ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ ಜಿಪಿ ಕಸ ವಿಲೇವಾರಿ ಘಟಕವನ್ನು ಬಂದ್ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ನಡೆಸುತ್ತಿರುವ ಧರಣಿಗೆ ಮಾಜಿ ಪ್ರಧಾನ ಮಂತ್ರಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಸೇರಿದಂತೆ ಹಲವಾರು ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದು ಧರಣಿ ನಿರತರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಕಸ ವಿಲೇವಾರಿ ಘಟಕವನ್ನು ಮುಚ್ಚುವಂತೆ ನಡೆಯುತ್ತಿರುವ ಧರಣಿಗೆ ಶುಕ್ರವಾರ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಹಾಗೂ ನೆಲಮಂಗಲ ಸೋಂಪುರ ಹೋಬಳಿಯ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದರು.
ದೂರವಾಣಿಯಲ್ಲಿ ಮಾತನಾಡಿರುವ ದೇವೇಗೌಡರು ‘ಇಲ್ಲಿನ ಎಲ್ಲಾ ಮಾಹಿತಿಯನ್ನು ತಿಳಿದಿದ್ದು ವಿಧಾನ ಪರಿಷತ್ ಚುನಾವಣೆಯ ನಂತರ ಜೆಡಿಎಸ್ ಪಕ್ಷದ ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿರುವುದಾಗಿ ಧರಣಿಯ ನೇತೃತ್ವ ವಹಿಸಿರುವ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ, ಕಸ ತುಂಬಿದ ಲಾರಿಗಳು ಇಲ್ಲಿಗೆ ಬರುವುದಿಲ್ಲ ಎನ್ನುವ ಲಿಖಿತ ಭರವಸೆ ದೊರೆಯುವವರೆಗೂ ನಮ್ಮ ಧರಣಿ ಮುಂದುವರೆಯಲಿದೆ ಎಂದಿದ್ದಾರೆ.
ಲಾರಿ ವಶಕ್ಕೆ: ಕುಣಿಗಲ್ ಮೂಲದ ಖಾಸಗಿ ಕಂಪನಿಗೆ ಸೇರಿದ ಕೈಗಾರಿಕಾ ತ್ಯಾಜ್ಯದ ನೀರನ್ನು ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ತಂದು ಸುರಿಯಲು ಬಂದಿದ್ದ ವಾಹನವನ್ನು ಪ್ರತಿಭಟನಾಕಾರರು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲು ಮಾಡಿಸಿದ್ದಾರೆ.
ನೆಲಮಂಗಲದ ತಾಲ್ಲೂಕು ಬಿಜೆಪಿ ಮುಖಂಡ ಜಗದೀಶ್ ಚೌಧರಿ ಮಾತನಾಡಿ, ರೈತರ ಪರ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ವಿದೇಶಗಳಲ್ಲಿ ಕಸದಿಂದ ರಸ ಎಂಬಂತೆ ಪರಿಣಾಮಕಾರಿಯಾಗಿ ಸೂಕ್ತವಾಗಿ ವಿಲೇವಾರಿ ಬಹುಪಯೋಗಿಯಾಗಿ ಬಳಸುತ್ತಿದ್ದಾರೆ. ಇಲ್ಲಿ ಮಾತ್ರ ಕಸದಿಂದ ವಿಷವನ್ನು ಬಿಟ್ಟು ರೈತರ ಬದುಕನ್ನು ಹಾಳು ಮಾಡಲಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ 20 ವರ್ಷಗಳಲ್ಲಿ ಇಲ್ಲಿ ಜನರೇ ವಾಸಿಸದ ಪ್ರದೇಶವಾಗಿ ಮಾರ್ಪಡುತ್ತದೆ ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲ ಜಗದೀಶ್ ಮಾತನಾಡಿ,ಇಲ್ಲಿನ ಪ್ರದೇಶ ಎರಡು ದಶಕಗಳು ಕಳೆದರು ಸರಿಹೋಗದಷ್ಟು ಹಾಳಾಗಿದೆ. ಬೆಳೆಗಳನ್ನು ಕೂಡ ಹಾಳಗಿವೆ. ಕಾಲುವೆ, ಕುಂಟೆಗಳಲ್ಲಿನ ನೀರು ಯಾವ ಜಾನುವಾರುಗಳು ಕುಡಿಯಲು ಯೋಗ್ಯವಾಗಿಲ್ಲ. ರೈತರಿಗೂ ಇಲ್ಲಿನ ನೀರಿನಿಂದ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವಾಗಿ ಬಿಬಿಎಂಪಿ ಕಸದ ಘಟಕವನ್ನು ಮುಚ್ಚಲೇಬೇಕು ಎಂದು ಆಗ್ರಹಿಸಿದರು. ಕಾನೂನು ಹೋರಾಟಕ್ಕೂ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.
