ದೊಡ್ಡಬಳ್ಳಾಪುರ: ಎರಡನೇ ಅಲೆಯ ವೇಳೆ ತೋರಿದ ಅಸಡ್ಡೆಯಿಂದ ಆದ ಪ್ರಮಾದಿಂದ ರಾಜ್ಯ ಸರ್ಕಾರ ಪಾಠ ಕಲಿಯಬೇಕಿದ್ದು, ಮೂರನೆ ಅಲೆಗೂ ಮುನ್ನವೇ ಸಂಪೂರ್ಣ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗಾಗಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾಸೋಹ ಕಾರ್ಯಕ್ರಮ ಭಾಗವಹಿಸಿದ ಅವರು, ಆಹಾರ ಪೊಟ್ಟಣಗಳನ್ನು ವಿತರಿಸಿ ನಂತರ ಸುದ್ದಿಗಾರರೊಂದಿಗೆ ಈ ಕುರಿತು ತಿಳಿಸಿದರು.
ತಜ್ಞರ ವರದಿಯಂತೆ ಮೂರನೇ ಅಲೆ ಹೆಚ್ಚಾಗಿ ಮಕ್ಕಳು ತೊಂದರೆಗೆ ಈಡುಮಾಡುವ ಆತಂಕವಿದೆ. ಮಕ್ಕಳು ನಮ್ಮ ಭವಿಷ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಕಾಳಜಿವಹಿಸಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಮಕ್ಕಳ ತಜ್ಞರನ್ನು ನೇಮಿಸಬೇಕಿದೆ. ಮೂರನೇ ಅಲೆಗೂ ಮುನ್ನ ರಾಜ್ಯ ಸರ್ಕಾರ ಲಸಿಕೆ ವಿತರಣೆ ತೀವ್ರಗೊಳಿಸುವುದರ ಜೊತೆಗೆ, ವ್ಯವಸ್ಥಿತವಾಗಿ ಅಗತ್ಯ ಕ್ರಮಗಳ ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದರು.
ಕೋವಿಡ್ ಎರಡನೇ ಅಲೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ: ಮೊದಲನೇ ಅಲೆ ಇಡೀ ವಿಶ್ವಕ್ಕೆ ಕಾಡಿತ್ತು. ಆ ವೇಳೆ ಪ್ರಧಾನಿ ಮೋದಿ ಹೇಳಿಕೆಗಳಿಗೆ ನಾ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಎರಡನೇ ಅಲೆ ತೀವ್ರವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯ ನಡುವೆಯೂ ಕೇಂದ್ರ ಸರ್ಕಾರ ಮಾರ್ಗ ಸೂಚಿ ಬಿಡುಗಡೆ ಮಾಡದೆ, ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದರ ಪರಿಣಾಮ ಲಕ್ಷಾಂತರ ಸಾವುಗಳು ಸಂಭವಿಸಲು ಕಾರಣವಾಯಿತು ಎಂದು ಆರೋಪಿಸಿದರು.
ಸಾವಿನ ವರದಿ ಆಡಿಟ್ ಮಾಡಿಸಿ: ಕೋವಿಡ್ ಹಿನ್ನೆಲೆಯಲ್ಲಿ ಸಾವಿನ ಪ್ರಕರಣಗಳ ಕುರಿತು ಸರ್ಕಾರ ನೀಡುವ ವರದಿಗೂ, ಆಸ್ಪತ್ರೆಗಳಲ್ಲಿನ ವರದಿಗೂ ವೆತ್ಯಸವಿದ್ದು ಡೆತ್ ಆಡಿಟ್ ನಡೆಸಿ ಜನರಿಗೆ ವಾಸ್ತವ ತಿಳಿಸಬೇಕೆಂದು ಒತ್ತಾಯಿಸಿದರು.
2013ರಿಂದ ಸಿಎಂ ರೇಸ್ ನಲ್ಲಿದ್ದೇನೆ: ರಾಜ್ಯ ಕಾಂಗ್ರೆಸ್ನಲ್ಲಿ ಎದ್ದಿರುವ ಮುಂದಿನ ಸಿಎಂ ಯಾರು? ಎಂಬ ಚರ್ಚೆಗೆ ಸಂಬಂಧಿಸಿದಂತೆ ಪರ ವಿರೋಧದ ನಡುವೆಯೇ ನಾನು ಸಹ ಸಿಎಂ ರೇಸ್ ನಲ್ಲಿದ್ದೇನೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಸಿಎಂ ರೇಸ್ ನಲ್ಲಿ ನಾ ಇಲ್ಲ ಎಂದವರು ಯಾರು ಎಂದು ಪ್ರಶ್ನಿಸಿದ ಅವರು, 2013ರಿಂದಲೂ ನಾ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇನೆ. ಆದರೆ ಇದು ಸಮಯವಲ್ಲ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಎದುರಿಸಲಿದೆ.
ಬಿಜೆಪಿ ಪಕ್ಷದ ದುರಾಡಳಿತದಿಂದ ರಾಜ್ಯ ಜನತೆ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದು, ಆನಂತರ ಸಿಎಲ್ಪಿ ಸಭೆ ನಡೆದು ಹೈಕಮಾಂಡ್ ಆ ಸಂಧರ್ಭದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂದು ಚಿಂತಿಸಿ ಅಯ್ಕೆ ಮಾಡುತ್ತದೆ. ಈ ನಡುವೆ ಕಾಂಗ್ರೆಸ್ ಶಾಸಕರುಗಳು ಈ ರೀತಿ ಮುಖ್ಯಮಂತ್ರಿ ಅಭ್ಯರ್ಥಿ ಹೇಳಿಕೆ ನೀಡುತ್ತಿರುವುದು ಅವರ ವಯಕ್ತಿಕ ಅಭಿಪ್ರಾಯವಾಗಿದ್ದು. ಸಿಎಂ ಅಭ್ಯರ್ಥಿ ವಿಚಾರವಾಗಿ ಯಾರು ಚರ್ಚೆ ಬೇಡಾ ಎಂದು ತಿಳಿಸಿದ್ದೇನೆ. ಇದನ್ನು ಇಲ್ಲಿಗೆ ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತವನ್ನು ಜನರಿಗೆ ತಲುಪಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ತಿಳಿಸಿದ್ದೇನೆ ಎಂದರು.
ಸಿಎಂ ಬದಲಾವಣೆಯಿಂದ ಆಡಳಿತದ ಮೇಲೆ ಪರಿಣಾಮ: ವಿರೋಧ ಪಕ್ಷಗಳಲ್ಲಿನ ಒಳ ಕಿತ್ತಾಟ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಅಧಿಕಾರದಲ್ಲಿರುವವರು..? ಕೋವಿಡ್ ಸಂಕಷ್ಟದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ರಾಜ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇಬ್ಬರು ಜಿಲ್ಲಾಧಿಕಾರಿಗಳ ನಡುವಿನ ಕಿತ್ತಾಟದಿಂದ ಹಲವು ಸಾವುಗಳು ಉಂಟಾಯಿತು. ರಾಜ್ಯ ಸರ್ಕಾರ ಮೊದಲು ಒಳ ಜಗಳಗಳನ್ನು ಬದಿಗೊತ್ತಿ ಜನರ ಜೀವ ಉಳಿಸಬೇಕು ಎಂದರು.
ಶಾಸಕ ಟಿ.ವೆಂಕಟರಮಣಯ್ಯ ರಾಜ್ಯಕ್ಕೆ ಮಾದರಿ ಕಾರ್ಯ: ಲಾಕ್ಡೌನ್ ಕಾರಣ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗೆ ನಿರಂತರವಾಗಿ ಶಾಸಕ ವೆಂಕಟರಮಣಯ್ಯ ಅನ್ನದಾಸೋಹ ನಡೆಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಸಂಕಷ್ಟಕ್ಕೆ ನೆರವು ಒಂದು ದಿನ, ಎರಡು ದಿನ ಮಾಡುತ್ತಾರೆ. ಆದರೆ ವೆಂಕಟರಮಣಯ್ಯ ನಗರದ ನಲವತ್ತು ಭಾಗಗಳಲ್ಲಿ ನಿರಂತರವಾಗಿ ದಾಸೋಹ ನಡೆಸುತ್ತಿರುವುದು ಹಾಗೂ ಇಲ್ಲಿನ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳು ಕೈಜೋಡಿಸಿರುವುದು ಪ್ರಶಂಸನೀಯ ಎಂದರು.
ಈ ವೇಳೆ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ, ಹಿರಿಯ ಮುಖಂಡರಾದ ಸೋಮರುದ್ರಶರ್ಮ, ಹೇಮಂತರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆ.ಪಿ.ಜಗನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಪ್ಪಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಆಂಜನಮೂರ್ತಿ, ಟಿ.ರಾಮಣ್ಣ ಮಹಿಳಾ ಘಟಕದ ಕೆ.ಎಸ್.ಪ್ರಭ, ಗ್ರಾಪಂ ನಾಗರತ್ನಮ್ಮ, ಕಿಸಾನ್ ಘಟಕದ ಕುಮುದಾ, ಮುಖಂಡರಾದ ಪು.ಮಹೇಶ್, ಭೀಮಣ್ಣ, ಮುನಿರಾಜು, ಮಾರ್ಕೆಟ್ ರಾಮು ಮತ್ತಿತರರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..