ನವದೆಹಲಿ: ಕೇಂದ್ರ ಸರಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನಾನಿರತನಾಗಿದ್ದ ರೈತನ ಮೃತ ದೇಹ ದೆಹಲಿಯ ಸಿಂಘು ಗಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಗುರುಪ್ರೀತ್ ಸಿಂಗ್ ಎನ್ನಲಾಗಿದ್ದು, ಭಾರತೀಯ ಕಿಸಾನ್ ಸಂಘಟನೆಯ ಜಗ್ಜೀತ್ ಸಿಂಗ್ ದಲ್ಲೆವಾಲ್ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಕುಂಡ್ಲಿ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಕಳೆದ ತಿಂಗಳಷ್ಟೇ ಲಖ್ಫೀರ್ ಸಿಂಗ್ ಎಂಬ ಕಾರ್ಮಿಕನ ಶವ ಸಿಂಘು ಗಡಿಯ ಬ್ಯಾರಿಕೇಡ್ಗೆ ಕಟ್ಟಿಡಲಾಗಿತ್ತು. ಮೃತ ಲಖ್ಬೀರ್ ಸಿಂಗ್ ದೇಹದಲ್ಲಿ ಹರಿತವಾದ ಆಯುಧದಿಂದ ಮಾಡಿದ ಗಾಯದ ಕಲೆಗಳು ಪತ್ತೆಯಾಗಿದ್ದವು.
ಸಾವಿರಾರು ರೈತರು ಅದರಲ್ಲೂ ಹೆಚ್ಚಾಗಿ ಪಂಜಾಬ್,ಹರಿಯಾಣ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ದೆಹಲಿಯ ಸಿಂಘು ಹಾಗೂ ಟಿಕ್ರಿ ಗಡಿಗಳಲ್ಲಿ ಕಳೆದ ವರ್ಷ ನವೆಂಬರ್ 26ರಿಂದ ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ )
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……