ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಉದ್ದೇಶಿಸಿರುವ ಎತ್ತಿನಹೊಳೆ ಯೋಜನೆಯ ಭಾಗವಾಗಿ ತಾಲೂಕಿನ ಸಾಸಲು ಹೋಬಳಿಯಲ್ಲಿ ನಿರ್ಮಾಣವಾಗಲಿರುವ ಬೈರಗೊಂಡ್ಲು ಜಲಾಶಯಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಆಯ್ದ ಗ್ರಾಮಗಳಲ್ಲಿ ಸರ್ವೇ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಸ್ಥಳೀಯ ಜನರು ಸಹಕಾರ ಪಡೆಯುವ ಕುರಿತು ಉಪವಿಭಾಗಾಧಿಕಾರಿ ಅರುಳ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಚ್ಚೇನಹಳ್ಳಿ ಗ್ರಾಮದಲ್ಲಿ ಸಭೆ ನಡೆಸಿದರು.
ಈ ವೇಳೆ ಬೈರಗೊಂಡ್ಲು ಜಲಾಶಯದ ನಿರ್ಮಾಣಕ್ಕಾಗಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು, ಅಲ್ಲದೆ ಓರ್ವ ಯುವಕ ಸಭೆಯ ಟೇಬಲ್ ಎಳೆದಿದ್ದು ಅಧಿಕಾರಿಗಳು ತಾಳ್ಮೆ ಕೆಡಿಸಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಾಸಲು ಗ್ರಾಪಂ ಸದಸ್ಯ ಗೋವಿಂದರಾಜ್ ಮಾತನಾಡಿ, ಬೈರಗೊಂಡ್ಲು ಜಲಾಶಯದ ನಿರ್ಮಾಣ ಮಾಡದಂತೆ ಆರಂಭದಿಂದ ಇಲ್ಲಿಯವರೆಗೂ ಎಲ್ಲಾ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸರ್ಕಾರದ ತೀರ್ಮಾನ ಹೊರಬಿದ್ದಿಲ್ಲ. ಇಲ್ಲಿ ಜಲಾಶಯ ನಿರ್ಮಿಸುವ ಬದಲು ಪೈಪ್ಲೈನ್ ಮೂಲಕ ತೆಗೆದು ಕೊಂಡುಹೋಗಿ ಎಂಬುದು ನಮ್ಮೆಲ್ಲರ ಒಕ್ಕೊರಲ ತೀರ್ಮಾನ, ಡ್ಯಾಂ ನಿರ್ಮಾಣಕ್ಕೆ ವಿರೋಧವಿದೆ. ಡ್ಯಾಂ ನಿರ್ಮಾಣದ ಹೆಸರಲ್ಲಿ ಈ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಇಲ್ಲವಾಗಿದೆ. ಐವರು ಜಿಲ್ಲಾಧಿಕಾರಿಗಳು, ಐವರು ಉಪವಿಭಾಗಾಧಿಕಾರಿಗಳು ಬದಲಾದರು ಎಲ್ಲರಿಗೂ ಮನವಿ ಸಲ್ಲಿಸಲಾಗುತ್ತಿದೆ ಆದರೆ ಯೋಜನೆ ಕುರಿತು ಪದೇ ಪದೇ ಸಭೆಗೆ ಮುಂದಾಗಿ ರೈತರ ಸಮಯ ವ್ಯರ್ಥ ಮಾಡುತ್ತಾರೆ. ಜಲಾಶಯ ನಿರ್ಮಾಣಕ್ಕೆ ಸ್ಥಳೀಯರ ಸಂಪೂರ್ಣ ವಿರೋಧವಿದೆ ಬಲವಂತ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದರು.
ಶಡ್ಯಂತ್ರ ನಡೆಸಿ ಬಲವಂತದಿಂದ ಬೈರಗೊಂಡ್ಲು ಜಲಾಶಯ ನಿರ್ಮಾಣ ಕಾರ್ಯಕ್ಕೆ ಮುಂದಾದಲ್ಲಿ ಪ್ರಾಣ ತ್ಯಾಗ ಮಾಡಬೇಕಾಗುವುದೆಂದು ಮುಳುಗಡೆ ಹೊಂದಲಿರುವ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸಿದರು. ಜಲಾಶಯ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದರೂ ಕದ್ದು ಮುಚ್ಚಿ ಸರ್ವೆ ಮಾಡುತ್ತಾರೆ. ಸಾಸಲು ಗ್ರಾ.ಪಂ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಕೆಸಿ ವ್ಯಾಲಿ ನೀರು ಹರಿಯುತ್ತಿದೆ, ಇಲ್ಲಿನ ಬಡ ಜನರ ಒಕ್ಕಲೆಬ್ಬಿಸಿ ನೀರು ಕೊಡುವ ಅವಶ್ಯಕತೆ ಇಲ್ಲ. ಈ ಯೋಜನೆಗೆ ನಮ್ಮ ವಿರೋಧವಿದ್ದು ಅಧಿಕಾರಿಗಳು ಸಭೆ ನಡೆಸದೆ ತೆರಳಬೇಕೆಂದರು.
