ನವದೆಹಲಿ: ಕಳ್ಳತನ ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಕರೆದುಕೊಂಡು ಹೋಗುವಾಗ ಪರಾರಿಯಾಗುವ ಭರದಲ್ಲಿ ವಾಹನದಿಂದ ಜಿಗಿದು ಒಬ್ಬ ಸಾವನ್ನಪ್ಪಿರುವ (Dies) ಘಟನೆ ನೈಋತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಡೆದಿದೆ.
ಪೊಲೀಸ್ ವಾಹನದಿಂದ ಜಿಗಿದ ಕಾರಣ ಬಂಧನದಲ್ಲಿದ್ದ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಕಸ್ಟಡಿ ಸಾವು ಎಂದು ಆರೋಪಿಸಿ ಸಮಲ್ಟಾ-ಕಪಶೇರಾ ರಸ್ತೆ ತಡೆದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ನಡುವೆ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ.
ಹೆಡ್ ಕಾನ್ಸ್ಟೆಬಲ್ ಬಲ್ಬರ್ ಸಿಂಗ್ ಮತ್ತು ಕಾನ್ಸ್ಟೆಬಲ್ ನಿತೇಶ್ ಅವರು ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಿತ್ಯ ಮೋಟಾರ್ ಸೈಕಲ್ನಲ್ಲಿ ಗಸ್ತಿನಲ್ಲಿದ್ದಾಗ, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಈ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸಿದ್ದರು ನಂತರ ನಿಲ್ಲಿಸುವಂತೆ ಸೂಚಿಸಿದಾಗ, ಇಬ್ಬರು ಪರಾರಿಯಾಗಲು ಪ್ರಯತ್ನಿಸಿದರು. ತಕ್ಷಣ ಬೆನ್ನಟ್ಟಿ ಅವರಿಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ) ಸುರೇಂದ್ರ ಚೌಧರಿ ಹೇಳಿದರು.
ಬಂಧಿತ ವ್ಯಕ್ತಿಗಳನ್ನು ವಿಕಾಸ್ ಅಲಿಯಾಸ್ ಮಜ್ಜು (28) ಮತ್ತು ರವಿ ಸಾಕ್ಷಿ ಅಲಿಯಾಸ್ ರವಿ ಕಾಲಿಯಾ (19) ಎಂದು ಗುರುತಿಸಲಾಗಿದೆ. ಇಬ್ಬರೂ ದೆಹಲಿಯ ಸಮಲ್ಕಾ ನಿವಾಸಿಗಳು. ವಿಕಾಸ್ನಿಂದ ಕಂಟ್ರಿಮೇಡ್ ಪಿಸ್ತೂಲ್ ಮತ್ತು ಜೀವಂತ ಕಾಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ.
ಅವರು ಓಡಿಸುತ್ತಿದ್ದ ದ್ವಿಚಕ್ರ ವಾಹನವನ್ನು ಪಾಲಂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಕಳ್ಳತನ ಮಾಡಿರುವುದು ಕಂಡುಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಕಪಶೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಸರ್ಕಾರಿ ವಾಹನದಲ್ಲಿ ವಸಂತ್ ಕುಂಜ್ನ ಲಾಕಪ್ಗೆ ಕರೆದೊಯ್ಯುತ್ತಿದ್ದಾಗ, ವಾಹನವು ಪೊಲೀಸ್ ಠಾಣೆ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ, ಇಬ್ಬರೂ ನಿಧಾನವಾಗಿ ಚಲಿಸುತ್ತಿದ್ದ ವ್ಯಾನ್ನಿಂದ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.
ಜಿಗಿತದ ಕಾರಣದಿಂದಾಗಿ ಇಬ್ಬರಿಗೂ ಗಾಯಗಳಾಗಿವೆ. ಆದರೆ ರವಿ ಸಾಕ್ಷಿ ಅವರನ್ನು ಐಜಿಐ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸಣ್ಣಪುಟ್ಟ ಗಾಯಗೊಂಡಿರುವ ವಿಕಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.