ದೊಡ್ಡಬಳ್ಳಾಪುರ: ಜುಲೈ 22 ರಂದು ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪದ ಯಲ್ಲಮ್ಮ ದೇವಾಲಯ ವಾರ್ಷಿಕ ಪೂಜಾ ಕಾರ್ಯಮ ವೇಳೆ ನಡೆದಿದ್ದ ಹಲ್ಲೆ,ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ನೀಡಿದ್ದ ದೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ಆರೋಪಿತರಾದ ಯಶಸ್ವಿನಿ ಹಾಗೂ ಬೇಕರಿ ರಘು ನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ನಗರದ ಜೆಎಂಎಫ್ಸಿ ನ್ಯಾಯಾಲಯವು ಇಬ್ಬರು ಆರೋಪಿತರಿಗು ತಲಾ ₹10 ಸಾವಿರ ಬಾಂಡ್, ಇಬ್ಬರು ಶೂರಿಟಿ ಪಡೆದು ಜಾಮೀನು ಮಂಜೂರು ಮಾಡಿದೆ. ಪೊಲೀಸರು ವಿಚಾರಣೆಗೆ ಕರೆದಾಗ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.
ದೂರು ನೀಡಿದ್ದ ನಟ ಪ್ರಥಮ್ ಅವರಿಗೆ ಪೊಲೀಸರ ನೋಟಿಸ್ ಜಾರಿ ಮಾಡಿ ಸ್ಥಳ ಮಹಜರ್ಗೆ ಹಾಜರಾಗುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ಪಾಷ ಅವರ ಮುಂದೆ ಹಾಜರಾಗಿದ್ದರು.
ಪ್ರಥಮ್ ಅವರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈಗಾಗಲೇ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ನೀಡಿರುವ ಮಾಹಿತಿಗೂ, ಘಟನೆ ನಡೆದ ಸ್ಥಳಕ್ಕೂ ಹೋಲಿಕೆಯಾಗುತ್ತದೆ ಎನ್ನುವ ಅಂಶವು ಸೇರಿದಂತೆ ಇತರೆ ಎಲ್ಲಾ ಮಾಹಿತಿಗಳನ್ನು ಯಲ್ಲಮ್ಮ ದೇವಾಲಯ ಸಮೀಪವೇ ಪೊಲೀಸರು ದಾಖಲಿಸಿಕೊಂಡು ವಿಡಿಯೋ ಚಿತ್ರೀಕಣವನ್ನು ಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನಟ ಪ್ರಥಮ್, ‘ದೂರಿನಲ್ಲಿ ತಿಳಿಸಿರುವ ಎಲ್ಲಾ ಮಾಹಿತಿಗಳು ಸತ್ಯವಾಗಿವೆ. ಹಲ್ಲೆ, ಕೊಲೆ ಯತ್ನ ನಡೆದ ಸ್ಥಳವನ್ನು ಪೊಲೀಸರಿಗೆ ತೋರಿಸಲಾಗಿದೆ. ಉಳಿದ ಕಾನೂನು ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.