ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ (Karnataka Nataka Academy) 2025-26ನೇ ಸಾಲಿನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಪ್ರಕಟವಾಗಿದೆ.
ಈ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನವೀರನಹಳ್ಳಿಯ ಶಿಕ್ಷಕ, ನಾಟಕಕಾರ ಸಿ.ವಿ.ಲೋಕೇಶ್ ಅವರಿಗೆ ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರದ ಮನ್ನಣೆ ದೊರೆತಿದೆ.
ಇಂದು ಪ್ರಕಟವಾದ ಪಟ್ಟಿಯಲ್ಲಿ 33 ಮಂದಿಗೆ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ದೊರೆತಿದೆ.
ಸಿ.ವಿ.ಲೋಕೇಶ್ ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನವೀರನಹಳ್ಳಿಯ ಸಿ.ವಿ.ಲೋಕೇಶ್ ಅವರು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಭೂಮಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಕ್ಕಳ ರಂಗಭೂಮಿ, ಜಾನಪದ ಕಲೆಗಳನ್ನು ಮಕ್ಕಳಲ್ಲಿ ಬಿತ್ತುತ್ತಾ ಆ ಮಕ್ಕಳು ತಾಲೂಕು, ಜಿಲ್ಲಾ, ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸುವಂತೆ ತರಬೇತಿ ನೀಡುತ್ತಾ ಇಲ್ಲಿಯವರೆವಿಗೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಂಗಭೂಮಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಹಿನ್ನೆಲೆ ಗಾಯಕನಾಗಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದವರೆಗೂ ಪ್ರತಿನಿಧಿಸಿದ್ದಾರೆ.
2004ರಲ್ಲಿ ಲೋಕಶಿಕ್ಷಣ ಇಲಾಖಾ ವತಿಯಿಂದ ರಾಜ್ಯಮಟ್ಟದ ಕಲಾತಂಡವನ್ನು ಪ್ರತಿನಿಧಿಸಿ ರಾಜ್ಯಮಟ್ಟದ ಅಂತರ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಪಾಲ್ಗೊಂಡು ತದನಂತರ ಕಲಾತಂಡ ಕಟ್ಟಿಕೊಂಡು ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಮೂಲಕ ಅಕ್ಷರದ ಅರಿವು ಮೂಡಿಸಲು ಅವಿರತ ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳ ರಂಗಭೂಮಿ ಚಟುವಟಿಕೆಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಗೀತಗಾಯನದ ಜೊತೆಗೆ ನಾಟಕ ಸ್ಪರ್ಧೆಗಳಿಗೆ ಸ್ವಂತ ಪರಿಕಲ್ಪನೆಯೊಂದಿಗೆ ಪ್ರತಿ ವರ್ಷ ಹೊಸ ಹೊಸ ನಾಟಕಗಳನ್ನು ನಿರ್ದೇಶಿಸಿ ಆ ಮೂಲಕ ಮಕ್ಕಳಿಗೆ ವಿವಿಧ ಹಂತಗಳವರೆಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ತರಬೇತಿ ನೀಡಿದ್ದಾರೆ.
ಅವರ ಈ ಕಲಾಸಕ್ತಿಯನ್ನು ಗುರುತಿಸಿದ ಅಂದಿನ ಸಹಾಯಕ ಶಿಕ್ಷಣಾಧಿಕಾರಿಗಳು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಸ್ಪರ್ಧೆಗೆ ನಾಟಕವೊಂದನ್ನು ನಿರ್ದೇಶಿಸಲು ಅವಕಾಶನೀಡಿದ್ದಾರೆ.
ಈ ಅವಕಾಶವು ಲೋಕೇಶ್ ಅವರ ಕಲಾಜೀವನದ ವಿಸ್ತರಣೆಯಲ್ಲಿ ಒಂದು ಮಹತ್ತರ ಮೈಲಿಗಲ್ಲು, ಕಾಕೋಳು ಸರೋಜಮ್ಮನವರ “ಪಾಂಚಜನ್ಯ” ನಾಟಕವನ್ನು ತಾಲೀಮುಗೊಳಿಸಿ ತಾಲೂಕು. ಜಿಲ್ಲಾ ಮತ್ತು ಸಿರಸಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರದಲ್ಲಿ ಭಾಗವಹಿಸಿದ್ದಲ್ಲದೆ ತುಮಕೂರಿನ ಹೆಸರಾಂತ ಗುಬ್ಬಿ ವೀರಣ್ಣನವರ ಕಲಾಕ್ಷೇತ್ರದಲ್ಲಿ ಶ್ರೀ ರಂಗ ರಂಗ ಹವ್ಯಾಸಿ ಕಲಾವೃಂದದವರು ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ನಾಟಕೋತ್ಸವದಲ್ಲಿ ಭಾಗವಹಿಸಿದ್ದ ನಮ್ಮಗಳಿಗೆ ‘ಅತ್ಯುತ್ತಮ ನಟಿ’ ಮತ್ತು ‘ಅತ್ಯುತ್ತಮ ನಿರ್ದೇಶಕ’ ವಿಭಾಗಳಲ್ಲಿ ಪ್ರಥಮ ಬಹುಮಾನ ಪಡೆದುದಲ್ಲದೆ, ಸುಮಾರು 12ಕ್ಕೂ ಹೆಚ್ಚು ಪ್ರದರ್ಶನಗೊಂಡಿದೆ.
