ಬೆಂ.ಗ್ರಾ.ಜಿಲ್ಲೆ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19ರ ರೂಪಾಂತರಿ ತಳಿ ಒಮಿಕ್ರಾನ್ನ ಸೋಂಕು ಹರಡುವಿಕೆಯ ಸರಪಳಿಯನ್ನು ಮುರಿಯಲು ರಾಜ್ಯ ಸರ್ಕಾರ ಹೊರಡಿಸಿರುವ ರಾತ್ರಿ ಕರ್ಫ್ಯೂ ಇಂದು ರಾತ್ರಿಯಿಂದ ಜಾರಿಗೆ ಬರಲಿದೆ.
2021ರ ಡಿಸೆಂಬರ್ 28ರಿಂದ 2022ರ ಜನವರಿ 07ರ ವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ತುರ್ತು ಅಗತ್ಯವಿರುವ ಸೇವೆಗಳಿಗಾಗಿ ರೋಗಿಗಳು ಮತ್ತು ಅವರ ಪರಿಚಾರಕರು ಅಥವಾ ವ್ಯಕ್ತಿಗಳ ಓಡಾಟಕ್ಕೆ ಅನುಮತಿಸಲಾಗಿದೆ. ರಾತ್ರಿಯಲ್ಲಿ ಕಾರ್ಯಾಚರಣೆಗಳ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದ್ದು, ಅಂತಹ ಸಂಸ್ಥೆಗಳ ನೌಕರರ ಓಡಾಟಕ್ಕೆ ಅವರ ಸಂಬಂಧಿತ ಸಂಸ್ಥೆಯಿಂದ ನೀಡಿರುವ ಮಾನ್ಯವಾದ ಗುರುತಿನ ಚೀಟಿಯೊಂದಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ಉದ್ಯೋಗಿಗಳು ಮತ್ತು ವಾಹನಗಳಿಗೆ ಆಯಾ ಸಂಸ್ಥೆಯಿಂದ ನೀಡಿದ ಮಾನ್ಯ ಗುರುತಿನ ಚೀಟಿಯನ್ನು ತೋರಿಸಿ, ಓಡಾಟ ನಡೆಸಬಹುದಾಗಿದೆ. ಐಟಿ ಮತ್ತು ITeS ಕಂಪನಿಗಳಲ್ಲಿ ಅಗತ್ಯ ಸಿಬ್ಬಂದಿಗಳು ಅಥವಾ ನೌಕರರು ಮಾತ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿ, ಉಳಿದ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು.
ಔಷಧಾಲಯಗಳು ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಅನುಮತಿಸಲಾಗಿದ್ದು, ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಟ್ರಕ್ಗಳು, ಸರಕು ವಾಹನಗಳು ಅಥವಾ ಖಾಲಿ ಸರಕು ಸಾಗಾಣಿಕೆ ವಾಹನ ಸೇರಿದಂತೆ ಯಾವುದೇ ಸರಕು ವಾಹನಗಳು, ಇ-ಕಾಮರ್ಸ್ನ ಸರಕುಗಳು ಮತ್ತು ಸರಕುಗಳ ಮನೆ ವಿತರಣೆ (ಹೋಂ ಡೆಲಿವರಿ)ಗೆ ಯಾವುದೇ ನಿರ್ಬಂಧವಿರುವುದಿಲ್ಲ.
ಬಸ್ಸುಗಳ ಚಲನೆ, ರೈಲು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದ್ದು, ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ವಿಮಾನ ನಿಲ್ದಾಣಗಳಿಂದ ಹೊರಡುವ ಟ್ಯಾಕ್ಸಿಗಳ ಚಲನೆ, ಬಸ್ ಟರ್ಮಿನಲ್, ಬಸ್ ನಿಲ್ದಾಣ, ರೈಲು ನಿಲ್ದಾಣ ಇತ್ಯಾದಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಕುರಿತ ವಿವರವುಳ್ಳ ಟಿಕೆಟ್, ದಾಖಲೆಯನ್ನು ಪ್ರದರ್ಶಿಸುವ ಮೂಲಕ ವಿಮಾನ ಪ್ರಯಾಣ, ರೈಲು ಮತ್ತು ರಸ್ತೆ ಮೂಲಕ ಸಂಚರಿಸಲು ಅನುಮತಿಸಲಾಗಿದೆ.
ಡಿಸೆಂಬರ್ 30ರಿಂದ ಜನವರಿ 02ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ಗಳಲ್ಲಿ ಕೋವಿಡ್ ಸಮುಚಿತ ನಡವಳಿಕೆಗಳ ಅನ್ವಯ ಶೇ. 50% ರಷ್ಟು ಆಸನದ ಸಾಮರ್ಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಈ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಕೋವಿಡ್-19 ಆರ್ಟಿಪಿಸಿಆರ್ ನೆಗಟಿವ್ ವರದಿಯೊಂದಿಗೆ ಕೋವಿಡ್-19 ಲಸಿಕೆಯ 2 ಡೋಸ್ಗಳನ್ನು ಕಡ್ಡಾಯವಾಗಿ ಪಡೆದಿರಬೇಕು.
ಡಿಸೆಂಬರ್ 28ರ ನಂತರ ಮದುವೆ, ಎಲ್ಲಾ ಸಭೆ, ಸಮಾರಂಭ, ಸಮ್ಮೇಳನಗಳು ಇತ್ಯಾದಿಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 300ಕ್ಕೆ ಸೀಮಿತಗೊಳಿಸಲಾಗಿದ್ದು, ಕಾರ್ಯಕ್ರಮದ ಸಂಘಟಕರು ಕೋವಿಡ್-19 ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜವಾಬ್ದಾರರಾಗಿರುತ್ತಾರೆ.
ಒಮಿಕ್ರಾನ್ ರೂಪಾಂತರಿ ತಳಿಯ ಹರಡುವಿಕೆಯನ್ನು ತಡೆಗಟ್ಟಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ
ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ 2005ರ ಸೆಕ್ಷನ್ 51 ರಿಂದ 60ರ ನಿಬಂಧನೆಗಳಡಿ, ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಹಾಗೂ ಅನ್ವಯವಾಗುವ ಇತರ ಕಾನೂನುಗಳ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….