ಎರಡನೇ ಬಾರಿಗೆ ಪರಿಶೀಲನೆ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯವರು ಯಾವುದೇ ರೀತಿಯ ಪರಿಶೀಲನೆಯನ್ನು ನಡೆಸದೇ 2026ರವರೆಗೂ ಕಸ ವಿಲೇವಾರಿ ಘಟಕವನ್ನು ನಡೆಸಲು ಪರವಾನಿಗಿಯನ್ನು ನವೀಕರಿಸಿ ನೀಡಿದ್ದರು. ಆದರೆ ಗ್ರಾಮಸ್ಥರ ಧರಣಿ ನಂತರ ಕಸ ವಿಲೇವಾರಿ ಘಟಕಕ್ಕೆ ಎರಡು ಬಾರಿ ಭೇಟಿ ನೀಡಿ ಇಲ್ಲಿನ ವಾಸ್ತವ ವರದಿಯನ್ನು ಸಂಗ್ರಹ ಮಾಡಿದ್ದಾರೆ. ಬೆಂಗಳೂರು ಉತ್ತರ ವಲಯ ಹಿರಿಯ ಪರಿಸರ ಅಧಿಕಾರಿ ಸಿದ್ದರಾಮಯ್ಯ, ಪ್ರಾದೇಶಿಕ ಪರಿಸರ ಅಧಿಕಾರಿ ಸುನಿತಾ ಅವರು ಕಸ ವಿಲೇವಾರಿ ಘಟಕದ ಸುತ್ತಲಿನ ಕಲುಷಿತ ನೀರು, ಎಲ್ಲೆಂದರಲ್ಲಿ ಸುರಿಯಲಾಗಿರುವ ಕಸದ ಮಾದರಿಯನ್ನು ಸಂಗ್ರಹ ಮಾಡಿದ್ದಾರೆ.
ಕಸ ವಿಲೇವಾರಿ ಘಟಕದಲ್ಲಿನ ವಾಸ್ತವ ವರದಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಗೆ ನ್ಯಾಯಸಮ್ಮತವಾಗಿ ನೀಡಿದರೆ ಒಂದು ವಾರದ ಒಳಗೆ ಇಲ್ಲಿನ ಕಸ ವಿಲೇವಾರಿ ಘಟಕದ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ ಎಂದು ತಿಳಿಸಿರುವ ಧರಣಿಯಲ್ಲಿ ಭಾಗವಹಿಸಿರುವ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಕಸ ವಿಲೇವಾರಿ ಘಟಕದಿಂದ ಹೊರ ಬಂದು ತಣ್ಣೀರನಹಳ್ಳಿ ಸಮೀಪದ ಚಕ್ಡ್ಯಾಂನಲ್ಲಿ ಸಂಗ್ರಹವಾಗಿದ್ದ ಕಲುಷಿತ ನೀರನ್ನು ಲಾರಿಗಳ ಟ್ಯಾಂಕರ್ಗಲ್ಲಿ ತುಂಬಿಕೊಂಡು ಹೋಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ವಿವಿಧ ಗ್ರಾಮಗಳ ಸರ್ಕಾರಿ ಜಮೀನು ಸೇರಿದಂತೆ ರಾತ್ರಿ ವೇಳೆಯಲ್ಲಿ ಕೆರೆಗಳ ಸಮೀಪ ಸುರಿದು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಮಧುರೆ ಹೋಬಳಿಯ ರೈತರು ಎಚ್ಚರದಿಂದ ಗಮನಿಸುವ ಮೂಲಕ ತಮ್ಮ ಗ್ರಾಮಗಳ ಕೆರೆಗಳು ಕಲುಷಿತವಾಗದಂತೆ ಎಚ್ಚರವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….