ಈ ನಾಟಕದ ಬಹುದೊಡ್ಡ ಹೆಗ್ಗಳಿಕೆಯೆಂದರೆ ನಾಡಿನ ಹೆಸರಾಂತ ದೂರದರ್ಶನ ಚಂದನವಾಹಿನಿಯಲ್ಲಿ ಚಿತ್ರೀಕರಣಗೊಂಡು ಹಲವಾರು ಬಾರಿ ಪ್ರದರ್ಶನಗೊಳ್ಳುವ ಮೂಲಕ ನಾಡಿನಾದ್ಯಂತ ಮಕ್ಕಳ ಪ್ರತಿಭೆಗೆ ಪ್ರಶಂಸೆ ವ್ಯಕ್ತವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಪದವಿ ಕಾಲೇಜುಗಳಲ್ಲಿ ನೆಡೆಸುವ “ಕಾಲೇಜು ರಂಗೋತ್ಸವ” ಕಾರ್ಯಕ್ರಮಕ್ಕೆ ಶ್ರೀ ಕೊಂಗಾಡಿಯಪ್ಪ ಪ್ರಥಮ ಕಾಲೇಜಿನಲ್ಲಿ ಮಹಾಕವಿ ಕುವೆಂಪು ವಿರಚಿತ “ಸ್ಮಶಾನ ಕುರುಕ್ಷೇತ್ರಂ” ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ದೇಶನ ಮಾಡಿದ ಪಿ.ಲಂಕೇಶ್ ವಿರಚಿತ “ಗುಣಮುಖ” ನಾಟಕಗಳು ಆಧುನಿಕ ರಂಗಭೂಮಿಯ ಆಯಾಮಗಳಿಗೆ ಒರಳಲು ಅವಕಾಶಮಾಡಿಕೊಟ್ಟಿದೆ.
ಈ ಎರಡೂ ನಾಟಕಗಳು ಲೋಕೇಶ್ ರಂಗಭೂಮಿ ಪಯಣದಲ್ಲಿ ಸವಾಲಾಗಿತ್ತು. ಜೊತೆಗೆ ಇದರ ಜನಪ್ರಿಯತೆಯೂ, ಲೋಕೇಶ್ ಅವರಿಗೆ ಗುರುತನ್ನು ತಂದುಕೊಟ್ಟಿದೆ.
ಶಿವಮೊಗ್ಗದ ರಂಗಾಯಣದಲ್ಲಿ ನಡೆದ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಸತತ ಎರಡು ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.
ಲೋಕೇಶ್ ಅವರ ಜೀವನದ ಬಹು ದೊಡ್ಡ Task ಕೋವಿಡ್-19 ಕೋವಿಡ್ ವಾರ್ ರೂಂನಲ್ಲಿ ಕೋವಿಡ್ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತಹಸೀಲ್ದಾರ್ ಶಿವರಾಜ್ ಅವರು ಲೋಕೇಶ್ ಅವರ ಕಲೆಯ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ತಿಳಿಸಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತರಿಗೆ ಮನರಂಜನಾ ಕಾರ್ಯಕ್ರಮ ನೀಡಲು ತಿಳಿಸಿದಾಗ, ಜೀವದ ಹಂಗು ತೊರೆದು ಒಪ್ಪಿಕೊಂಡು ಮನರಂಜನಾ ಕಾರ್ಯಕ್ರಮ ನೀಡಿದ್ದರಿಂದ ತಾಲೂಕು ಮತ್ತು ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ “ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ” ಈ ಕಾರ್ಯಕ್ರಮದಲ್ಲಿ ಕಂದಾಯ ಸಚಿವರ ಮುಂದೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲೂ ಮತ್ತು ವಿವಿಧ ಇಲಾಖೆಯ ಕಾರ್ಯಕ್ರಮಗಳಲ್ಲಿ ಇವರ ತಂಡದೊಂದಿಗೆ ನಾಡಗೀತೆ, ರೈತಗೀತೆ ಮತ್ತು ಇತರೆ ಗೀತಗಾಯನ ಕಾರ್ಯಕ್ರಮ ನೀಡಲು ವಿವಿಧ ಇಲಾಖೆಗಳು ಸದಾ ಅವಕಾಶ ನೀಡುತ್ತಾ ಈ ಸೇವಾ ಕೈಂಕರ್ಯದಲ್ಲಿ ಕೈಹಿಡಿದು ನಡೆಸಿದ್ದಾರೆ.
