ದೊಡ್ಡಬಳ್ಳಾಪುರ: ಬಹು ವರ್ಷಗಳ ಬೇಡಿಕೆಯಾಗಿದ್ದ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಆಡಳಿತಾತ್ಮಕ ಅನುಮೋದನೆ ಕನಸನ್ನು ರಾಜ್ಯ ಬಿಜೆಪಿ ಸರ್ಕಾರ ಕಡೆಗಣಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ 250 ಹಾಸಿಗಗಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆಯನ್ನಾಗಿ ಒಟ್ಟು ರೂ.89.10 ಕೋಟಿಗಳ ಅಂದಾಜು ಮೊತ್ತದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡದೆ ಸಚಿವ ಸಂಪುಟ ನಿರ್ಣಯವನ್ನು ಮುಂದೂಡಲಾಗಿದೆ.
ಈ ಕುರಿತಂತೆ ಶಾಸಕ ಟಿ.ವೆಂಕಟರಮಣಯ್ಯ ಸದನದಲ್ಲಿ ಪದೇ ಪದೇ ಸದನದಲ್ಲಿ ಮನವಿ ಮಾಡಿದರು ಸಹ, ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸದೆ ಇರುವುದು ತಾಲೂಕಿನ ಜನರ ಬೇಸರಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾದ ತಾಯಿಮಗು ಆಸ್ಪತ್ರೆ ಕರೊನಾ ಸಂಧರ್ಭದಲ್ಲಿ ತಾಲೂಕಿನ ಜನತೆಗೆ ಸಂಜೀವಿನಿಯಾಗಿ ಚಿಕಿತ್ಸೆ ನೀಡುತ್ತಿದೆ. ಇನ್ನು ಇದೇ ಅವಧಿಯಲ್ಲಿ ಆರಂಭವಾದ ವಸತಿ ಶಾಲೆಗಳು ಸಹ ಕರೊನಾ ಸೋಂಕಿತರ ಚಿಕಿತ್ಸೆಗೆ ಬಹಳಷ್ಟು ಅನುಕೂಲವನ್ನು ಉಂಟು ಮಾಡಿದೆ.
ಕರೊನಾ ಸೋಂಕಿನಂತಹ ಕಷ್ಟದ ಸಂಧರ್ಭದಲ್ಲಿ ತಾಲೂಕಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದ್ದರೆ ಜನತೆ ಮತ್ತಷ್ಟು ಸೌಲಭ್ಯ ದೊರಕುತ್ತಿತ್ತು. ಕರೊನಾ ಸೋಂಕಿಗೆ ಒಳಗಾದವರಿಗೆ ಇರುವ ಎರಡು ಆಕ್ಸಿಜನ್ ಸೌಲಭ್ಯದ ಕಾರಣ ಇತರ ತಾಲೂಕಿಗೆ ಅಥವಾ ಖಾಸಗಿ ಆಸ್ಪತ್ರೆಗೆ ಕಳಿಸಬೇಕಾದ ಅನಿರ್ವಾರ್ಯತೆ ಆರೋಗ್ಯ ಇಲಾಖೆಯದ್ದಾಗಿದೆ.
ಇದರ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಕೊರತೆ, ಆಕ್ಸಿಜನ್ ಕೊರತೆಯಿಂದಾಗಿ ಸಾವುನೋವುಗಳು ಉಂಟಾಗುತ್ತಿರುವುದು ಜನರ ಆತಂಕ ಹೆಚ್ಚಿಸಿದೆ. ತಾಲೂಕಿನ ಬಹುತೇಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ಕರೊನಾ ಚಿಕಿತ್ಸೆಗೆ, ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕರ್ತವ್ಯಕ್ಕೆ ನೇಮಿಸಿರುವುದರಿಂದ ತಾಲೂಕಿನ ಜನತೆಗೆ ಸಮರ್ಪಕವಾದ ಚಿಕಿತ್ಸಾ ಸೌಲಭ್ಯ ದೊರಕುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.
ಈ ಎಲ್ಲಾ ಘಟನಾವಳಿಗಳನ್ನು ಗಮನಿಸಿದರೆ ತಾಲೂಕಿಗೆ ಜಿಲ್ಲಾ ಆಸ್ಪತ್ರೆಯ ಅವಶ್ಯಕತೆ ಎಷ್ಟಿದೆ ಎಂಬುದು ಅರಿವಾಗುತ್ತದೆ. ಆದರೆ ವಿರೋಧ ಪಕ್ಷದ ಶಾಸಕರೆಂಬ ಕಾರಣಕ್ಕೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಲತಾಯಿ ಧೋರಣೆ: ಶಾಸಕ ಟಿ.ವೆಂಕಟರಮಣಯ್ಯ
ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪದೇ ಪದೇ ಮನವಿ ಮಾಡಿದರು ರಾಜ್ಯ ಸರ್ಕಾರ ಸ್ಪಂದಿಸದೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಹಿಂದೆ ಪೂರ್ತಿ ಪ್ರಮಾಣದ ಸಂಪುಟ ವಿಸ್ತರಣೆ ನಂತರ ಅನುಮೋದನೆ ನೀಡಲಾಗುವುದು ಎಂದು ಉತ್ತರ ನೀಡಲಾಗಿತ್ತು. ಆದರೆ ಈ ವೇಳೆ ಯಾವುದೇ ಉತ್ತರ ನೀಡದೆ ಸಚಿವ ಸಂಪುಟ ನಿರ್ಣಯ ಮುಂದೂಡುವ ಮೂಲಕ ಕರೊನಾ ಕಷ್ಟದ ಸಂಧರ್ಭದಲ್ಲಿ ಜನರಿಗೆ ಬಹು ಅಗತ್ಯವಾಗಿದ್ದ ಸೌಲಭ್ಯದಿಂದ ವಂಚಿತರನ್ನಾಗಿಸುತ್ತಿದೆ.

