
ಬಾಗಲಕೋಟೆ, (ನ.04): ಜಗಜ್ಯೋತಿ ಬಸವಣ್ಣನವರ ಪುಣ್ಯ ಭೂಮಿ ಕೂಡಲ ಸಂಗಮಕ್ಕೆ ಕಂದಾಯ ಸಚಿವ ಆರ್.ಆಶೋಕ, ಗೃಹಮಂತ್ರಿ ಆರಗ ಜ್ಞಾನೇಂದ್ರ, ಐಟಿ, ಬಿಟಿ ಸಚಿವ ಡಾ.ಅಶ್ವತ ನಾರಾಯಣ, ಕ್ರೀಡಾ ಸಚಿವ ನಾರಾಯಣಗೌಡ ಅವರು ಶುಕ್ರವಾರ ಭೇಟಿ ನೀಡಿ ಸಂಗಮನಾಥನ ದರ್ಶನ ಪಡೆದು ಮೃತ್ತಿಕೆಯನ್ನು ಸಂಗ್ರಹಿಸಿದರು.

ಸಂಗಮನಾಥನ ದರ್ಶನ ಪಡೆದುಕೊಂಡು ಬಳಿಕ ಮಾತನಾಡಿದ ಐಟಿ, ಬಿಟಿ ಸಚಿವ ಅಶ್ವತ ನಾರಾಯನ ಅವರು ಜಗಜ್ಯೋತಿ ಬಸವಣ್ಣನವರು ನೀಡಿರುವಂತಹ ಸಂದೇಶ, ಸಾಮಾಜಿಕ ನ್ಯಾಯದ ಮೂಲಕ ಕಲ್ಯಾಣ ಸಮಾಜ ಕಟ್ಟಲು ಪುಣ್ಯ ಭೂಮಿಯ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲ ಸಂಗಮ ಕ್ಷೇತ್ರಕ್ಕೆ ಆಗಮಿಸಿರುವುದಾಗಿ ತಿಳಿಸಿದರು.

ಪುಣ್ಯ ಸ್ಥಳದ ಮೃತ್ತಿಕೆ ಪುಣ್ಯ ಮೃತ್ತಿಕೆಯಾಗಿರುತ್ತದೆ. ಇಂತಹ ಮೃತ್ತಿಕೆಗಳನ್ನು ಸಂಗ್ರಹ ಮಾಡಿಯೇ ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ಸ್ಥಾಪನೆ ಮಾಡಿದ್ದಾರೆ. ಬಸವಣ್ಣನವರ ಸಂದೇಶ, ಅವರ ಜೀವನದಲ್ಲಿ ಜ್ಯಾತ್ಯಾತೀತ ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಕೊಟ್ಟಿರುವದನ್ನು ಅಳವಡಿಸಿಕೊಂಡು ಇವರಿಬ್ಬರ ಸಂಗಮ ಮೃತ್ತಿಕೆ ಮೂಲಕ ತಂದು ನಾಡನ್ನು ಒಂದು ಕಡೆ ತಂದು ಶಕ್ತಿ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಹೆಸರು ಇಡುವ ಮೂಲಕ ವಿದೇಶಿಯರು ಅವರ ಬಗ್ಗೆ ಕೇಳುವಂತಾಗಿದೆ. ನಾಡಿನ ಸಮೃದ್ದಿಗಾಗಿ ಕನ್ನಡ ನಾಡಿನಲ್ಲಿ ಹುಟ್ಟಿರುವ ಪುಣ್ಯ ಪುರುಷರ ಸ್ಥಳಗಳ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಗಜ್ಯೋತಿ ಬಸವಣ್ಣನವರ ಪುಣ್ಯ ಭೂಮಿ ಕೂಡಲಸಂಗಮದಲ್ಲಿ ಮೃತ್ತಿಕೆ ಸಂಗ್ರಹಿಸಲು ನಾಲ್ಕು ಜನ ಸಚಿವರು ಬಂದಿದ್ದೇವೆ. ಈ ಸ್ಥಳದ ಅಭಿವೃದ್ದಿಗಾಗಿ 500 ಕೋಟಿ ರೂ.ಗಳ ನೀಡಲಾಗುತ್ತಿದ್ದು, ಹಂತ ಹಂತವಾಗಿ ಬಸವಣ್ಣನವರ ಪುಣ್ಯ ಸ್ಥಳವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕೂಡಲ ಸಂಗಮದ ಮಹಾದೇವ ಸ್ವಾಮಿಗಳು, ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಕೂಡಲ ಸಂಗಮ ಅಭಿಬೃದ್ದಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಚಿವರನ್ನು ಜಾನಪದ ಕಲಾತಂಡಗಳ ಮೂಲಕ ಸ್ವಾಗತಿಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