ಈ ವೇಳೆ ಮಾತನಾಡಿದ ಎತ್ತಿನಹೊಳೆ ಯೋಜನೆಯ ಎಂಜಿನಿಯರ್ ಶ್ರೀಕಾಂತ್ ಎತ್ತಿನಹೊಳೆ ಯೋಜನೆ ಕಾರ್ಯ ಶೇ.50 ರಷ್ಟು ಕಾಮಗಾರಿ ಪೂರ್ಣವಾಗಿದೆ. ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಪರಿಹಾರ ವ್ಯತ್ಯಾಸವಿರುವುದರಿಂದ ಮರು ಸರ್ವೆ ಕಾರ್ಯಕ್ಕೆ ಸರ್ಕಾರ ಆದೇಶ ನೀಡಿದ್ದು ಸ್ಥಳೀಯರು ಅವಕಾಶ ನೀಡಬೇಕೆಂದರು.
ಎತ್ತಿನಹೊಳೆ ವಿಶೇಷ ಭೂ ಸ್ವಾಧೀನಾಕಾರಿ ಪೂರ್ಣಿಮ ಮಾತನಾಡಿ, ಬೈರಗೊಂಡ್ಲು ಜಲಾಶಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರು ಒದಗಿಸಲು ಅನೂಕೂಲವಾಗಲಿದೆ. ಸಾಸಲು ಹೋಬಳಿ 11 ಗ್ರಾಮಗಳು ಕೊರಟಗೆರೆ ವ್ಯಾಪ್ತಿಯ ಹಲವು ಗ್ರಾಮಗಳ ಮುಳುಗಡೆಯಾಗಿ ಬೈರಗೊಂಡ್ಲು ಜಲಾಶಯ ನಿರ್ಮಾಣವಾಗಲಿದೆ. ಮೊದಲನೆ ಹಂತದ ಕಾಮಗಾರಿಯಲ್ಲಿ ರೈತರಿಗೆ ಪರಿಹಾರ ದೊರಕಿದ್ದು, ಎರಡನೇ ಹಂತದಲ್ಲಿ ನೂತನ ಕಾಯ್ದೆ ಅನ್ವಯ ರೈತರಿಗೆ ಹೆಚ್ಚುವರಿ ಪರಿಹಾರ ದೊರಕುತ್ತದೆ, ಆ ಕಾರಣ ಈ ಸರ್ವೆ ಅಗತ್ಯವಾಗಿದ್ದು, ಸರ್ವೆ ಕಾರ್ಯ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಪರಿಹಾರ ದೊರೆಯಲಿದೆ ಎಂದರು.
ನಂತರ ಮಾತನಾಡಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಗರಡುಗಲ್ಲು, ಮಚ್ಚೇನಹಳ್ಳಿ, ಶೀರಾಮನಹಳ್ಳಿ, ಶಿಂಗೇನಹಳ್ಳಿ, ಗಾಣದಾಳು, ಕಣಕೇನಹಳ್ಳಿ, ನರಸಾಪುರ, ಆಲಪ್ಪನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಅಂಕೋನಹಳ್ಳಿ ಗ್ರಾಮಗಳಲ್ಲಿ ಜಲಾಶಯ ಮುಳುಗಡೆಯ ಸಾಧಕ ಬಾಧಕಗಳ ಸರ್ವೇ ಸಮೀಕ್ಷೆ ಕಾರ್ಯ ಮಾಡಲು ಸರ್ಕಾರದಿಂದ ನಿರ್ದೇಶನವಿರುವುದರಿಂದ, ಸರ್ವೇ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಸ್ಥಳೀಯರ ಸಹಕಾರ ಅವಶ್ಯವಾಗಿದೆ. ಜಲಾಶಯದ ಸರ್ವೇ ಕಾರ್ಯ ಮಾಡಿದ್ದಲ್ಲಿ, ಮಾತ್ರ ಜಲಾಶಯದ ಮುಳುಗಡೆ ಪ್ರದೇಶದ ನಿಖರವಾಗಿ ಭೂ ಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ, ಭೂ ಪರಿಹಾರ ಮೊತ್ತ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಅಂದಾಜು ಲೆಕ್ಕಚಾರ ಮಾಡಲಾಗುವುದು ಎಂದರು.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಜಲಾಶಯ ನಿರ್ಮಾಣಕ್ಕೆ ಸ್ಥಳೀಯ ಗ್ರಾಮಸ್ಥರ ವಿರೋಧವಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಈ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳಲ್ಲಿ ಚಿಕ್ಕ ಚಿಕ್ಕ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಪೂರೈಸಲು ಸರ್ಕಾರದ ಚಿಂತನೆಯಲ್ಲಿದೆ. ಈ ನಿಟ್ಟಿನಲ್ಲಿ ಸರ್ವೆ ಕಾರ್ಯ ನಡೆಸಿ ಜಲಾಶಯ ಅಳತೆ ಕಡಿಮೆ ಮಾಡಲು ಅವಕಾಶ ನೀಡಬೇಕಿದೆ. ಸರ್ವೆ ನಡೆಸುವಾಗ ಅಡ್ಡಿ ಪಡೆಸುವುದು ಮತ್ತಿತರ ಅಡಚಣೆ ಮಾಡದಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಸಲು ಗ್ರಾಪಂ ಅಧ್ಯಕ್ಷ ಮಾರೇಗೌಡ, ಉಪಾಧ್ಯಕ್ಷ ಆನಂದ್, ಸದಸ್ಯ ವೀರಣ್ಣ, ಕೆಂಪರಾಜು, ಜಿ.ಸಿ.ನರಸಿಂಹ ಮೂರ್ತಿ, ಮಾಜಿ ಅಧ್ಯಕ್ಷ ರಾಮಣ್ಣ, ಸೇರಿದಂತೆ ಹಲವು ಗ್ರಾಮಗಳ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..