ದಾಬಸ್ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಹಲವು ಗ್ರಾಮಗಳ ಮನೆಯ ಬಳಿ ಚಿರತೆಯ (Leopard) ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥ ರಲ್ಲಿ ಆತಂಕ ಉಂಟು ಮಾಡಿದೆ.
ತ್ಯಾಮಗೊಂಡ್ಲು- ಕೋಳಾಲ ರಸ್ತೆಯಲ್ಲಿರುವ ಶಿರಗನಹಳ್ಳಿ, ಮರಳಕುಂಟೆ, ಕುಂಟಬೊಮ್ಮನ ಹಳ್ಳಿ, ಮಣ್ಣೆರಾಂಪುರ ಗ್ರಾಮಗಳ ಸುತ್ತಮುತ್ತ ಹದಿನೈದು ದಿನಗಳಲ್ಲಿ ಮೂರು ಬಾರಿ ಚಿರತೆ ಓಡಾಟದ ಗುರುತುಗಳು ಕಂಡು ಬಂದಿವೆ.
ಪದೇಪದೆ ಚಿರತೆ ಹೆಜ್ಜೆ ಗುರುತುಗಳು ಕಂಡು ಬರುತ್ತಿದ್ದು, ಜನಸಾಮಾನ್ಯರು ಓಡಾಡಲೇ ಭಯಭೀತರಾಗಿದ್ದಾರೆ.
ಒಂದು ಬೋನ್ ವ್ಯವಸ್ಥೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಯಾವ ಅಧಿಕಾರಿಯೂ ಇತ್ತ ಬರುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಕುಂಟಬೊಮ್ಮನಹಳ್ಳಿ ಹಾಗೂ ಶಿರಗನಹಳ್ಳಿ ಮರಳಕುಂಟೆ ಗ್ರಾಮಗಳ ಸುತ್ತಮುತ್ತ ಚಿರತೆ ಓಡಾಡು ತ್ತಿದೆ. ಶಿರಗನಹಳ್ಳಿ ಬಸವಣ್ಣ ದೇವಾಲಯ ಸಮೀಪ ಚಿರತೆಯ ಹೆಜ್ಜೆಗುರುತುಗಳ ಬಗ್ಗೆ ಮಾಹಿತಿ ಬಂದಿದೆ.
ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದು ಬೋನ್ ಇಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)