ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ತಾಲೂಕಿಗೆ ಸಮೀಪದ ಜಕ್ಕಲಮೊಡುಗು ಜಲಾಶಯಕ್ಕೆ ಭಜನೆ ಸಂಕೀರ್ತನೆಯೊಂದಿಗೆ ಬಾಗಿನ ಸಮರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಕಲಾವಿದರ ಸಂಘದ ಕಾರ್ಯಾಲಯದಿಂದ ಹೊರಟು ಕಲಾವಿದರು, ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಬಾಗಿನದ ಪರಿಕರಗಳಿಗೆ ಪೂಜೆ ಸಲ್ಲಿಸಿ, ಭಜನೆ ಸಂಕೀರ್ತನೆ ನಡೆಸಿದರು. ನಂತರ ಗ್ರಾಮದಲ್ಲಿ ಬಾಗಿನದ ಮೆರವಣಿಗೆ ನಡೆಯಿತು.
ಬಾಗಿನ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ತೂಬಗೆರೆ ಹೋಬಳಿಯಲ್ಲಿ ನೀರಿಗೆ ಇಂದಿಗೂ ಅಭಾವವಿದೆ. ಸಾವಿರಾರು ಅಡಿ ಕೊರೆದರೂ ಸಹ ನೀರು ಸಿಗುತ್ತಿಲ್ಲ. ಆದರೆ ಈ ವರ್ಷ ಹೋಬಳಿಯಲ್ಲಿ ಮಳೆ ಸುರಿದಿರುವುದು ಸಂತಸ ತಂದಿದೆ. ಜಕ್ಕಲ ಮಡುಗು ಜಲಾಶಯ ನಿರ್ಮಾಣ ಯೋಜನೆಯ ಹರಿಕಾರರಾದ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ವರ ಶ್ರಮ ಸ್ಮರಣೀಯ. ಅಣೆಕಟ್ಟನ್ನು ಎತ್ತರಿಸಿ, ತೂಬಗೆರೆ ಭಾಗದ ಕೆರೆ, ಕುಂಟೆಗಳನ್ನು ತುಂಬುವಂತೆ ಮಾಡಿದರೆ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಮಾತನಾಡಿ, ಜಕ್ಕಲಮೊಡುಗು ಜಲಾಶಯದಲ್ಲಿ ನೀರಿಲ್ಲದಿದ್ದರೆ ಇಂದು ದೊಡ್ಡಬಳ್ಳಾಪುರ ನಗರಕ್ಕೆ ನೀರಿಗೆ ಹಾಹಾಕಾರವಾಗುತ್ತಿತ್ತು. ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಎರಡೂ ನಗರಗಳಿಗೆ ನೀರುಣಿಸುವ ಜಲಾಶಯಕ್ಕೆ ಮೂರನೇ ಬಾರಿ ಬಾಗಿನ ಅರ್ಪಿಸುತ್ತಿರುವುದು ಸಂತಸವಾಗಿದ್ದು, ಪ್ರತಿ ವರ್ಷ ಇದೇ ರೀತಿ ಮಳೆ ಬೆಳೆ ಆಗಲಿ ಎಂದು ಆಶಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಪ್ರಸ್ತಾವಿಕವಾಗಿ ಮಾತನಾಡಿ, ಕಲೆಯ ಜೀವಂತಿಕೆಗೆ, ಕಲಾವಿದರು ನೆಮ್ಮದಿಯಿಂದ ಇರಬೇಕು. ಇದಕ್ಕಾಗಿ ಮಳೆ ಬೆಳೆ ಆಗಬೇಕು. ಈಗ ದೈವ ಕೃಪೆಯಿಂದ ಜಲಾಶಯ ತುಂಬಿದ್ದು, ಕಲಾವಿದರಿಂದ ಭಜನೆ ಸಂಕೀರ್ತನೆಗಳೊಂದಿಗೆ ಬಾಗಿನ ಸಮರ್ಪಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಬಾಬು ಗ್ರಾ.ಪಂ.ಸದಸ್ಯ ರವಿಕುಮಾರ್, ಜಿ.ಪಂ ಮಾಜಿ ಸದಸ್ಯ ಅರವಿಂದ್, ತಾಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಎಸ್.ರಾಮಮೂರ್ತಿ, ಉಪಾಧ್ಯಕ್ಷರಾದ ಜಿ.ಮುನಿರಾಜು, ಕೆ.ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಹಿರಿಯ ಕಲಾವಿದರಾದ ಎಂ.ವೆಂಕಟರಾಜು, ಟಿ.ಎಸ್.ವೆಂಕಟೇಶ್,ತಮ್ಮಣ್ಣ, ನಾಟಕ ನಿರ್ದೇಶಕರಾದ ಟಿ.ವಿ.ಕೃಷ್ಣಪ್ಪ, ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಡಿ.ಶ್ರೀಕಾಂತ ಮೊದಲಾದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..