ದೊಡ್ಡಬಳ್ಳಾಪುರ; ಮೇ.25 ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ (Bamul) ಚುನಾವಣೆ ರಂಗೇರಲಾರಂಭಿಸಿದ್ದು, ಜೆಡಿಎಸ್ ಹಿರಿಯ ಮುಖಂಡರಾದ ದಿವಂಗತ ಹೆಚ್.ಅಪ್ಪಯ್ಯಣ್ಣ. (H Appayanna) ಅವರ ಸಹೋದರ ಹೆಚ್.ನಾರಾಯಣಪ್ಪ (H Narayanappa) ಅವರು ಸ್ಪರ್ಧೆ ಮಾಡುವುದಾಗಿ ಘೋಷಿಸುವ ಮೂಲಕ ಮತ್ತಷ್ಟು ತೀವ್ರತೆ ಹೆಚ್ಚಿಸಿದ್ದಾರೆ.
ಈಗಾಗಲೇ ಬಿಜೆಪಿಯ ಹಾಲಿ ನಿರ್ದೇಶಕ ಬಿಸಿ ಆನಂದ್ ಕುಮಾರ್ (BC Ananad Kumar) ಅವರು ರೈತ ಪರ ಕಾರ್ಯಗಳ ಮೂಲಕ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಮತ್ತೊಂದೆಡೆ ಜೆಡಿಎಸ್ ಹಿರಿಯ ಮುಖಂಡ ಹುಸ್ಕೂರು ಆನಂದ್ (Huskur Ananad) ಅವರು ನಾನು ಸ್ಪರ್ಧಿ ಎನ್ನುತ್ತಿರುವ ಬೆನ್ನಲ್ಲೇ, ಅಪ್ಪಯ್ಯಣ್ಣ ಅವರ ಸಹೋದರ ನಾರಾಯಣಪ್ಪ ಅವರು ನಾನು ಆಕಾಂಕ್ಷಿ ಎಂದು ಘೋಷಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇಂದು ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿದ ನಾರಾಯಣಪ್ಪ (Narayanappa) ಅವರು, ಸಹೋದರರಾದ ಅಪ್ಪಯ್ಯಣ ಅವರ ಅಕಾಲಿಕ ನಿಧನದಿಂದಾಗಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ನೇಹಿತರು, ಹಿತೈಷಿಗಳು ಸ್ಪರ್ಧೆ ಮಾಡಲೇ ಬೇಕೆಂದು ಒತ್ತಡ ಹೇರುತ್ತಿದ್ದಾರೆ.
ಈಗಾಗಲೇ ಡೈರಿ ಕ್ಷೇತ್ರದಲ್ಲಿ ಕಾರ್ಯದರ್ಶಿಯಾಗಿ, ಮುಖ್ಯ ಕಾರ್ಯನಿರ್ವಾಹಕನಾಗಿ 38 ವರ್ಷ ಅನುಭವ ಹೊಂದಿದ್ದೇನೆ. ಅಲ್ಲದೆ ಹಾಡೋನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಡೈರಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.
ಬಮೂಲ್ ನಿರ್ದೇಶಕ ಸ್ಥಾನದ ಆಯ್ಕೆ ಕುರಿತು, ಈಗಾಗಲೇ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಮುಖಂಡರಾದ ಹರೀಶ್ ಗೌಡ ಅವರೊಂದಿಗೆ ಚರ್ಚೆ ನಡೆಸಲಾಗಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ನನಗೆ ಸಿಗುವ ವಿಶ್ವಾಸವಿದೆ. ಹುಸ್ಕೂರು ಆನಂದ್ ಅವರಿಗೆ ಯಾರು ಒತ್ತಡ ಹೇರಿದ್ದಾರೋ ಗೊತ್ತಿಲ್ಲ, ಅಪ್ಪಯ್ಯಣ್ಣ ಕುಟುಂಬದಿಂದ ಯಾರು ಒತ್ತಡ ಹೇರಿಲ್ಲ.
ಬಮೂಲ್ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು, ಟಿಕೆಟ್ ವಿಚಾರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ದನಾಗಿರುವುದಾಗಿ ನಾರಾಯಣಪ್ಪ ಅವರು ಇದೇ ವೇಳೆ ಸ್ಪಷ್ಟ ಪಡಿಸಿದ್ದಾರೆ.