ದೊಡ್ಡಬಳ್ಳಾಪುರ: ಪುರಸಭೆಗೆ (ಹಾಲಿ ನಗರಸಭೆ ” Municipal Council”) ಸೇರಿರುವ ಸರ್ವೇ ನಂ. 112ರ 20.00 ಎಕರೆ ಜಾಮೀನು ಪುರಸಭೆ ಎಂದು ನಮೂದಾಗಿದ್ದು ಕೂಡಲೇ ಈ ಸ್ವತ್ತನ್ನು ರಕ್ಷಿಸಿಕೊಳ್ಳುವಂತೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ಕುರಿತಂತೆ ಇಂದು ನಗರಸಭೆ ಪೌರಾಯುಕ್ತ ಕಾರ್ತೀಕ್ ಈಶ್ವರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ದೊಡ್ಡಬಳ್ಳಾಪುರ ನಗರಸಭೆಯ ಪಕ್ಕದಲ್ಲೇ ಇರುವ 20 ಎಕರೆ ಜಾಗವು ಪುರಸಭೆಗೆ ಸೇರಿದ್ದು ಎಂದು ದಾಖಲಾತಿಗಳು ತಿಳಿಸುತ್ತವೆಯಾದರೂ ಮೇಲ್ನೋಟಕ್ಕೆ ಪುರಸಭೆಯ ಜಾಗವೆಂದು ಭಾಸವಾಗುತ್ತಿಲ್ಲ.
ದೊಡ್ಡಬಳ್ಳಾಪುರ ನಗರ ವೇಗದಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ವಿಚಾರಗಳಿಗೆ ಈ ನಗರವು ಕೇಂದ್ರಬಿಂದುವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಹಾಗೆಯೇ ಇದೀಗ ನಮ್ಮ ಜಿಲ್ಲೆಯು ಬೆಂಗಳೂರು ಉತ್ತರ ಎಂದು ಘೋಷಣೆಯಾಗಿರುವ ಬೆನ್ನಲ್ಲೇ ನಮ್ಮ ನಗರಸಭೆ ಗ್ರೇಡ್ 1ಗೆ ಮುಂಬಡ್ತಿಯಾಗಿದೆ. ಹಾಗಾಗಿ ಹೆಚ್ಚಿನ ಕಾರ್ಯಗಳು ನಗರಸಭೆ ಹಾಗೂ ಪುರಸಭೆಯ ತೆಕ್ಕೆಗೆ ಬೀಳುವ ಕಾರಣ ಹೆಚ್ಚಿನ ಜಾಗದ ಹಾಗೂ ಕಟ್ಟಡ ಹಾಗೂ ಮೂಲಸೌಕರ್ಯಗಳ ಅವಶ್ಯಕತೆ ಹೆಚ್ಚುತ್ತದೆ.
ಆದ್ದರಿಂದ ಈಗಾಗಲೇ ಪುರಸಭೆಯ ಹೆಸರಿನಲ್ಲಿರುವ ಹಾಗೂ ನಗರಸಭೆಗೆ ಹೊಂದಿಕೊಂಡಂತೆಯೇ ಇರುವ ಈ 20 ಎಕರೆ ಜಾಗವನ್ನು ಅಳತೆ ಮಾಡಿಸಿ ಪುರಸಭೆಯ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಅಲ್ಲದೆ ಸರ್ಕಾರಿ ಸೌಕರ್ಯಗಳನ್ನು ನೀಡುವುದರ ಜೊತೆಯಲ್ಲಿ ಈ ಜಾಗದಲ್ಲಿ ಒಂದು ಫುಡ್ ಕೋರ್ಟ್ ಅನ್ನು ನಿರ್ಮಿಸಿದ್ದಲ್ಲಿ, ಬಹಳಷ್ಟು ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅನೂಕೂಲವಾಗುತ್ತದೆ. ಆದ್ದರಿಂದ ಫುಡ್ ಕೋರ್ಟ್ ನಿರ್ಮಿಸುವ ವಿಷಯನ್ನು ಮನ್ನಣೆಗೆ ತೆಗೆದುಕೊಳ್ಳಬೇಕೆಂದು ಹೇಳಿದರು.
ಭಗತ್ ಸಿಂಗ್ ಕ್ರೀಡಾಂಗಣದ ಸಮೀಪದ ಹೊಸ ಬಸ್ ನಿಲ್ದಾಣ, KSRTC ಬಸ್ ಡಿಪೋ, ಟಿಎಪಿಎಂಸಿಎಸ್ ಕಚೇರಿ 112 ಸರ್ವೆ ನಂಬರ್ಗೆ ಸೇರಿದ್ದು, ಈ ವ್ಯಾಪ್ತಿಯಲ್ಲಿ 20 ಎಕರೆ ಪುರಸಭೆಗೆ ಸೇರಿರುತ್ತದೆ.
ಈ ಜಾಗವನ್ನು ಕೂಡಲೇ ರಕ್ಷಿಸಿ ನಗರಸಭೆಗೆ ಸೇರಿಸಿಕೊಳ್ಳಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಈ ವೇಳೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಾನಂದ್, ಸುರೇಶ್, ಪ್ರಶಾಂತ್ ಇದ್ದರು.