ಚಿಕ್ಕಬಳ್ಳಾಪುರ,(ನ.08): ಸಾರ್ವಜನಿಕರು ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಆಡಳಿತ ವರ್ಗಕ್ಕೆ ಲಂಚ ಕೊಡದೇ ಇರುವುದು ಹಾಗೂ ಆಡಳಿತ ವರ್ಗದ ಯಾರೊಬ್ಬರೂ ಲಂಚ ಪಡೆಯದೇ ಕೆಲಸ ನಿರ್ವಹಿಸುವುದೇ ದೇಶಕ್ಕೆ ಮತ್ತು ಸಮಾಜಕ್ಕೆ ನೀವು ನೀಡುವ ನಿಜವಾದ ಪರಸ್ಪರರ ಕೊಡುಗೆ ಈ ದಿಸೆಯಲ್ಲಿ ಎಲ್ಲರೂ ಸಂಕಲ್ಪ ಮಾಡುವಂತೆ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕರೆ ನೀಡಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ದೂರು ಅರ್ಜಿಗಳು, ಅಹವಾಲುಗಳ ವಿಲೇವಾರಿ ಮತ್ತು ವಿಚಾರಣೆ ಮಾಡುವ ಮುನ್ನ ಸಾರ್ವಜನಿಕರನ್ನು ಮತ್ತು ಆಡಳಿತ ವರ್ಗವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಮೂರು ದಿನಗಳಿಂದ ನಾನು ಮತ್ತು ನನ್ನ ಅಧೀನ ಸಹೋದ್ಯೋಗಿಗಳು, ಸಿಬ್ಬಂದಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿಯೇ ಪ್ರವಾಸ ಕೈಗೊಂಡು ಸಾರ್ವಜನಿಕರ ಅಹವಾಲು ಮತ್ತು ದೂರು ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿಯೇ ತೀರ್ಮಾನ ಕೈಗೊಂಡು ಇತ್ಯರ್ಥ ಪಡಿಸಲಾಗಿದೆ. ಮತ್ತಷ್ಟು ಪ್ರಕರಣಗಳನ್ನು ಸಮಯ ನಿಗದಿಮಾಡಿ ಇತ್ಯರ್ಥ ಪಡಿಸಲು ಸಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ದುರ್ಬಲರ, ಆರ್ಥಿಕ ಚೈತನ್ಯವಿಲ್ಲದವರ (ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಗೆ ಒಳಪಡದಿರುವ) ಕೆಲವು ಪ್ರಕರಣಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ವರ್ಗಾಯಿಸಿ ಉಚಿತ ಕಾನೂನು ನೆರವಿಗೆ ತಿಳಿಸಲಾಗಿದೆ.
ಅಲ್ಲದೇ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಸ್ಪತ್ರೆ, ಜಿಲ್ಲಾ ಕಾರಾಗೃಹ ಹಾಗೂ ಕೆಲವು ವಿದ್ಯಾರ್ಥಿ ನಿಲಯಗಳಿಗೆ ಭಾನುವಾರ ಭೇಟಿ ಕೊಟ್ಟು ಅಲ್ಲಿನ ಸಾರ್ವಜನಿಕರ, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಈ ಎಲ್ಲಾ ಅಂಶಗಳ ಕುರಿತು ಲೋಕಾಯುಕ್ತ ಸಂಸ್ಥೆಗೆ ವರದಿ ಕಳುಹಿಸಿಕೊಡಲು ಸ್ಪಷ್ಟ ಆದೇಶವನ್ನು ನೀಡಲಾಗಿದೆ. ಈ ಕುರಿತು ಸಂಸ್ಥೆಯು ನಿರಂತರ ನಿಗಾವಹಿಸುತ್ತದೆ ಎಂದು ತಿಳಿಸಿದರು.
ಈ ಎಲ್ಲಾ ಅಂಶಗಳನ್ನು ಹೊರತು ಪಡಿಸಿ ಕಳೆದ ಮೂರು ದಿನಗಳಿಂದ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಿರುವ ಜಿಲ್ಲೆಯ ಯಾವುದೇ ಸಾರ್ವಜನಿಕರು, ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಾಗೂ ಇತರರಿಂದ ಸರ್ಕಾರಿ ಕೆಲಸ ಮಾಡಿಕೊಡಲು ತೊಂದರೆ ಅನುಭವಿಸಿದ್ದರೆ, ಯಾರಾದ್ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆ ಹಾಗೂ ಇತರೆ ಆಮಿಶಗಳನ್ನು ನಿಮ್ಮಿಂದ ಬಯಸಿದ್ದರೆ ಅಂತಹವರ ವಿರುದ್ಧ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರ ಕಚೇರಿಯನ್ನು ಸಂಪರ್ಕಿಸಿ, ದೂರು ಅರ್ಜಿ ನೀಡಿದರೆ ಲೋಕಾಯುಕ್ತ ಸಂಸ್ಥೆಯು ಕಾನೂನು ಪ್ರಕ್ರಿಯೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸುತ್ತದೆ.
