ಬೆಂಗಳೂರು (Darshan Sudeep): ಕನ್ನಡ ಚಿತ್ರರಂಗದ ಖ್ಯಾತನಟ ಸುದೀಪ್ ಅವರ ನಟನೆ ‘ಮ್ಯಾಕ್ಸ್’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನವಾಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪಾಸಿಟಿವ್ ರೆಸ್ಪಾನ್ಸ್ ದೊರೆತಿದೆ. ಆ ಮೂಲಕ ವರ್ಷದ ಕೊನೆಯಲ್ಲಿ ಕಿಚ್ಚ ಸುದೀಪ್ ಯಶಸ್ಸು ಪಡೆದಿದ್ದಾರೆ.
ಆದರೆ ತಂದಿಟ್ಟು ತಮಾಷೆ ನೋಡುವುದನ್ನೇ ಕಾಯಕ ಮಾಡಿಕೊಂಡಿರುವ ಕೆಲ ಖಾಸಗಿ ಸುದ್ದಿ ವಾಹಿನಿಗಳು ಮ್ಯಾಕ್ಸ್ ಸಿನಿಮಾ ಬಿಡುಗಡೆ ಬೆನ್ನಲ್ಲೇ ದರ್ಶನ್ ಅಭಿಮಾನಿಗಳನ್ನು ಸುದೀಪ್ ವಿರುದ್ಧ ಎತ್ತಿಕಟ್ಟಲೆಂದು ಕೆಲ ವರದಿ ಪ್ರಸಾರ ಮಾಡಿದ್ದು, ಅಭಿಮಾನಿಗಳಿಂದ ಛೀಮಾರಿಗೆ ಒಳಗಾಗಿದಲ್ಲದೆ, ಸ್ವತಃ ನಟ ಸುದೀಪ್ ಅವರು ಕೂಡ ಮಾತಿನ ಮೂಲಕವೇ ಜಾಡಿಸಿದ್ದಾರೆ.
ಸಿನಿಮಾ ಯಶಸ್ಸಿನ ಸಂಭ್ರಮಾಚರಣೆ ವೇಳೆ ಕೇಕ್ಗೆ ಸಂಬಂಧಿಸಿದಂತೆ ಹಲವು ಅಂತೆಕಂತೆಗಳು ಕಟ್ಟಿದ ಸುದ್ದಿವಾಹಿನಿ ವಿರುದ್ಧ ವಾಗ್ದಾಳಿ ನಡೆಸಿರುವ ಸುದೀಪ್. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಸಿನಿಮಾ ಸಂಭ್ರಮದಲ್ಲಿ ಸುದೀಪ್ ಅವರು ಪತ್ನಿ ಮತ್ತು ತಮ್ಮವರೊಂದಿಗೆ ಸೇರಿ ಕೇಕ್ ಕತ್ತರಿಸಿದ್ದರು. ಆ ಕೇಕ್ ಮೇಲೆ ‘Bossism ಕಾಲ ಮುಗೀತು, Maximum Mass ಕಾಲ ಶುರುವಾಯ್ತು’ ಎಂದು ಬರೆಯಲಾಗಿತ್ತು. ಇದನ್ನು ದೊಡ್ಡ ವರದಿ ಮಾಡಿದ ಸುದ್ದಿವಾಹಿನಿ, ದರ್ಶನ್ ಕುರಿತಾಗಿಯೇ ಮಾಡಿದ್ದಾರೆ ಎಂಬಂತೆ ಅಭಿಮಾನಿಗಳ ನಡುವೆ ಬೆಂಕಿ ಹಚ್ಚಲು ಶುರುಮಾಡಿತು. ಈ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಲು ಶುರುವಾಯಿತು.

ನಿನ್ನೆ ನಡೆದ ಮಾಧ್ಯಮದವರೊಂದಿಗಿನ ಸಂವಾದದಲ್ಲಿ ಸ್ವತಃ ಕಿಚ್ಚ ಸುದೀಪ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಇಬ್ಬರು ಅಭಿಮಾನಿಗಳ ನಡುವೆ ವಿಷ ಬೀಜ ಬಿತ್ತಲು ಆರಂಭಿಸಿದ ಖಾಸಗಿ ಚಾನಲ್ ಹಾಗೂ ಅದರ ನಿರೂಪಕಿಯ ಹೆಸರೇಳದೆ ಮಂಗಳಾರತಿ ಮಾಡಿದರು.