ಶ್ರಮಣ ಸಂಸ್ಕೃತಿ ಟ್ರಸ್ಟ್ ಎಂಬ ಲೋಕೇಶ್ ಅವರ ಸಂಸ್ಥೆಯಡಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಮುನ್ನಡೆಯುತ್ತಿದ್ದಾರೆ.
ಈಗಾಗಲೇ ತಾಲೂಕಿನ ಹಲವೆಡೆ ಶಾಲಾ ಮಕ್ಕಳಿಗಾಗಿ ಬೇಸಿಗೆ ರಂಗ ಶಿಬಿರ, ಎನ್ ಎಸ್ ಎಸ್ ಶಿಬಿರ, ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಡಿಯಲ್ಲಿ ಸಾಸಲು ಹೋಬಳಿಯ ಚನ್ನವೀರನಹಳ್ಳಿ ಗ್ರಾಮದಲ್ಲಿ ಸುಸಜ್ಜಿತ “ಶ್ರಮಣ ಶ್ರದ್ಧಾ ಕೇಂದ್ರ”ವೆಂಬ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಿ ಆ ಭಾಗದ ಸುಮಾರು 8 ಹಳ್ಳಿಯ ಮಕ್ಕಳಿಗೆ ಓದುವ ಕೈಗೆ ಪುಸ್ತಕ ಕೊಡಬೇಕೆಂಬ ಮಹತ್ವಾಕಾಂಕ್ಷೆಯಡಿ ಅಕ್ಷರ ಕ್ರಾಂತಿಗೆ ಮುನ್ನಡಿಯಿಟ್ಟಿದ್ದಾರೆ.
1990ನೇ ಇಸವಿಯಿಂದಲೂ ಇವರ ಗ್ರಾಮ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಾದ, “ಶಿವಭಕ್ತ ಹರಳಯ್ಯ,” “ರಾಮಾಯಣ,” “ಕುರುಕ್ಷೇತ್ರ,” “ಮೂರುವರೆ ವಜ್ರಗಳು,” ಇನ್ನೂ ಅನೇಕ ನಾಟಕಗಳಲ್ಲಿ ಬಸವಣ್ಣ, ಶ್ರೀ ರಾಮ, ಆಂಜನೇಯ, ಶ್ರೀ ಕೃಷ್ಣ, ಕುಂತಿ, ಶಕುನಿ, ಅರ್ಜುನ, ವಿಧುರ, ಧುರ್ಯೋದನ, ಕರ್ಣ ಮುಂತಾದ ಪಾತ್ರಗಳಲ್ಲಿ ನಟಿಸುವುದರ ಜೊತೆಗೆ ರಂಗ ನಿರ್ದೇಶನ ಮಾಡುತ್ತಾ ರಂಗಭೂಮಿಯ ಕೈಂಕರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಒಟ್ಟಾರೆ ಈ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಾಗೂ ರಂಗಭೂಮಿ ಕ್ಷೇತ್ರಗಳ ಪಯಣದಲ್ಲಿ ಸೇವೆಯನ್ನು ಪರಿಗಣಿಸಿ ಈಗಾಗಲೇ ಚಿತ್ರದುರ್ಗದ ಮುರುಘಾ ಮಠದಿಂದ “ಶರಣ ಚೇತನ”, “ಶಿಕ್ಷಕ ಶ್ರೀ” ಮತ್ತು “ಕನಕಶ್ರೀ” ಪ್ರಶಸ್ತಿಗಳಲ್ಲದೆ ಹೊಂಬಾಳೆ ಪ್ರತಿಭಾ ರಂಗದ ರಾಜ್ಯ ಮಟ್ಟದ ಪ್ರಶಸ್ತಿ ಹೀಗೆ ಹಲವಾರು ಸನ್ಮಾನಗಳ ಲೋಕೇಶ್ ಅವರು ಪಡೆದಿದ್ದಾರೆ.
ಇಂತಹ ಸಾಧಕನಿಗೆ ಸಿ.ವಿ.ಲೋಕೇಶ್ ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ ದೊರೆತಿರುವುದು ದೊಡ್ಡಬಳ್ಳಾಪುರ ತಾಲೂಕಿನ ಹೆಮ್ಮೆಯಾಗಿದೆ.