ಈ ಒಂದು ಮಹೋನ್ನತ ಕಾರ್ಯಕ್ಕೆ ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಯನ್ನು ಸದುಪಯೋಗಪಡಿಕೊಳ್ಳುವ ಮೂಲಕ ಸಂಸ್ಥೆಯೊಂದಿಗೆ ಕೈಜೋಡಿಸಬೇಕು. ಮುಖ್ಯವಾಗಿ ನೊಂದವರು ನಿರ್ಭಿತಿಯಿಂದ ಮುಕ್ತವಾಗಿ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಲು ಮುಂದಾಗಬೇಕು. ಸಂಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು. ನೊಂದವರ, ಅನ್ಯಾಯಕ್ಕೆ ಒಳಗಾದವರ ಬೆಂಬಲಕ್ಕೆ ಲೋಕಾಯುಕ್ತ ಸಂಸ್ಥೆ ಧೃಡವಾಗಿ ನಿಲ್ಲುತ್ತದೆ ಈ ಬಗ್ಗೆ ಸಂಶಯ ಬೇಡ ಎಂದು ತಿಳಿಸಿದರು.
ಯಾವುದೇ ಸಾರ್ವಜನಿಕರು ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಸಿ ಕೊಳ್ಳಲು ಯಾವುದೇ ರೂಪದಲ್ಲಿ ಲಂಚವನ್ನು ನೀಡಬಾರದು. ಅದೇ ರೀತಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ರೂಪದಲ್ಲಿ ಲಂಚ ಪಡೆಯದೇ ಪ್ರಮಾಣಿಕತೆಯನ್ನು ಮೆರೆಯಬೇಕು. ಇದೇ ದೇಶಕ್ಕೆ ಕೊಡುವ ನಿಜವಾದ ನಿಮ್ಮ ಕೊಡುಗೆ ಈ ದಿಸೆಯಲ್ಲಿ ಎಲ್ಲರೂ ಸಂಕಲ್ಪ ಮಾಡಿ ನೆಡೆದುಕೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಂತರ ದಿನವಿಡೀ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ 67 ಪ್ರಕರಣಗಳನ್ನು ಸುದೀರ್ಘ ವಿಚಾರಣೆ ಮಾಡಿ ವಿಲೇವಾರಿಗೆ ಉಪಲೋಕಾಯುಕ್ತರು ಪ್ರಯತ್ನ ಮಾಡಿದರು. ಜಿಲ್ಲಾ ಪಂಚಾಯತ್ ನ ವಿಶ್ವೇಶ್ವರಯ್ಯ ಸಭಾಂಗಣವು ಲೋಕಾಯುಕ್ತ ನ್ಯಾಯಾಲಯದ ಸಭಾಂಗಣವಾಗಿ ಮಾರ್ಪಟ್ಟಿತ್ತು.
ಉಪಲೋಕಾಯಕ್ತರೇ ಮನೆಬಾಗಿಲಿಗೆ ಬಂದು ಸಮಸ್ಯೆಗಳನ್ನು ಆಲಿಸಿದಂತೆ ಭಾಸವಾಗುತ್ತಿತ್ತು. ಅತ್ಯಂತ ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿದರು.
ಇಡೀ ಸಭಾಂಗಣದಲ್ಲಿ ನಿಶಬ್ದ ವಾತಾವರಣ ಮೂಡಿತ್ತು. ಒಟ್ಟಾರೆ ಜಿಲ್ಲೆಯ ಮಟ್ಟಿಗೆ ವಿನೂತನ ಭಾವ ಮೂಡಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಅಮ್ಮನಬಾವಿ, ಉಪನಿಬಂಧಕರಾದ ಚನ್ನಕೇಶವರೆಡ್ಡಿ, ಸಹಾಯಕ ನಿಬಂಧಕರಾದ ಸಿ.ಚಂದ್ರಶೇಖರ್, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್, ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಆಧೀಕ್ಷಕರಾದ ಪವನ್ ನೆಜ್ಜೂರ್, ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

