ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನ (Sri Ghati Subramanya Temple) ಬಳಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು (A.B.Badavaraju) ಅವರು ಆದೇಶಿಸಿದ್ದು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಛತ್ರಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ಲೋಟಿ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಲ್ಸ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ನಿಂದ ತಯಾರಾದಂತಹ ಮೇಲ್ಕಂಡ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ರಾಜ್ಯದ್ಯಂತ ನಿಷೇಧಿಸಿ ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ವರದಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಒಂದು ಬಾರಿ ಉಪಯೋಗಿಸಿದಂತಹ ಪ್ಲಾಸ್ಟಿಕ್ ನೀರಿನ ಬಾಟಲ್ಗಳು, ಸ್ಪೂನ್, ಪ್ಲೇಟ್ಸ್ ಮತ್ತು ಪ್ಲಾಸ್ಟಿಕ್ ಗ್ಲಾಸ್ ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಕಂಡುಬಂದಿರುತ್ತದೆ.
ದೇವಸ್ಥಾನದಲ್ಲಿ ಇರುವ ಅಂಗಡಿಗಳು ಹಾಗೂ ದೇವಾಲಯದ ಆವರಣದಲ್ಲಿರುವ ಅಂಗಡಿಗಳು ಪ್ಲಾಸ್ಟಿಕ್ ಬಾಟಲ್, ತಿಂಡಿ ತಿನುಸುಗಳಿರುವ ಪ್ಲಾಸ್ಟಿಕ್ ಗ್ಲಾಸ್ ಪ್ಲಾಸ್ಟಿಕ್ ಕವರ್ಗಳನ್ನು ಅಂಗಡಿಗಳಿಂದ ಖರೀದಿ ಮಾಡಿ ಕೊಂಡೊಯ್ಯುತ್ತಾರೆ. ಸದರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದೇವಸ್ಥಾನದ ಆವರಣದಲ್ಲಿ ಎಲ್ಲೆಂದರಲ್ಲಿ ಹಾಗೂ ಅಂಗಡಿ ಮುಂಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಪ್ರವಾಸಿ ತಾಣವನ್ನು ಮಲೀನಗೊಳಿಸಿರುತ್ತಾರೆ.
ಮುಂದುವರೆದು ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಅಪಾಯವನ್ನು ಉಂಡು ಮಾಡುತ್ತದೆ. ಈ ರೀತಿ ಪ್ರವಾಸಿಗರು ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರವಾಸಿ ತಾಣದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ಪದಾರ್ಥಗಳಿಂದ ಆ ಪ್ರದೇಶದಲ್ಲಿ ವನ್ಯಜೀವಿಗಳು ಇದ್ದು ಈ ಪ್ರವಾಸಿ ತಾಣದಲ್ಲಿ ಒಂದು ಬಾರಿ ಉಪಯೋಗಿಸಿದಂತಹ ಪ್ಲಾಸ್ಟಿಕ್ಯುಕ್ತ ಪದಾರ್ಥಗಳನ್ನು ನಿಷೇಧಿಸಿ ಪರಿಸರಕ್ಕೆ ಹಾನಿಯಾಗದಂತೆ ಮರುಬಳಕೆಯಾಗುವಂತಹ ಸಾಮಗ್ರಿ/ಪದಾರ್ಥಗಳನ್ನು ಪರಿಚಯಿಸಿದಲ್ಲಿ ಅಲ್ಲಿನ ಪರಿಸರವನ್ನು ಸಂರಕ್ಷಿಸುವುದರ ಜೊತೆಗೆ ಪ್ರವಾಸಿ ತಾಣಗಳಲ್ಲಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಬಹುದಾಗಿರುವುದರಿಂದ ಒಂದು ಬಾರಿ ಉಪಯೋಗಿಸುವಂತಹ ಪ್ಲಾಸ್ಟಿಕ್ ಯುಕ್ತ ಪದಾರ್ಥಗಳನ್ನು ನಿಷೇಧಿಸಲು ಕೋರಿರುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರಸಿದ್ಧವಾಗಿರುವ ಪ್ರವಾಸಿ ತಾಣವಾಗಿದ್ದು, ಪುರಾತನ ಪ್ರವಾಸಿ ತಾಣವಾಗಿದೆ. ಈ ಪ್ರವಾಸಿ ತಾಣವನ್ನು ಮತ್ತು ಪರಿಸರವನ್ನು ವೀಕ್ಷಿಸಲು ವಾರಾಂತ್ಯಕ್ಕೆ ದಿನಗಳಲ್ಲಿ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಆದರೆ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಉಪಯೋಗಿಸಿ ಬಿಸಾಡುವಂತಹ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಕೈ ಚೀಲ, ತಟ್ಟೆ ಲೋಟ, ಪ್ಲಾಸ್ಟಿಕ್ ಬಾಟಲಿಗಳು ಇತ್ಯಾದಿತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿ ಪರಿಸರ ಮಾಲಿನ್ಯ ಉಂಟುಮಾಡುತ್ತಿರುವುದನ್ನು ಗಮನಿಸಲಾಗಿದೆ.
ಈ ರೀತಿ ಅಜಾಗರೂಕತೆಯಿಂದ ಎಸೆದ ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣಿನಲ್ಲಿನ ಸೂಕ್ಷ್ಮ ಜೀವಿಗಳ ಮೇಲೆ ದುಷ್ಟರಿಣಾಮವನ್ನು ಉಂಟುಮಾಡಿ ಮಣ್ಣಿನ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಈ ಹಿನ್ನಲೆಯಲ್ಲಿ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದ ಪ್ರದೇಶದಲ್ಲಿರುವ ಸಸ್ಯ ಸಂಕಲುಗಳನ್ನು ಸಂರಕ್ಷಿರುವ, ಪ್ರಾಣಿ ಪಕ್ಷಿಗಳನ್ನು, ಸೂಕ್ಷ್ಮ ಜೀವಿಗಳನ್ನು ಮತ್ತು ಮಾನವ ಸಂಕುಲವನ್ನು ಸಂರಕ್ಷಿಸುವ ಹಾಗೂ ಇಲ್ಲಿನ ಪ್ರಾಕೃತಿಕ ಸೊಬಗಿನ ನೈರ್ಮಲ್ಯತೆಯನ್ನು ಯಥಾರೀತಿಯಲ್ಲಿ ಕಾಪಾಡುವ ಹಿತ ದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರದೇಶದ ವ್ಯಾಪ್ತಿಯಲ್ಲಿ ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ ನಿಂದ ತಯಾರಾದಂತಹ ಪ್ಲಾಸ್ಟಿಕ್ ವಸ್ತುಗಳ ಕೊಂಡೊಯ್ಯುವಿಕೆ, ಬಳಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ.
ಅಲ್ಲದೆ ಈ ಆದೇಶವು ಉಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ IPC 188 ಮತ್ತು ಅನ್ವಯಿಸಬಹುದಾದ ಇತರೆ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.