ಬೆಂ.ಗ್ರಾ.ಜಿಲ್ಲೆ: ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ, ಬಿತ್ತನೆ ಬೀಜಗಳು, ಕ್ರಿಮಿನಾಶಕ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳು ಹಾಗೂ ಪರಿಕರಗಳ ಕುರಿತು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿಂದು ನಡೆದ ಕೃಷಿ ಪರಿಕರಗಳ ಉಸ್ತುವಾರಿ ಸಮಿತಿ, ಕೃಷಿ ಅಭಿಯಾನ ಸಮಿತಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿಗಳ ಸಣ್ಣ ಕೃಷಿ ಸಂಸ್ಕರಣೆ ಉದ್ದಿಮೆದಾರರ ನಿಯಮಿತಗೊಳಿಸುವ ಯೋಜನೆ ಮತ್ತು ಕೃಷಿ ಅಭಿಯಾನ ಸಮಿತಿ ಚರ್ಚೆಗಳನ್ನೊಳಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಪರಿಕರಗಳನ್ನು ಒಳಗೊಂಡಂತೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಔಷಧಿಗಳನ್ನು ಬಳಸಿಕೊಂಡು ಯಾವ ಯಾವ ಋತುಮಾನದಲ್ಲಿ ವ್ಯವಸಾಯ ಮಾಡಬೇಕು ಎಂಬುದರ ಮಾಹಿತಿಯನ್ನು ನೀಡಬೇಕು ಎಂದರಲ್ಲದೆ, ಇದೀಗ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಮಾಸ್ಟರ್ ಡೇಟಾದ ಬಗ್ಗೆ ಪ್ರಚಾರ ನೀಡಬೇಕು ಹಾಗೂ ರಸಗೊಬ್ಬರವನ್ನು ಎಷ್ಟು ವರ್ಷಗಳ ಕಾಲ ದಾಸ್ತಾನು ಮಾಡಬಹುದು ಎಂದು ಅಧಿಕಾರಿಗಳು ತಿಳಿದಿರಬೇಕು ಎಂದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೊಳಪಟ್ಟ ರೈತರು ಅರ್ಜಿ ಸಲ್ಲಿಸಿದರೆ, ಶೀಘ್ರವೇ ಪರಿಹಾರವನ್ನು ನೀಡಲಾಗುತ್ತದೆ ಎಂದರು.
ಉತ್ತಮ ಮಳೆಯಿಂದಾಗಿ ರಾಗಿ ಬೆಳೆಯು ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಿನ ಫಸಲನ್ನು ಪಡೆಯಲಾಗಿದೆ ಎಂದು ಹೇಳಿದರು.
ರೈತರಿಗೆ ಅನುಕೂಲವಾಗುವ ಯೋಜನೆಗಳು, ಬ್ಯಾಂಕಿನಲ್ಲಿ ಒದಗುವ ಸಾಲ ಸೌಲಭ್ಯ, ರಸಗೊಬ್ಬರಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದ್ದು, ರೈತರಿಗೆ ಉಪಯೋಗವಾಗುವ ಮಾಹಿತಿಗಳನ್ನು ಸ್ಥಳೀಯ ಮಟ್ಟದಲ್ಲಿ ಕರಪತ್ರ, ದೂರದರ್ಶನ ಹಾಗೂ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ನೀಡುವಂತೆ ತಿಳಿಸಿದರು.
ಪ್ರತಿ ಬೆಳೆಗಳಿಗೆ ಅನುಗುಣವಾಗಿ ಸಾಲ ಒದಗಿಸಲಾಗುತ್ತಿದ್ದು, ರೈತರು ಇನ್ಶೂರೆನ್ಸ್ ಮಾಡಿಸಲು ಸಂಬಂಧಪಟ್ಟಂತಹ ದಾಖಲೆಗಳಾದ ಬೆಳೆ ದೃಢೀಕರಣ ಪತ್ರ, ಭೂ ದಾಖಲೆ, ಪಹಣಿ, ಕಂದಾಯ ರಶೀದಿ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ನೀಡಬೇಕು ಎಂದರು.
