ದೊಡ್ಡಬಳ್ಳಾಪುರ: ತಾಲೂಕಿನ ಎಂದೂ ಬತ್ತದ ಕೆರೆಯೆಂದ ಪ್ರಖ್ಯಾತಿ ಪಡೆದಿರುವ ಗುಂಡಮಗೆರೆ ಕೆರೆ ಕೋಡಿ ಬಿದ್ದಿರುವ ಹಿನ್ನೆಲೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಶಾಸಕ ಟಿ.ವೆಂಕಟರಮಣಯ್ಯ ಇಂದು ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಈ ವರ್ಷ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳು ತುಂಬಿ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಹಿಂದೆ ಗುಂಡಮಗೆರೆ ಕೆರೆ ತುಂಬಿದಾಗ ಹೊಸಹಳ್ಳಿ ಹಾಗೂ ನಿಂಗನಾಯಕನ ಕೆರೆಗೆ ನೀರು ಹರಿಯಲು ರಾಜ ಕಾಲುವೆಯಿದ್ದು ನೀರು ಹರಿಸಲು ಕ್ರಮಕೈಗೊಳ್ಳುವಂತೆಡ ಸ್ಥಳೀಯರು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಕೈಗೊಂಡ ಕಾಮಗಾರಿಯಿಂದ ಹೊಸಹಳ್ಳಿ ಭಾಗದ ರೈತರಿಗೆ ಅನುಕೂಲವಾಗಿದೆ.
ಗುಂಡಮಗೆರೆ ಕೆರೆಯ ಮುಂಬಾಗದ ಜಮೀನು, ಮಾಕಳಿ ಬೆಟ್ಟಕ್ಕೆ ತೆರಳಲು ಮೇಲ್ಸೇತುವೆ ನಿರ್ಮಾಣ ಅಗತ್ಯವಾಗಿದೆ. ಅಲ್ಲದೆ ಕೋಡಿ ಹರಿದು ವ್ಯರ್ಥವಾಗಿ ನೀರು ಹರಿದು ಹೋಗದಂತೆ, ತಾಲೂಕಿನಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸಲು ಚೆಕ್ ಡ್ಯಾಂ ನಿರ್ಮಿಣ, ಹೊಸಹಳ್ಳಿ ಕೆರೆಗೆ ನೀರು ಸಮರ್ಪಕವಾಗಿ ಹರಿಯಲು ಚಾನಲ್ ನಿರ್ಮಾಣ ಹಾಗೂ ಹಲವು ವರ್ಷಗಳಿಂದ ನಿರ್ಮಾಣವಾಗದೆ ಜನರಿಗೆ ತೊಂದರೆಗೆ ಕಾರಣವಾಗಿರುವ ಕೊಟ್ಟಿಗೆಮಾಚೇನಹಳ್ಳಿ ಸೇತುವೆ ನಿರ್ಮಾಣಕ್ಕೆ ಜಿಲ್ಲಾಡಳಿತ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ವೆಂಕಟರಮಣಯ್ಯ ಮನವಿ ಮಾಡಿದರು.
ತಾಲೂಕಿನ ನೀರಾವರಿ ಯೋಜನೆಗಳಿಗೆ ತಡೆಯೊಡ್ಡಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ತ್ಯಾಜ್ಯ ಸಂಸ್ಕರಣೆ ನೀರನ್ನು ಹರಿಸಲು 120 ಕೆರೆಗಳನ್ನು ಸೇರ್ಪಡೆ ಮಾಡಲಾಗಿತ್ತು. ಆದರೆ ಈ ಸರ್ಕಾರ ಮತ್ತೆ ಮೂರು ಹಂತ ಕಾಮಗಾರಿಗೆ ಮುಂದಾಗಿ ದೊಡ್ಡಬಳ್ಳಾಪುರ ತಾಲೂಕನ್ನು ಕಡೆಗಣಿಸಿದ್ದು ತಾಲೂಕಿನ ಜನತೆ ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ದವಾಗಬೇಕಿದೆ ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಬಾಗಿನ ಕಾರ್ಯಕ್ರಮಕ್ಕೆ ಕರೆಸಿದ ಶಾಸಕರು ಹಲವು ಬೇಡಿಕೆ ಇಡುತ್ತಿದ್ದಾರೆಂದು ಹಾಸ್ಯ ಚಟಾಕಿ ಹಾರಿಸಿ. ರೈತರ ಸಮಸ್ಯೆ ಪರಿಗಣಿಸಿ ಸೇತುವೆ ನಿರ್ಮಾಣಕ್ಕೆ ಎಸ್ಟಿಮೇಟ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಇಒ ಟಿ.ಮುರುಡಯ್ಯ, ಟಿಎಪಿಎಸ್ ಅಧ್ಯಕ್ಷ ಸಿದ್ದರಾಮಣ್ಣ, ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ವೆಂಕಟಾಚಲಯ್ಯ, ತಾಪಂ ಮಾಜಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ವಿಮಲಾಜಯರಾಂ, ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಪಿಡಿಒ ನಾಗರಾಜ್, ಮುಖಂಡರಾದ ಅಣ್ಣಯ್ಯಪ್ಪ, ಓಜೇನಹಳ್ಳಿ ಕಿಟ್ಟಿ, ಜಯರಾಂ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