ಚಿಕ್ಕನಾಯಕನಹಳ್ಳಿ: ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬ್ಯಾಲರೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ (Rain) ಮರದ ಕೊಂಬೆ ಮುರಿದು ಬಿದ್ದು ವ್ಯಕ್ತಿಯೋರ್ವ ದುರ್ಮರಣಕ್ಕೀಡಾಗಿದ್ದಾರೆ.
ಮೃತರನ್ನು ಬ್ಯಾಲರೆ ಗ್ರಾಮದ ಪುಟ್ಟಯ್ಯ (68 ವರ್ಷ) ಎಂದು ಗುರುತಿಸಲಾಗಿದೆ.
ಪುಟ್ಟಯ್ಯ ತಮ್ಮ ತೋಟದಲ್ಲಿದ್ದ ವೇಳೆ ಏಕಾಏಕಿ ಮಳೆ ಆರಂಭವಾದ ಕಾರಣ ರಕ್ಷಣೆಗಾಗಿ ಅವರು ಮರದ ಕೆಳಗೆ ಆಶ್ರಯ ಪಡೆದಿದ್ದರು.
ಈ ಸಂದರ್ಭದಲ್ಲಿ ಬಿರುಗಾಳಿ ಸಹಿತ ಮಳೆ ಬಂದಿದ್ದರಿಂದ ಮರದ ಭಾರಿ ಗಾತ್ರದ ಕೊಂಬೆಯೊಂದು ಮುರಿದು ನೇರವಾಗಿ ಅವರ ತಲೆಯ ಮೇಲೆ ಬಿದ್ದಿದೆ. ಇದರ ತೀವ್ರತೆಗೆ ಪುಟ್ಟಯ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆರಾಯನ ಆರ್ಭಟ; ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತ.. 7 ಮಂದಿ ದುರ್ಮರಣ!
ಬೆಂಗಳೂರು: ಬುಧವಾರ ಸಂಜೆಯಿಂದ ಸುರಿಯುತ್ತಿರುವ ಭೀಕರ ಆಲಿಕಲ್ಲು ಮಳೆಗೆ ನಗರದಲ್ಲಿ ದೊಡ್ಡ ದುರಂತವೇ ಸಂಭವಿಸಿದೆ. ಮಳೆಯ ಆರ್ಭಟಕ್ಕೆ ಬೌರಿಂಗ್ ಆಸ್ಪತ್ರೆಯ (Bowring Hospital) ಶವಾಗಾರದ ಸಮೀಪವಿರುವ ಗೋಡೆಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ, ಸ್ಥಳದಲ್ಲಿದ್ದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಸಂಜೆಯಿಂದ ರಾಜಧಾನಿಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಶವಾಗಾರದ ಬಳಿ ಜನರು ಆಶ್ರಯ ಪಡೆದಿದ್ದ ವೇಳೆ ಈ ಹಳೆಯ ಗೋಡೆ ಕುಸಿದಿದೆ ಎನ್ನಲಾಗಿದೆ.
ಘಟನೆಯಲ್ಲಿ ಗೋಡೆಯ ಅವಶೇಷಗಳಡಿ ಸಿಲುಕಿ ಏಳು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಣ್ಣಿನಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿತ್ತು.
ಮೃತದೇಹಗಳನ್ನು ಹೊರತೆಗೆಯಲು ಜೆಸಿಬಿ ಯಂತ್ರಗಳ ನೆರವು ಪಡೆಯಲಾಯಿತು.
8 ಜನರು ತೀವ್ರ ನಿಗಾಘಟಕದಲ್ಲಿದ್ದು ಸಾವುನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆ ನಡೆಯುತ್ತಲೇ ಬೌರಿಂಗ್ ಆಸತ್ರೆಗೆ ದೌಡಾಯಿಸಿದ ಸಿಎಂ ಸಿದ್ದರಾಮಯ್ಯ, ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.
ಸಂಜೆ ವೇಳೆ ದಿಢೀರ್ ಮಳೆಗೆ ಶಿವಾಜಿ ನಗರದ ಬಳಿಯ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 7 ಜನರು ಸಾವನ್ನ ಪ್ಪಿದ್ದಾರೆ.
ತಬೀನ್ ತಾಜ್ (47 ವರ್ಷ), ಮುಬೀನ್ ತಾಜ್ (49 ವರ್ಷ), ಮಾಯ (51 ವರ್ಷ), ಸಾಜಿದ್ (20 ವರ್ಷ), ಅಜು (35 ವರ್ಷ), ಪ್ರೀತಿ (5 ವರ್ಷ), ಸಿಜಿ (47 ವರ್ಷ) ಮೃತಪಟ್ಟವರು.
ನಗರದ ಮೆಜೆಸ್ಟಿಕ್, ಶಿವಾಜಿನಗರ, ಎಂ.ಜಿ. ರಸ್ತೆ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು, ರಸ್ತೆಗಳು ಕೆರೆಯಂತಾಗಿವೆ. ಮಳೆಯ ಅಬ್ಬರಕ್ಕೆ 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆರಾಯನ ಆರ್ಭಟಕ್ಕೆ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದ್ದು, ಬಿಬಿಎಂಪಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ಹೈ ಅಲರ್ಟ್ ಆಗಿವೆ.
ಈ ಮಧ್ಯೆ ವಿಧಾನ ಸೌಧದ ಸುತ್ತಮುತ್ತ ಸೇರಿ ಹಲವೆಡೆ ಭಾರಿ ಆಲಿಕಲ್ಲು ಮಳೆಯಾಗಿದೆ. ಈ ವೇಳೆ ರಸ್ತೆಗಳು ಹಿಮದ ಹೊದಿಕೆಯಂತೆ ಕಂಡುಬಂತು. ಕಂಠೀರವ ಕ್ರೀಡಾಂಗಣ ಆಲಿಕಲ್ಲಿನಿಂದ ಸಂಪೂರ್ಣವಾಗಿ ಮುಚ್ಚಿಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

