಾಹೀರಾಗಿರುವ ಎಷ್ಟೋ ಅಧ್ಯಾಯಗಳ ಮುಂದುವರಿದ ಭಾಗ ಇದಾಗಿದೆ…
ಕೊನೆಯಲ್ಲಿ ಒಂದು ಮಾತು…ಯೋಧರ ಶವಗಳ ಮೇಲೆ ರಾಜಕಾರಣ ಮಾಡುವ ಅಗತ್ಯ ಮೋದಿಯವರಿಗಿದ್ದಿದ್ದರೆ, ಬಾಲಾಕೋಟ್ ವಾಯುದಾಳಿಯ ಅವಶ್ಯಕತೆ ಅವರಿಗೆ ಇರುತ್ತಿರಲಿಲ್ಲ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಜೆಗಳು ಪ್ರಜ್ಞಾವಂತರಿದ್ದಾರೆ. ರಾಷ್ಟ್ರದ ಪ್ರತಿಯೊಂದು ವಿದ್ಯಮಾನಗಳನ್ನು ಕೂಲಂಕಷವಾಗಿ ಗಮನಿಸುತ್ತಿದ್ದಾರೆ. ಆ ಕಾರಣದಿಂದಲೇ ಮೋದಿಯವರು ಎರಡನೇ ಬಾರಿಗೆ ಸ್ವತಂತ್ರ ಬಹುಮತದೊಂದಿಗೆ ಸರ್ಕಾರ ರಚಿಸಿದ್ದು….
ದೇಶದ ಅತ್ಯಂತ ಪ್ರಾಚೀನ ರಾಜಕೀಯ ಪಕ್ಷವೊಂದು ಮೂರಂಕಿಯಿಂದ ಎರಡಂಕಿಗೆ ಇಳಿದು, ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದ್ದು……. ಜೊತೆಗೆ ಕಮ್ಯುನಿಸ್ಟ್ ಪಕ್ಷ ಅವನತಿಯತ್ತ ಸಾಗುತ್ತಿರುವುದು…….
ಜಿ.ಎನ್.ಪ್ರದೀಪ್

