ಬೆಂ.ಗ್ರಾ.ಜಿಲ್ಲೆ: ನವೀನ ಉದ್ಯಮಗಳ ಮೂಲಕ ಗ್ರಾಮೀಣ ಯುವಜನತೆಗೆ ಉದ್ಯೋಗ ಹಾಗೂ ಜೀವನೋಪಾಯ ಭದ್ರತೆ (ARYA) ಯೋಜನೆಯಡಿ ತೆಂಗು ಬೆಳೆಯ ಸುಧಾರಿತ ಬೇಸಾಯ ಪದ್ಧತಿಗಳು ಮತ್ತು ಯಾಂತ್ರೀಕರಣ ಕುರಿತು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮೀಣ ಯುವಕರಿಗೆ ಡಿ.06 ರಿಂದ 11ರ ವರೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಎ.ಪಿ. ಮಲ್ಲಿಕಾರ್ಜುನ ಗೌಡ ರವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಯುವಕರು ಈ ತರಬೇತಿಯ ನಂತರ ತೆಂಗಿನ ಮರ ಹತ್ತುವುದನ್ನು ಒಂದು ಉದ್ಯೋಗವನ್ನಾಗಿ ಮಾಡಿಕೊಂಡರೆ ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ರೂಪಿಸಿಕೊಳ್ಳಬಹುದು ಮತ್ತು ಇದರಿಂದ ಕೆಲಸಕ್ಕಾಗಿ ನಗರ ಪ್ರದೇಶಗಳನ್ನು ಅವಲಂಬಿಸುವುದನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.
ತರಬೇತಿ ಸಂಯೋಜಕ ಡಾ.ವೆಂಕಟೇಗೌಡ, ಜೆ., ವಿಜ್ಞಾನಿ (ಬೇಸಾಯ ಶಾಸ್ತ್ರ) ಇವರು ತೆಂಗಿನ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ತೆಂಗಿನ ಬೇಸಾಯದಲ್ಲಿ ಉಪಯೋಗಿಸುವ ವಿವಿದ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ಎಂ.ಚಂದ್ರೇಗೌಡ, ನಿವೃತ್ತ ಪ್ರಾಧ್ಯಾಪಕರು, ತೋಟಗಾರಿಕೆ ವಿಭಾಗ, ಜಿಕೆವಿಕೆ, ಬೆಂಗಳೂರು ಇವರು ತೆಂಗಿನಲ್ಲಿ ಸುಧಾರಿತ ತಳಿಗಳು, ಆಯ್ಕೆ ಮತ್ತು ತೆಂಗಿನ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಡಾ.ವೀರನಾಗಪ್ಪ. ಪಿ., ವಿಜ್ಞಾನಿ (ಮಣ್ಣು ವಿಜ್ಞಾನ) ಇವರು ಮಣ್ಣು ಪರೀಕ್ಷೆ ಮಹತ್ವ ಮತ್ತು ತೆಂಗಿನ ಸಮಗ್ರ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಶಿವಪ್ರಸಾದ್, ಎಸ್., ಹಿರಿಯ ಸಂಶೋಧನಾ ಸಹಾಯಕರು, ARYA ಯೋಜನೆ ಇವರು ತೆಂಗಿಗೆ ಬರುವ ಪ್ರಮುಖ ರೋಗ ಹಾಗೂ ಕೀಟಗಳ ಬಗ್ಗೆ ತಿಳಿಸಿ, ಅವುಗಳ ನಿವಾರಣೆ ತಂತ್ರಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಭರತ್, ಎಸ್.ಪಿ.ರವರು ಶಿಬಿರಾರ್ಥಿಗಳಿಗೆ ಸಾಧನವನ್ನು ಬಳಸಿ ತೆಂಗಿನ ಮರ ಹತ್ತುವ ಕೌಶಲ್ಯವನ್ನು ಹೇಳಿಕೊಟ್ಟರು, ಇದರಿಂದ ಪ್ರತಿಯೊಬ್ಬರೂ ತೆಂಗಿನ ಮರ ಹತ್ತಿ ಮರವನ್ನು ಶುಚಿ ಗೊಳಿಸುವುದು ಹಾಗೂ ಕಾಯಿ ಕೀಳುವ ಕಲೆಯನ್ನು ಕಲಿತರು.
ಶಿಬಿರಾರ್ಥಿಗಳಿಗೆ ತೆಂಗಿನ ಮರ ಹತ್ತುವ ಸಾಧನ, ಹೆಲ್ಮೆಟ್, ಕುಡುಗೋಲು ಮತ್ತು ಪ್ರಥಮ ಚಿಕಿತ್ಸೆ ಕಿಟ್ಗಳನ್ನು ಉಚಿತವಾಗಿ ನೀಡಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 20 ಜನ ಯುವಕರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….