ದೊಡ್ಡಬಳ್ಳಾಪುರ: ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಮುದಾಯದ ಅಂಕಿ ಅಂಶಗಳು ಮುಖ್ಯವಾಗಿದ್ದು, ಬ್ರಾಹ್ಮಣ ಸಮುದಾಯದ ಸಮೀಕ್ಷೆ ಮತ್ತೊಮ್ಮೆ ನಡೆಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಲಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಹೇಳಿದರು.
ತಾಲೂಕಿನ ಘಾಟಿ ಕ್ಷೇತ್ರದ ಬ್ರಾಹ್ಮಣರ ಧರ್ಮಶಾಲಾದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 42 ಲಕ್ಷ ಬ್ರಾಹ್ಮಣರಿದ್ದು, ಸುಮಾರು 1.35 ದೇವಾಲಯಗಳಿಂದ 3.5 ಲಕ್ಷ ಅರ್ಚಕ ವೃತ್ತಿಯಲ್ಲಿ ತೊಡಗಿದ್ದಾರೆ. ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ 5 ಕೋಟಿ ರೂಗಳನ್ನು ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ವಿತರಿಸಲು ಸೂಚನೆ ಬಂದಾಗ ಯಾರಿಗೆ ನೀಡಬೇಕೆಂಬ ಗೊಂದಲ ಉಂಟಾಯಿತು. ಈ ದಿಸೆಯಲ್ಲಿ ಅರ್ಚಕರನ್ನು ಅಸಂಘಟಿತ ಕಾರ್ಮಿಕರಂತೆ ಪರಿಗಣಿಸಭೇಕಿದ್ದು, ಸೌಲಭ್ಯಗಳನ್ನು ಪಡೆಯಲು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವ ಅಗತ್ಯವಿದ್ದು, ಸಂಘಟನೆಗಳು ಇದಕ್ಕೆ ಇಂಬು ನೀಡುತ್ತವೆ. ಸಂಘಟಿತವಾಗಿ ಸಮುದಾಯ ಒಗ್ಗೂಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದರು.
ಬ್ರಾಹ್ಮಣ ಅಭಿವೃದ್ದಿ ಮಂಡಲಿಯಿಂದ ಬ್ರಾಹ್ಮಣ ಸಮಾಜದಲ್ಲಿ ಸುಮಾರು 24 ಉಪ ಜಾತಿಗಳಿದ್ದು, ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಕಂದಾಯ ಇಲಾಖೆ ವತಿಯಿಂದ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಐ.ಎ.ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ. ಮಂಡಲಿ ವತಿಯಿಂದ ನೂತನ ಸಂಘಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ನ ಉಪಾಧ್ಯಕ್ಷ ರಾಘವೇಂದ್ರ ಭಟ್, ಕೊರೊನಾ ಸಂದರ್ಭದಲ್ಲಿ ಮುಜರಾಯಿ ಅರ್ಚಕರಿಗೆ ಹೊರತುಪಡಿಸಿ ಇತರೆ ದೇವಾಲಯಗಳ ಅರ್ಚಕರಿಗೆ ಸೌಲಭ್ಯಗಳು ದೊರೆಯಲಿಲ್ಲ. ಈ ದಿಸೆಯಲ್ಲಿ ಅರ್ಚಕರ ಕ್ಷೇಮಾಭಿವೃದ್ದಿಗಾಗಿ ಸಂಘ ಸ್ಥಾಪಿಸಲಾಗಿದ್ದು, ಈಗಾಗಲೇ ರಾಜ್ಯದಲ್ಲಿ 10 ಸಾವಿರ ಸದಸ್ಯರು ನೋಂದಣಿಯಾಗಿದ್ದಾರೆ ಎಂದರು.
ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ನ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಸುಧೀಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಘಾಟಿ ಬ್ರಾಹ್ಮಣರ ಸಂಘದ ಅಧ್ಯಕ್ಷ ರಾಮನಾಥ ಶರ್ಮ, ತಾ.ಪಂ ಮಾಜಿ ಸದಸ್ಯ ನಾಗರಾಜ ಶರ್ಮ, ಪ್ರಧಾನ ಸಂಚಾಲಕ ವಿ.ಅಚ್ಯುತ ಮೂರ್ತಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಲಿಯ ನಿರ್ದೇಶಕ ಪವನ್ ಕುಮಾರ್,ಅರ್ಚಕ ಶ್ರೀನಿವಾಸ ರಾಘವನ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆಯ್ಕೆ ಪತ್ರವನ್ನು ವಿತರಿಸಲಾಯಿತು.
ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ನ ಜಿಲ್ಲಾ ಘಟಕ: ವಿ.ಅಶ್ವತ್ಥನಾರಾಯಣ (ಅಧ್ಯಕ್ಷ), ಡಿ.ಕೆ.ನರಸಿಂಹಮೂರ್ತಿ(ಉಪಾಧ್ಯಕ್ಷರು), ಎಚ್.ಎಸ್.ನರಸಿಂಹಮೂರ್ತಿ(ಪ್ರಧಾನ ಕಾರ್ಯದರ್ಶಿ), ವಿಶ್ವನಾಥ್(ಜಂಟಿ ಕಾರ್ಯದರ್ಶಿ), ಬಿ.ಎಸ್.ಅಶ್ವತ್ಥ ಪ್ರಸಾದ್ ದೀಕ್ಷಿತ್(ಖಜಾಂಚಿ), ಎ.ಸಿ.ಶ್ರೀನಾಥ್(ಸಂಘಟನಾ ಕಾರ್ಯದರ್ಶಿ), ಎಚ್.ವಿ.ರಾಜೇಶ್(ನಿರ್ದೇಶಕರು)
ತಾಲೂಕುಗಳ ಅಧ್ಯಕ್ಷರು : ಎಸ್.ನವೀನ್(ದೊಡ್ಡಬಳ್ಳಾಪುರ), ಮಂಜುನಾಥ್ ಭಟ್( ನೆಲಮಂಗಲ),ಎ.ಎನ್.ಕೇಶವಮೂರ್ತಿ(ಹೊಸಕೋಟೆ),ಜೆ.ಕೆ.ಮಂಜುನಾಥ ಶರ್ಮ (ದೇವನಹಳ್ಳಿ)

