ದೊಡ್ಡಬಳ್ಳಾಪುರ, (ನ.21): ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ಮುಖ್ಯ ಉದ್ದೇಶಗಳೊಂದಿಗೆ ನವೆಂಬರ್ 29ರಂದು ಹಾಡೋನಹಳ್ಳಿಯಲ್ಲಿ ಬೆಳಿಗ್ಗೆ 10.00 ಘಂಟೆಗೆ ಸಿರಿಧಾನ್ಯ ಹಬ್ಬವನ್ನು ಆಯೋಜಿಸಲಾಗಿರುತ್ತದೆ. ಅದರ ಪ್ರಯುಕ್ತ ನ26 ರಂದು ಸಿರಿಧಾನ್ಯ ರೋಡ್ ಶೋ ಅಂದರೆ ಸಿರಿಧಾನ್ಯಗಳ ಓಟ-3.5ಕಿ.ಮಿ “ನಮ್ಮ ನಡಿಗೆ ಸಿರಿಧಾನ್ಯದ ಕಡೆಗೆ‘’ ಎಂಬ ಧ್ಯೇಯೋಕ್ತಿಯೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೆಶಕಿ ಲಲಿತಾ ರೆಡ್ಡಿ ತಿಳಿಸಿದರು.

ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳ ಓಟ ಬೆಳಿಗ್ಗೆ 7.00 ಘಂಟೆಗೆ ಪರಿವೀಕ್ಷಣಾ ಮಂದಿರ ದೊಡ್ಡಬಳ್ಳಾಪುರದಿಂದ ಪ್ರಾರಂಭಿಸಲಾಗುತ್ತಿದ್ದು, ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಲಿದ್ದಾರೆ. 3.5 ಕಿ.ಮೀ ನಡಿಗೆಯೊಂದಿಗೆ ಅದೇ ಸ್ಥಳದಲ್ಲಿ ಓಟ ಮುಕ್ತಾಯವಾಗಲಿದೆ.

ಮುಂದಿನ ಪಿಳಿಗೆಗೆ ಸಿರಿಧಾನ್ಯಬೆಳೆಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು, ರೈತ ಮಹಿಳೆಯರು, ಸಾವಯವ / ಸಿರಿಧಾನ್ಯ ಬೆಳೆಗಾರರು, ಇಲಾಖೆ ಅಧಿಕಾರಿಗಳು, ಆರೋಗ್ಯ ಕಾಳಜಿಯುಳ್ಳ ದೊಡ್ಡಬಳ್ಳಾಪುರ ತಾಲ್ಲೂಕು ನಿವಾಸಿಗಳು, ರೈತ ಸಂಘಗಳು, ಕೃಷಿಕ ಸಮಾಜ, ರೈತ ಉತ್ಪಾದಕರ ಸಂಘಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಮಕ್ಕಳು / ಯುವಕ / ಯುವತಿಯರು ಮತ್ತು ಇತರೆ ಸಂಸ್ಥೆಗಳು ಭಾಗವಹಿಸಲಿದ್ದಾರೆ.
ಸಿರಿಧಾನ್ಯಗಳು ಒಣ ಭೂಮಿಯ ಮಹತ್ವದ ಬೆಳೆಯಾಗಿದ್ದು, ಕಡಿಮೆ ಮಳೆ ಪ್ರದೇಶಗಳಲ್ಲಿ ಹೆಚ್ಚಿನ ಇಳುವರಿ ನೀಡುವುದರ ಜೊತೆಗೆ ಉತ್ಕೃಷ್ಟ, ಸುಧಾರಿತ ಬೇಸಾಯ ಕ್ರಮಗಳ ಅವಶ್ಯಕತೆ ಇಲ್ಲದೆ ಯಾವುದೇ ಹೆಚ್ಚಿನ ರಾಸಾಯನಿಕ ರಸಗೊಬ್ಬರಗಳಿಲ್ಲದೇ, ಕೀಟನಾಶಕದ ಶೂನ್ಯ ಬಳಕೆಯಿಂದ ಬೆಳೆಯಬಹುದಾದ ಬೆಳೆಗಳಾಗಿರುತ್ತವೆ. ಅತೀ ಕಡಿಮೆ ಅವಧಿ ಬೆಳೆಗಳಾಗಿದ್ದು, ಬರನಿರೋಧಕ ಗುಣಗಳನ್ನು ಹೊಂದಿರುತ್ತವೆ.
ಪ್ರಜ್ಞಾವಂತ ಆಹಾರವಾದ ಸಿರಿಧಾನ್ಯದ ಬಗ್ಗೆ ವ್ಯಾಪಕ ಪ್ರಚಾರ ನೀಡಲು, ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆಧ್ಯತೆ ನೀಡಲು ಈ ಒಂದು ನಡಿಗೆಯನ್ನು ಆಯೋಜಿಸಲಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರವಾಗುವಂತೆ ಹೆಚ್ಚಿನ ರೈತರು ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ನಿವಾಸಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ಕೃಷಿ ನಿರ್ದೇಶಕಿ ಎಂ.ಸಿ.ವಿನುತ, ಕೃಷಿಕ ಸಮಾಜದ ಅಧ್ಯಕ್ಷ ಅಂಜನೇಗೌಡ, ಉಪಾಧ್ಯಕ್ಷ ರಾಮಾಂಜಿನಪ್ಪ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀರನಾಗಪ್ಪ, ಎಡಿಎ ಡಿ.ರಾಜೇಶ್ವರಿ, ಸಹಾಯಕ ಕೃಷಿ ನಿರ್ದೇಶಕರಾದ ಸುಶೀಲಮ್ಮ, ರಾಘವೇಂದ್ರ , ತಾಂತ್ರಿಕ ರೂಪ, ರೇಣುಕಾಪ್ರಸನ್ನ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
