ದೊಡ್ಡಬಳ್ಳಾಪುರ: ನಗರಸಭೆಗೆ ಆದಾಯ ತರುವ ಪ್ರಮುಖ ಮೂಲಗಳಾದ ವಾಣಿಜ್ಯ, ಉದ್ಯಮ, ಪರವಾನಗಿ, ಆಸ್ತಿ ತೆರಿಗೆ, ಜಾಹಿರಾತು ಶುಲ್ಕಗಳ ಸಂಗ್ರಹದ ಕಡೆಗೆ ಆದ್ಯತೆ ನೀಡಿ, ನಗರದಲ್ಲಿ ತುರ್ತಾಗಿ ಆಗಬೇಕಿರುವ ವಿದ್ಯುತ್ ಚಿತಾಗಾರ, ಮಳೆ ನೀರು ಸಂಗ್ರಹಣೆ, ಒಳಚರಂಡಿ ನೀರಿನ ಶುದ್ದೀಕರಣ, ಕಸಾಯಿಖಾನೆ ಸ್ಥಳಾಂತರಕ್ಕೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಸಾರ್ವಜನಿಕ ಅಭಿಪ್ರಾಯಗಳು ನಗರದ ಡಾ.ರಾಜ್ಕುಮಾರ್ ಕಲಾಮಂದಿರದಲ್ಲಿ ನಗರಸಭೆ ವತಿಯಿಂದ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಕೇಳಿ ಬಂದವು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು ಮಾತನಾಡಿ, ನಗರಸಭೆಯ ಆದಾಯ ಬರೀ ಪುಸ್ತಕದಲಿ ಕಾಣುತ್ತಿರುವುದೇ ಹೊರತು ವಾಸ್ತವದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ. ನಗರಸಭೆಯಲ್ಲಿ ಸ್ವಚ್ಛತೆ, ವಾಹನಗಳ ನಿರ್ವಹಣೆ ಬೀಡಾಡಿ ರಾಸುಗಳ, ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಇವುಗಳ ನಿಯಂತ್ರಣಕ್ಕೆ ಬಜೆಟ್ನಲ್ಲಿ ಹಣ ಮೀಸಲಿಟ್ಟು ಕೆಲಸ ಮಾಡಬೇಕು. ಉದ್ದಿಮೆ ತೆರಿಗೆಯನ್ನು ಕಡ್ಡಾಯಗೊಳಿಸಬೇಕು. ನಗರಸಭೆಯ ಸ್ವತ್ತುಗಳನ್ನು ಉಳಿಸಿಕೊಳ್ಳಲು, ಈ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಆದಾಯ ಬರಲಿದೆ ಎಂದು ಸಲಹೆ ನೀಡಿದರು.
ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮರಗಳ ಆಳವಡಿಕೆ, ನಾಗರಕೆರೆ ಅಭಿವೃದ್ದಿ, ಉದ್ಯಾನವನಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. ಹೊಸ ಮಾರುಕಟ್ಟೆ ಸಂಕೀರ್ಣ ಪೂರ್ಣಗೊಳಿಸಬೇಕು. ಕೊಳಗೇರಿ ನಿವಾಸಿಗಳಿಗೆ ಮಂಜೂರಾಗಿರುವ ಮನೆಗಳಿಗೆ ಬಾಕಿ ಹಣವನ್ನು ನಗರಸಭೆ ಪಾವತಿಸಬೇಕಿದೆ. ಚಿಕ್ಕತುಮಕೂರು ಕೆರೆ ಅಂಗಳದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ನೈಸರ್ಗಿಕವಾಗಿ ನೀರು ಶುದ್ದೀಕರಣ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ನೀರು ಶುದ್ದೀಕರಣಕ್ಕೆ ಯಾಂತ್ರಿಕ ವಿಧಾನವನ್ನು ಆಳವಡಿಸಬೇಕು. ಇದಕ್ಕೆ ಅಗತ್ಯ ಹಣಕಾಸನ್ನು ಬಜೆಟ್ನಲ್ಲಿ ಮೀಸಲಿಡಬೇಕು.
ಕೊಂಗಾಡಿಯಪ್ಪ ಅವರ ಹೆಸರಿನಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ, ಪ್ರಮುಖ ವೃತ್ತಗಳಲ್ಲಿ ಅಂಬೇಡ್ಕರ್, ಕೊಂಗಾಡಿಯಪ್ಪ ಮೊದಲಾದ ಮಹನೀಯರ ಪುತ್ಥಳಿ ಸ್ಥಾಪನೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದವು.
13.58 ಕೋಟಿ ರೂ ಉಳಿತಾಯದ ಕರಡು ಬಜೆಟ್: ನಗರಸಭೆ ಮುಖ್ಯ ಲೆಕ್ಕಾಕಾಧಿರಿ ನಂದೀಶ್ ಬಜೆಟ್ ವಿವರ ಮಂಡಿಸಿ, ನಗರಸಭೆಯ 2020-21ನೇ ಸಾಲಿನ ಪರಿಷ್ಕೃತ ಅಂದಾಜು ಆಯವ್ಯಯದಲ್ಲಿ ಆದಾಯ 44.47 ಕೋಟಿ ರೂ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು 30.89 ಕೋಟಿ ರೂಗಳಾಗಿದೆ. 13.58 ಕೋಟಿ ರೂ ಉಳಿತಾಯ ನಿರೀಕ್ಷಿಸಲಾಗಿದೆ.
2019-20 ನೇ ಸಾಲಿನ ವಾಸ್ತವಿಕ ಲೆಕ್ಕದಲ್ಲಿ ಆದಾಯ 40.89 ಕೋಟಿ ರೂ ಇದರಲ್ಲಿ ಖರ್ಚು 23.01 ಕೋಟಿ ರೂಗಳಾಗಿದೆ. 17.87 ಕೋಟಿ ರೂ ಉಳಿತಾಯವಾಗಿದೆ.
2020ರ ಡಿಸೆಂಬರ್ ತಿಂಗಳ ಅಂತ್ಯದವರೆಗೆ 34.05 ಕೋಟಿ ರೂ ಕ್ರೋಡೀಕರಣವಾಗಿದ್ದು,ಇದರಲ್ಲಿ ಖರ್ಚಾಗಿರುವುದು 17.01 ಕೋಟಿಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಉಳಿಕೆ 17.03 ಕೋಟಿ ರೂ ಆಗಿದೆ ಎಂದು ತಿಳಿಸಿದರು.
ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಮಾತನಾಡಿ, ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪರಿಗಣಿಸಿ ಆದಷ್ಟೂ ಅನುಷ್ಟಾನಕ್ಕೆ ತರಲು ಕ್ರಮ ವಹಿಸಲಾಗುವುದು. ತೆರಿಗೆ ಸಂಗ್ರಹಕ್ಕೆ ನಿರ್ವಾಹಕರನ್ನು ನೇಮಿಸಿಕೊಂಡಿದ್ದು, ಇನ್ನೆರಡು ತಿಂಗಳಲ್ಲಿ ಬಗೆಹರಿಯಲಿದೆ. ಕಸ ನಿರ್ವಹಣೆ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಬಜೆಟ್ನಲ್ಲಿ ವ್ಯಕ್ತವಾದ ಸಲಹೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಎಇಇ ಶೇಖ್ ಫಿರೋಜ್ ಸೇರಿದಂತೆ ನಗರಸಭೆ ವಿವಿಧ ವಿಭಾಗದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಮಾಜಿ ನಗರಸಭಾ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.