ದೊಡ್ಡಬಳ್ಳಾಪುರ: ಜಪಾನ್ ದೇಶದ ಮಿಯವಾಕಿ ಎಂಬ ಪರಿಸರ ತಜ್ಞ ನಗರ ಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿ ಕಿರು ಅರಣ್ಯ ಬೆಳೆಸುತ್ತಿದ್ದರು. ಅತ್ಯಲ್ಪ ಸ್ಥಳದಲ್ಲಿ ನಿರೀಕ್ಷೆಗೂ ಮೀರಿ ಗಿಡಗಳನ್ನು ಬೆಳೆಸಲಾಗಿತ್ತು. ಈ ಮಾದರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತರ ನಗರಗಳಿಗೂ ವ್ಯಾಪಿಸಿದೆ. ಕಿರು ಅರಣ್ಯ ನಿರ್ಮಾಣ ಹೆಚ್ಚಾದಂತೆ ‘ಮಿಯವಾಕಿ ವಿಧಾನ’ ಎಂದೇ ಕರೆಯಲಾಗುತ್ತಿದೆ ಎಂದು ಯುವ ಸಂಚಲ ಅಧ್ಯಕ್ಷ ಚಿದಾನಂದ್ ಹೇಳಿದರು.
ಅವರು ತಾಲ್ಲೂಕಿನ ಸೂಲುಕುಂಟೆ ಗ್ರಾಮದ ಮಿತ್ರ ಫೌಂಡೇಷನ್ನ ಯುವರಾಜ್ ಎಂಬುವರರ ಕೃಷಿ ಭೂಮಿಯಲ್ಲಿ ವಿಯವಾಂಕಿ ಕಿರು ಅರಣ್ಯ ಬೆಳೆಸುವ ಉದ್ದೇಶದಿಂದ ಸಸಿಗಳ ನಾಟಿ ಆರಂಭಿಸಿರುವ ಕುರಿತು ಮಾಹಿತಿ ನೀಡಿದರು.
ಸುಮಾರು ಮೂರು ಗುಂಟೆ ಜಮೀನಿನಲ್ಲಿ 91 ವಿವಿಧ ಜಾತಿಯ 840 ಸಸಿಗಳನ್ನು ನಾಟಿ ಮಾಡಲಾಗಿದೆ. ಮಣ್ಣಿನ ಗುಣವನ್ನು ಪರಿಶೀಲನೆ ಮಾಡಿಕೊಂಡು ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆಯನ್ನು ಹಾಕಿ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳ ಕೊರತೆ ನೀಗಿಸಲಾಗಿದೆ. ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3 ರಿಂದ 4 ಗುಂಡಿಗಳನ್ನು ತೆಗೆದು ಗಿಡ ನೆಡಲಾಗಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವುದು ‘ಮಿಯವಾಕಿ’ ವಿಶೇಷ. ಸಾಮಾನ್ಯವಾಗಿ ಸಸಿಗಳನ್ನು ಅತಿ ಎತ್ತರ ಬೆಳೆಯುವ, ಸಾಧಾರಣ ಎತ್ತರ ಬೆಳೆಯುವ ಹಾಗೂ ಪೊದೆ ರೀತಿ ಬೆಳೆಯುವ ಸಸಿಗಳಾಗಿ ವಿಂಗಡಿಸಿ ನಾಟಿ ಮಾಡಲಾಗಿದೆ. ಎರಡು ವರ್ಷ ನೀರುಹಾಕಿ ಗಿಡಗಳನ್ನು ಪೋಷಿಸಿದರೆ ಸಾಕು ನಮಗೇ ಗೊತ್ತಿಲ್ಲದಂತೆ ಪುಟ್ಟದೊಂದು ಅರಣ್ಯ ನಿರ್ಮಾಣವಾಗುತ್ತದೆ ಎಂದರು.
ಈ ಪ್ರಯೋಗವು ಮುಂಬೈನಲ್ಲಿ ಈಗಾಗಲೇ ಯಶಸ್ವಿಯಾಗಿದ್ದು ಬೆಂಗಳೂರಿನ ಕೆ.ಆರ್.ಪುರಂ ನಲ್ಲಿರುವ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ಯಾಂತ್ರಿಕ ಅಭಿಯಂತರ ಕಚೇರಿ ಆವರಣದಲ್ಲಿ ಬೆಳೆಸಿ ಯಶಸ್ವಿಯಾಗಿದ್ದಾರೆ. ಇಂತಹ ಒಂದು ಪ್ರಯೋಗವನ್ನು ನಮ್ಮ ತಾಲ್ಲೂಕಿನ ಸೂಲುಕುಂಟೆ ಗ್ರಾಮದ ಮಿತ್ರ ಫೌಂಡೇಶನ್ ಅನುಷ್ಠಾನಗೊಳಿಸಿದ್ದಾರೆ. ಇಲ್ಲಿ ನಾಟಿ ಮಾಡಿರುವ 91 ವಿವಿಧ ಪ್ರಭೇದದ ಸಸಿಗಳನ್ನು ಬಿಳಿಗಿರಿರಂಗನ ಬೆಟ್ಟದ ಸಮೀಪದಲ್ಲಿನ ನರ್ಸರಿಯಿಂದ ಹಾಗೂ ಸ್ಥಳೀಯವಾಗಿ ಬೆಳೆಯುವ ಸಸಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಮಿತ್ರ ಫೌಂಡೇಷನ್ನ ಯುವರಾಜ್ ಮಾಹಿತಿ ನೀಡಿ, ನಮ್ಮಲ್ಲಿ ಅರಣ್ಯ ಅಂದರೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವುದು ಮಾತ್ರ ಎನ್ನುವ ಕಲ್ಪನೆ ಇದೆ. ಆದರೆ ನಮ್ಮ ಕೃಷಿ ಜಮೀನಿನಲ್ಲೂ ವಿಯವಾಂಕಿ ಮಾದರಿಯಲ್ಲಿ ಕಿರು ಅರಣ್ಯವನ್ನು ಬೆಳೆಸುವುದರಿಂದ ನಮ್ಮ ಜಮೀನಿನಲ್ಲಿ ಬೆಳೆಯುವ ಇತರೆ ಬೆಳೆಗಳಿಗೆ ಬರುವ ಕೀಟಗಳ ಹಾವಳಿ ನಿಯಂತ್ರಣವಾಗುತ್ತದೆ. ಕಿರು ಅರಣ್ಯದಲ್ಲಿ ವಿವಿಧ ಬಗೆಯ ಔಷಧಿಯ ಗುಣವನ್ನು ಹೊಂದಿರುವ ಸಸಿಗಳು ಇರುವುದರಿಂದ ಬಿಡುವಿನ ವೇಳೆಯಲ್ಲಿ ಕುಳಿತು ಕಾಲ ಕಳೆಯುವುದರಿಂದ ನಮ್ಮ ಆರೋಗ್ಯವು ಸುಧಾರಣೆಯಾಗಲಿದೆ ಎಂದರು.

