ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯನವರನ್ನ ಪಕ್ಷದಿಂದ ಉಚ್ಛಾಟನೆ ಮಾಡೋ ಧಮ್ ಇದೆಯಾ ಡಿಕೆ ಶಿವಕುಮಾರ್ (DK Shivakumar) ಅವರೇ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ (R Ashoka) ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ವಿಡಿಯೋ ಒಂದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಈ ಈ ರೀತಿ ಪ್ರಶ್ನಿಸಿರುವ ಅವರು, “ಉತ್ತರನ ಪೌರುಷ ಒಲೆಯ ಮುಂದೆ” ಎನ್ನುವ ಹಾಗೆ ನಿಮ್ಮ ಪ್ರತಾಪ ಬರೀ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆಯೋದಕ್ಕೆ ಮಾತ್ರ ಸೀಮಿತನಾ ಡಿಸಿಎಂ ಡಿಕೆ ಶಿವಕುಮಾರ್ ಅವರೇ?
ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸಭೆ ಮಾಡಲೂ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದೀರಲ್ಲ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪಕ್ಷದಿಂದ ಉಚ್ಛಾಟನೆ ಮಾಡಿ ನೋಡೋಣ.
ನಿಮ್ಮ ಪಕ್ಷದ ಸರ್ವೋಚ್ಚ ನಾಯಕಿ ಪ್ರಧಾನಿ ಆಗಿದ್ದಾಗ ಕಪ್ಪು ಬಾವುಟ ತೋರಿಸಿದ್ದ ವ್ಯಕ್ತಿಯನ್ನ ಪಕ್ಷಕ್ಕೆ ಕರೆದುಕೊಂಡು ಬಂದು ಎರಡೆರಡು ಬಾರಿ ಮುಖ್ಯಮಂತ್ರಿ ಮಾಡಿ, ಅವರ ಋಣದಲ್ಲಿ ಅಧಿಕಾರ ಅನುಭವಿಸುತ್ತಿದ್ದೀರಲ್ಲ, ಬಿಜೆಪಿ ಮಾಡುವ ಪ್ರತಿಭಟನೆಗೆ ಧಮ್ಕಿ ಹಾಕುವ ಯಾವ ನೈತಿಕತೆ ಇದೆ ತಮಗೆ? ಎಂದು ಪ್ರಶ್ನಿಸಿದರು.