ದೊಡ್ಡಬಳ್ಳಾಪುರ: ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ದೇವರಾಜು ಅವರು ದೂರು ದಾಖಲಿಸಿದ್ದಾರೆ.
ಉಪನೋಂದಣಾಧಿಕಾರಿಗಳು ನೀಡಿರುವ ದೂರಿನಲ್ಲಿ ಇರುವ ಪ್ರಮುಖ ಆರೋಪಿಗಳು ಬಿ.ಎ.ಪ್ರಸನ್ನಕುಮಾರ್, ಗೌರಮ್ಮ, ಅಣ್ಣಯ್ಯಪ್ಪ, ಪಿಳ್ಳಮ್ಮ,ಲಕ್ಷ್ಮಮ್ಮ,ಮಂಜುನಾಥ್,ಬಸವರಾಜ್,ಉಮೇಶ್, ಸಂತೋಷ್, ನಾಗರಾಜ್ ಸೇರಿದಂತೆ ಒಟ್ಟು 14 ಜನರ ಹೆಸರುಗಳು ಇವೆ.
ದೇವನಹಳ್ಳಿ ತಾಲ್ಲೂಕಿನ ಚಿಕ್ಕಜಾಲದ ಕಾಡಿಗಾನಹಳ್ಳಿ ಗ್ರಾಮದ ಸರ್ವೇ ನಂಬರ್ 11/1, ದೊಡ್ಡಬಳ್ಳಾಪುರ ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದ ಸರ್ವೇ ನಂಬರ್ 26/1, ಅರಳುಮಲ್ಲಿಗೆ ಗ್ರಾಮದ ಸರ್ವೇ ನಂಬರ್ 307/1, ಕುಕ್ಕನಹಳ್ಳಿ ಗ್ರಾಮದಲ್ಲಿ ಏಳು ಎಕರೆ ಜಮೀನಿಗೆ ನಕಲಿ ಪತ್ರಗಳನ್ನು ಸೃಷ್ಠಿಸಿದ್ದಾರೆ.
ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿನ ಬುಕ್ -01,2120/1987-88 ನಂಬರಿನ ದಾನಪತ್ರ, ಬುಕ್-01,2586/1991-92 ನಂಬರಿನ ಕ್ರಯಪತ್ರ, ಬುಕ್ ನಂಬರ್ 01-2276/1991-92 ಬಂಬರಿನ ದಾನಪತ್ರ, ಬುಕ್-012587/1991-92 ನಂಬರಿನ ಹಕ್ಕು ನಿವೃತ್ತಿ ಪತ್ರ,ಬುಕ್-01, 2588/1991-92 ನಂಬರಿನ ಹಕ್ಕು ನಿವೃತ್ತಿ ಪತ್ರಗಳು ನಮ್ಮ ಕಚೇರಿಯ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ಕಂಡುಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಭೂಮಿ ಖರೀದಿದಾರರಲ್ಲಿ ತಲ್ಲಣ: ಉಪನೊಂದಣಾಧಿಕಾರಿಗಳಿಂದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ತಾಲ್ಲೂಕಿನಲ್ಲಿ ಜಮೀನು ಖರೀದಿಸಿರುವವರು ತಮ್ಮ ಜಮೀನಿನ ದಾಖಲೆಗಳ ನೈಜ್ಯತೆಯ ಬಗ್ಗೆ ಅನುಮಾನ ಪಡುವಂತಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರಿಗೆ ಸಮೀಪ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಬಹುತೇಕ ಜನ ಉದ್ಯಮಿಗಳು ಸೇರಿದಂತೆ ವಿವಿಧ ವಲಯದಲ್ಲಿ ಹಣ ಉಳಿತಾಯ ಮಾಡಿರುವ ಬಹುತೇಕ ಮಂದಿ ಜಮೀನುಗಳನ್ನು ಖರೀದಿಸಿದ್ದಾರೆ. ಈಗಷ್ಟೇ ಈ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಜಮೀನಿನ ದಾಖಲೆಗಳ ನೈಜ್ಯತೆ ಕುರಿತಂತೆ ಪರಿಶೀಲಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಬರತೊಡಗಿದ್ದಾರೆ.
ಸರ್ಕಾರದ ವಿಳಂಬ ನೀತಿಯೇ ಕಾರಣ: ತಾಲ್ಲೂಕು ಕಚೇರಿಯಲ್ಲಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಶತಮಾನಗಳಷ್ಟು ಹಳೇಯ ವರ್ಷಗಳ ಎಲ್ಲಾ ರೀತಿಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ 2011ರಲ್ಲಿಯೇ ಸ್ಕ್ಯಾನ್ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೂ ಈ ದಾಖಲೆಗಳು ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡದೇ ಇರುವ ಸರ್ಕಾರದ ವಿಳಂಬ ನೀತಿಯೇ ಭೂ ದಾಖಲೆಗಳಲ್ಲಿ ಅಕ್ರಮವಾಗಲು ಕಾರಣವಾಗಿದೆ. ಅದರಲ್ಲು ಬೆಂಗಳೂರು ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗಿರುವ ಹಿನ್ನೆಯಲ್ಲಿ ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಇವೆ. ಅಲ್ಲದೆ ಸಾಮಾನ್ಯ ಜನ ಭೂ ದಾಖಲೆಗಳನ್ನು ಪಡೆಯಲು ತಾಲ್ಲೂಕು ಕಚೇರಿಗೆ ಹತ್ತಾರು ಬಾರಿ ಅಲೆದಾಡಿ ಹಣ ಖರ್ಚು ಮಾಡಿದರು ಸಹ ದೊರೆಯುವುದು ಕಷ್ಟವಾಗಿದೆ. ಈಗಲಾದರು ಸರ್ಕಾರ ಸ್ಕ್ಯಾನ್ ಮಾಡಲಾಗುವ ಎಲ್ಲಾ ಭೂ ದಾಖಲೆಗಳು ಆನ್ಲೈನ್ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)

