ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಪೆಟ್ರೋಲ್,ಡೀಸೆಲ್ ಹಾಗೂ ತೈಲ ಬೆಲೆ ಏರಿಸಿರುವುದನ್ನು ಖಂಡಿಸಿ,ಪ್ರಜಾ ವಿಮೋಚನ ಚಳವಳಿ (ಸ್ವಾಭಿಮಾನ) ಸಂಘಟನೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ.ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿವಿಸಿ (ಸ್ವಾ) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಜಿಲ್ಲಾಧ್ಯಕ್ಷ ಹನಮಯ್ಯ ಗೂಳ್ಯ, ಕಳೆದ ಮೂರು ತಿಂಗಳಿನಿಂದ ಕೊವಿಡ್ ಹಿನ್ನಲೆಯ ಲಾಕ್ಡೌನ್ನಿಂದಾಗಿ ದೇಶದ ಬಡ ಹಾಗೂ ಮಧ್ಯಮ ವರ್ಗದ ಜನ ಬಳಲುತ್ತಿದ್ದಾರೆ. ಈ ನಡುವೆ ಕೊರೊನಾ ಹೆಸರಿನಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ ಪ್ಯಾಕೇಜ್ ನೀಡಿ, ಇದರ ನಷ್ಟವನ್ನು ಭರಿಸಲು ಪೆಟ್ರೋಲ್, ಡೀಸೆಲ್ ಹಾಗೂ ತೈಲ ಬೆಲೆಗಳನ್ನು ದಿನೇ ದಿನೇ ಏರಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜನಸಾಮಾನ್ಯರಿಗೆ ಹೊರೆ ಹೆಚ್ಚಾಗುತ್ತದೆ.ತೈಲ ಬೆಲೆ 15 ವರ್ಷಗಳದೀಂಚೆಗೆ ತೀವ್ರ ಕುಸಿತ ಕಂಡಿದ್ದರೂ ಬೆಲೆ ಏರಿಸುತ್ತಿರುವುದು ಜನವಿರೋಧಿ ನೀತಿಯಾಗಿದೆ.ಈ
ನಿಟ್ಟಿನಲ್ಲಿ ತೈಲ ಬೆಲೆ ಕಡಿಮೆ ಮಾಡುವುದರೊಂದಿಗೆ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಿವಿಸಿ (ಸ್ವಾ) ಜಿಲ್ಲಾ ಕಾರ್ಯದರ್ಶಿ ಕಾರಹಳ್ಳಿ ಕೆಂಪಣ್ಣ,ತಾಲೂಕು ಅಧ್ಯಕ್ಷ ಮದ್ದೂರಪ್ಪ,ದೇವನಹಳ್ಳಿ ಅಧ್ಯಕ್ಷ ಸೋಲೂರು ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.