
ದೊಡ್ಡಬಳ್ಳಾಪುರ, (ನ.01): ಹೊರ ತಾಲೂಕಿನವರಾದ ಮುನೇಗೌಡರಿಗೆ ಮತ್ತೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಿದರೆ ಸೋಲು ಖಚಿತವಾಗಿದ್ದು, ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಜೆಡಿಎಸ್ ಮುಖಂಡರಾದ ಹುಸ್ಕೂರು ಆನಂದ್ ಒತ್ತಾಯಿಸುವ ಮೂಲಕ, ಇತ್ತೀಚಿಗಷ್ಟೇ ಒಗ್ಗಟ್ಟು ಪ್ರದರ್ಶಿಸಿದ್ದ ಜೆಡಿಎಸ್ ಮುಖಂಡರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಬಯಲಾಗಿದೆ.

ಗುರುವಾರ ನಗರದಲ್ಲಿನ ಅವರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಸ್ಕೂರು ಆನಂದ್, ಪಂಚ ರತ್ನ ರಥಯಾತ್ರೆಯಲ್ಲಿ ಮುನೇಗೌಡ ಹಾಗೂ ಅವರ ಸಹೋದರ ತಮ್ಮ ಬೆಂಬಲಿಗರ ಮೂಲಕ, ನನ್ನ ಬೆಂಬಲಿಗರ ಮೇಲೆ ದೌರ್ಜನ್ಯ ನಡೆಸಿ ಕಾರ್ಯಕ್ರಮ ಆಯೋಜನೆಗೆ ಅಡ್ಡಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಪಂಚರತ್ನ ರಥ ಯಾತ್ರೆಗೆ ಕುರಿತಂತೆ ಹಿರಿಯ ಮುಖಂಡರಾದ ಹೆಚ್.ಅಪ್ಪಯ್ಯಣ್ಣ ನೇತೃತ್ವದಲ್ಲಿ ಒಟ್ಟಾಗಿ ಸಭೆ ನಡೆಸಲಾಗಿದ್ದು, ಆ ವೇಳೆ ಆರೂಢಿ, ಹೊಸಹಳ್ಳಿ ನನ್ನ ಆಯೋಜನೆಗೆ, ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರದಲ್ಲಿ ಹರೀಶ್ ಗೌಡ ಆಯೋಜಿಸುವುದು, ಹಾಗೂ ಮಧುರೆಯಲ್ಲಿ ಮುನೇಗೌಡ ಅವರು ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಆರೂಢಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆಗೆ ಬಿಡದೆ ಬೆಂಬಲಿಗರ ಮೂಲಕ ಬೆದರಿಕೆಯೊಡ್ಡಿದ್ದಾರೆ.
ಆರೂಢಿಯಲ್ಲಿ ಬ್ಯಾನರ್ ಅಳವಡಿಕೆ, ಪ್ರತ್ಯೇಕ ವೇದಿಕೆ ನಿರ್ಮಾಣ, ಕ್ಯಾಪ್ಸಿಕಂ ಹಾರಕ್ಕೆ ಬದಲಾಗಿ ಜೋಳದ ಹಾರ ತರುವ ಮೂಲಕ ಸಭೆಯ ನಿರ್ಣಯವನ್ನು ಧಿಕ್ಕರಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇದು ಮುನೇಗೌಡರ ಪವರ್ ಎಂದು ನನ್ನ ಹಾಗೂ ನನ್ನ ಬೆಂಬಲಿಗರನ್ನು ಅವಮಾನಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸ್ಥಳೀಯರನ್ನು ಹೊರತು ಪಡಿಸಿ, ಮತ್ತೆ ಮುನೇಗೌಡ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಸೋಲುಂಟಾಗಲಿದೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಸ್ಥಳೀಯರಿಗೆ ಚುನಾವಣೆಗೆ ಟಿಕೆಟ್ ನೀಡಬೇಕಿದೆ. ಈಗಾಗಲೇ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡಲಾಗಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
ರಾಜಘಟ್ಟದಲ್ಲಿ ನಡೆದ ಪಂಚ ರತ್ನ ರಥ ಯಾತ್ರೆಯ ವೇಳೆ ಮುನೇಗೌಡರ ಪುತ್ರ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಮೂಲಕ ಅಧಿಕಾರವಿಲ್ಲದೆಯೇ ತಮ್ಮ ಮನಸ್ಥಿತಿ ಬಯಲು ಮಾಡಿದ್ದು, ಇಂತವರಿಗೆ ಅಧಿಕಾರ ದೊರಕಿದರೆ ತಾಲೂಕಿನಲ್ಲಿ ಅಶಾಂತಿ ಸೃಷ್ಠಿಯಾಗಲಿದೆ. ಇದನ್ನು ತಪ್ಪಿಸಲು ನಾ ದನಿ ಎತ್ತಿರುವೆ.
ಇಂದು ಸುದ್ದಿಗೋಷ್ಠಿ ನಡೆಸುತ್ತಿರುವ ವಿಷಯ ಪಕ್ಷದ ಹಿರಿಯ ಮುಖಂಡರಾದ ಅಪ್ಪಯ್ಯಣ್ಣ ಅವರಿಗೂ ತಿಳಿಸಿದ್ದು, ನನಗಾದ ಅವಮಾನವನ್ನು ತಿಳಿಸಲು ಅನುಮತಿ ನೀಡಿದ್ದಾರೆ.
ಈಗಾಗಲೇ ಮುನೇಗೌಡ ಹಾಗೂ ಅವರ ಸಹೋದರ ರಾಜಗೋಪಾಲ್ ಅವರ ದೌರ್ಜನ್ಯದ ಕುರಿತು ಹೊಸಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ನೀಡಲಾಗಿದೆ. ರಥ ಯಾತ್ರೆಗೆ ತೊಂದರೆಯಾಗಬಾರದೆಂದು ಮೌನಕ್ಕೆ ಶರಣಾಗಿದ್ದೆ ಎಂದು ಆನಂದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪುಟ್ಟ ಬಸವರಾಜು, ಶಿವಣ್ಣ, ನಾರಾಯಣಗೌಡ, ಚಂದ್ರಾಮಣ್ಣ, ಸಿದ್ದಲಿಂಗಪ್ಪ, ಮುನಿರಾಜು, ಸುಬ್ರಮಣಿ, ಸೇರಿದಂತೆ ಹೊಸಹಳ್ಳಿ, ಆರೂಢಿ ಗ್ರಾಮದ ಮುಖಂಡರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