ರೈತರಿಗೆ ಕಳಪೆ ಮಟ್ಟದ ರಸಗೊಬ್ಬರ ಮಾರಾಟ ಮಾಡುವ ರಸಗೊಬ್ಬರಗಳ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಿ, ರೈತರಿಗೆ ಪರಿಹಾರಧನವನ್ನು ಒದಗಿಸುವ ಕಾರ್ಯವಾಗಬೇಕು ಎಂದರಲ್ಲದೆ, ಪರವಾನಿಗೆ ಇಲ್ಲದೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ ಅವರು ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಗೆ ಆದ್ಯತೆ ನೀಡಬೇಕು ಹಾಗೂ ರೈತರಿಗೆ ಕೃಷಿ ಅಭಿಯಾನದಡಿ ಇರುವ ಕಾರ್ಯಕ್ರಮಗಳ ಕುರಿತು ಅಗತ್ಯ ಪ್ರಚಾರ ಮಾಡಬೇಕು ಎಂದರು.
ರೈತರು ಹಾಗೂ ಕೃಷಿ ವಿಜ್ಞಾನಿಗಳ ಜೊತೆ ಸಂವಾದ ನಡೆಸಿ, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರಲ್ಲದೆ, ರೈತರಿಗೆಂದೇ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಂತ್ರಾಂಶಗಳು ಇದ್ದು ಇದರ ಅನುಕೂಲವನ್ನು ರೈತರು ಪಡೆಯುವಂತೆ ತಿಳಿಸಬೇಕು ಎಂದು ಹೇಳಿದರು.
“ಒಂದು ಜಿಲ್ಲೆ, ಒಂದು ಉದ್ಯಮ” ಯೋಜನೆಯಡಿಯಲ್ಲಿ ಜಿಲ್ಲೆಗೆ ಕುಕ್ಕುಟ(ಪೌಲ್ಟ್ರಿ) ಉದ್ಯಮ ಮಾಡುವವರಿಗೆ ತರಬೇತಿ ನೀಡಬೇಕು ಹಾಗೂ ಬ್ಯಾಂಕುಗಳು ಹಣಕಾಸು ಸೌಲಭ್ಯ ಕಲ್ಪಿಸಬೇಕು ಎಂದರು.
ಹಾಗೂ ಸಣ್ಣ ಉದ್ದಿಮೆ ಮಾಡುವವರು 10ಕ್ಕಿಂತ ಕಡಿಮೆ ಜನ ಹೊಂದಿದ್ದು, 18 ವರ್ಷ ಮೇಲ್ಪಟ್ಟ, ಕನಿಷ್ಠ ಎಂಟನೇ ತರಗತಿಯನ್ನು ಪೂರ್ಣಗೊಳಿಸಿರುವ ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ರೈತರು ಯಾವ ಬೆಳೆಗಳಿಗೆ ಯಾವ ರಸಗೊಬ್ಬರ ಹಾಕಬೇಕು, ಮಣ್ಣಿನ ಫಲವತ್ತತೆ ಪರೀಕ್ಷೆ ನಡೆಸುವುದು ಸಹ ಅಗತ್ಯವಾಗಿದೆ ಎಂದರು.
ಮುಖ್ಯ ಬೆಳೆಗಳಾದ ರಾಗಿ, ತೊಗರಿ, ದ್ರಾಕ್ಷಿ, ಮಾವು ಮುಂತಾದ ಬೆಳೆಗಳಿಗೆ ಯಾವ ರೀತಿಯ ರಸಗೊಬ್ಬರಗಳ ಬಳಸಬೇಕೆಂದು ರೈತರಿಗೆ ತಿಳಿಸಿಕೊಡಬೇಕು ಹಾಗೂ ಕೃಷಿ ಅಭಿಯಾನದಡಿ ಇಲಾಖೆಗಳು ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಸಭೆಯ ನಂತರದಲ್ಲಿ ರೈತರು ಬಳಸಬಹುದಾದಂತಹ ವಿವಿಧ ರಸಗೊಬ್ಬರಗಳ ಮಾಹಿತಿ ಒಳಗೊಂಡ ಕರಪತ್ರಗಳನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಉಪ ವಿಭಾಗಾಧಿಕಾರಿ ಅರುಳ್ಕುಮಾರ್, ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ಕೃಷಿ ಉಪ ನಿರ್ದೇಶಕಿ ವಿನುತಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರುಗೋಡು, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಎನ್.ನಾಗರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪುಷ್ಪಾ.ಜಿ.ರಾಯರ್, ಲೀಡ್ ಬ್ಯಾಂಕ್ನ ವ್ಯವಸ್ಥಾಪಕ ಮಧುಸೂದನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಮಾರೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..