ಸುದೀಪ್ ಹೇಳಿದ್ದಿಷ್ಟು; ದರ್ಶನ್ ಅವರಿಗೂ ನಂಗೂ ಏನೂ ಇಲ್ಲ ಸರ್. ಬಹಳ ಕಷ್ಟಪಟ್ಟು ಅವರು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಬೆಳೆಯಬೇಕು. ಇವೆಲ್ಲಾ ಸಮಸ್ಯೆಗಳು ಬೇಡ” ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
ಆ ವಾಹಿನಿಯಲ್ಲಿ ಒಂದು ಕಲಾವಿದನ ಹೆಸರು ತೆಗೆದುಕೊಂಡು ಟಾಂಟ್ ಅಂತಾ ಹೇಳಿದ್ರು. ಹಾಗೆಲ್ಲಾ ಏನೂ ಇಲ್ಲ. ತಮ್ಮ ಮೆಚ್ಚಿನ ತಾರೆಯರಿಗೆ ಅಭಿಮಾನಿಗಳು ಬಾಸ್ ಅಂತಾನೆ ಉಲ್ಲೇಖಿಸುತ್ತಾರೆ. ”ಯಶ್, ಶಿವಣ್ಣ, ಧ್ರುವ ಇವರಿಗೆಲ್ಲರಿಗೂ ಅವರವರ ಫ್ಯಾನ್ಸ್ ಬಾಸ್ ಅಂತಾನೆ ಕರೆಯುತ್ತಾರೆ.
ಒಬ್ಬ ಸ್ನೇಹಿತ, ನನ್ನ ಹುಡುಗ ಬೆಳಗ್ಗೆ ಚಿತ್ರಮಂದಿರಕ್ಕೆ ಹೋಗ್ತಾರೆ. ಈಗ ಈ ಮಾತನ್ನು ಏಕೆ ಹೇಳುತ್ತಿದ್ದೇನಂದ್ರೆ ನನ್ ಹುಡುಗ ಸರ್. ಅವನಿಗೇನಾದ್ರು ಆದ್ರೆ ಮೊದ್ಲು ಎದೆ ಕೊಟ್ಟು ನಿಲ್ಲೋನು ನಾನು. ಅವನು ಒಂದು ಮಾತು ಹೇಳ್ತಾನೆ, ಇವತ್ತಿಂದ ಕಿಚ್ಚ ಬಾಸ್ ಅಂತಾ ಕರೆಯೋದನ್ನು ನಿಲ್ಲಿಸಿ, ಕಿಚ್ಚ ಮಾಸ್ ಅನ್ನೋಣ ಅಂತಾನೆ. ಅದನ್ನೇ ಕೇಕ್ ಮೇಲೆ ಬರೆಸಿಕೊಂಡು ಬರ್ತಾನೆ.
ಅದನ್ನೇ ಹಿಡಿದು ಆ ಒಂದು ಮಾಧ್ಯಮ ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ’ ಅಂತಾ ಹೇಳಲು ಶುರುವಾಗುತ್ತೆ. ಇದಾದ ಮೇಲೆ ಯಾರದ್ದೋ ಫ್ಯಾನ್ಸ್, ಆ ಹುಡುಗನಿಗೆ ಬೆದರಿಕೆ ಹಾಕೋದೋ ಅಥವಾ ಏನಾದ್ರು ಹೆಚ್ಚು ಕಡಿಮೆ ಮಾಡಿದ್ರು ಅಂದ್ಕೊಳೋಣ….!! ಅದಕ್ಕೆ ನಾನು ಬಿಡೋದಿಲ್ಲ. ಮಾಡಿದ್ರು ಅಂದುಕೊಳ್ಳೋಣ.. ಹಾಗೆ ಹೇಳಿದವರು ಅಥವಾ ಸುದ್ದಿ ಹಬ್ಬಿಸಿದವರು ಜವಾಬ್ದಾರಿ ತೆಗೊಳ್ತಾರಾ ಸರ್ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಯಾರು ಸುದ್ದಿಯನ್ನು ಶುರು ಮಾಡಿದ್ರೋ ಆ ಮಾಧ್ಯಮದವರು ಅವರು ಅವರ ಯಜಮಾನ್ರಿಗೆ ಕರಿಯೋದು ಬಾಸ್ ಅಂತಾನೇ ಅಲ್ವಾ? ಹಾಗಾದ್ರೆ ನಾನ್ ಅವ್ರ ಬಾಸ್ಗೆ ಮಾಡಿಸಿದ್ನಾ ಕೇಕ್? ಎಂದು ಪ್ರಶ್ನಿಸಿದ ಸುದೀಪ್, ನಾನು ನನ್ನ ತಂದೆಗೆ ಬಾಸ್ ಅಂತಾ ಕರೆಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಯಶ್, ದರ್ಶನ್, ಧ್ರುವ, ಉಪ್ಪಿ, ಶಿವಣ್ಣ ಹೀಗೆ ಎಲ್ಲಾ ಸೇರಿದ್ರೇನೆ ಒಂದು ಕನ್ನಡ ಚಿತ್ರರಂಗ ಸರ್. ಇದೇ ಒಂದು ವಾಹಿನಿಯಲ್ಲಿ ದರ್ಶನ್ ಫ್ಯಾನ್ಸ್ ವಿಷಯ ಬಂದಾಗ ನಾನ್ ಹೇಳಿದ್ದೆ, ಫ್ಯಾನ್ಸ್ಗೆ ಬೈಯೋಕೆ ಹೋಗ್ಬೇಡಿ, ಅವ್ರಿಗೆ ಗೊತ್ತಾಗ್ತಿಲ್ಲ ಏನು ಮಾಡ್ಬೇಕು ಅನ್ನೋದು. ನೋವಲ್ಲಿ ಇದ್ದಾರೆ ಅವ್ರು ಅನ್ನೋದನ್ನ ತಿಳಿಸಿದ್ದೆ. ಹೀಗೆ ನಾನೇ ನನ್ನ ಬಾಯಲ್ಲಿ ಹೇಳಿದ್ಮೇಲೆ ಅವರಿಗೇಕೆ ಟಾಂಟ್ ಕೊಡಲಿ? ಎಂದು ಕಿಚ್ಚ ಪ್ರಶ್ನಿಸಿದರು.
ನಮ್ಮ ಹಿರಿಯರು ಚಿತ್ರರಂಗವನ್ನು ಅದ್ಭುತವಾಗಿ ಬೆಳೆಸಿ, ಅದನ್ನು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ನೀವು ಇನ್ನಷ್ಟು ಬೆಳೆಸಿ ಅಂತಾ ನಮಗೆ ಜವಾಬ್ದಾರಿ ವಹಿಸಿದ್ದಾರೆ. ಈಗ ಚಿತ್ರರಂಗ ನೋವಲ್ಲಿದೆ. ನಾವಿದನ್ನು ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ಜವಾಬ್ದಾರಿ ವಹಿಸಬೇಕಿದೆ. ತಮ್ಮಂದಿರೇ ನೀವಿದನ್ನು ಬೆಳೆಸಿ ಎಂದು ನಾವು ಹೇಳಬೇಕಿದೆ. ಇದೊಂದು ಕುಟುಂಬ.
ನಾನು ನನ್ನ ತಂದೆಗೆ ಬಾಸ್ ಅಂತಾ ಕರೆಯೋದು. ಆ ಕೇಕ್ ಮಾಡಿಸಿದ ಹುಡುಗನ ಮನಸ್ಸು ಕೂಡಾ ನನಗೆ ಗೊತ್ತು. ಸುದ್ದಿ ಹಬ್ಬಿಸಿದವರಲ್ಲಿ ನಾನು ಕೇಳಿಕೊಳ್ಳೋದು ಇಷ್ಟೇನೆ, ನಾವು ನೀವು ಪ್ರತಿದಿನ ಮುಖ ನೋಡಿಕೊಳ್ಳಬೇಕು. ಪ್ರೀತಿಯಿಂದ ಮಾತನಾಡಿಕೊಳ್ಳಬೇಕಾಗುತ್ತೆ.
ನಿಮ್ಮಲ್ಲೂ ಆ ಬೇಧಭಾವ ಬೇಡ, ನಮ್ಮಲ್ಲೂ ಬೇಡ. ಬಹಳ ವರ್ಷಗಳಿಂದ ನಾವು ಪ್ರಯಾಣ ಮಾಡಿಕೊಂಡು ಇಲ್ಲಿವರೆಗೂ ಬಂದಿದ್ದೀವಿ ಅಂದ್ಮೇಲೆ, ನಿಮ್ಮ ಬಗ್ಗೆ ನನಗೆ ಮತ್ತು ನನ್ನ ಬಗ್ಗೆ ನಿಮಗೆ ಗೊತ್ತಿದೆ. ಇಂತಹ ಕ್ಷುಲ್ಲಕ ವಿಷಯಗಳನ್ನು ಅಲ್ಲಲ್ಲೇ ಬಿಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ದರ್ಶನ್-ಸುದೀಪ್ ಅಭಿಮಾನಿಗಳ ಕಲ್ಪನೆಯ ಫೋಟೋ ಬಳಸಲಾಗಿದೆ.