ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 71ನೇಜನ್ಮ ದಿನದ ಸಂಭ್ರಮ. ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಎರಡನೇ ಬಾರಿಗೆ ಭಾರತದ ಪ್ರಧಾನಿ ಸ್ಥಾನ ಅಲಂಕರಿಸಿರುವ ಮೋದಿ ಅವರ ಜನ್ಮದಿನ ಸಂಭ್ರಮಾಚರಣೆಗೆ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಸಿದ್ದತೆ ಜೋರಾಗಿಯೇ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಹುಟ್ಟುಹಬ್ಬವನ್ನು ಬಿಜೆಪಿ ವಿಶೇಷವಾಗಿ ಆಚರಿಸುತ್ತಿದೆ. ಕಾಶಿಯಲ್ಲಿರುವ ವಾರಣಾಸಿಯ ಭಾರತ ಮಾತಾ ದೇವಸ್ಥಾನದಲ್ಲಿ 71,000 ಮಣ್ಣಿನ ದೀಪಗಳನ್ನು ಬೆಳಗಿಸಲು ಸಿದ್ದತೆ ಕೈಗೊಂಡಿದೆ. ದೀಪಗಳನ್ನು ಬೆಳಗಿಸುವುದರ ಜೊತೆಗೆ, 14 ಕೋಟಿ ಪಡಿತರ ಕಿಟ್ಗಳನ್ನು ವಿತರಿಸಲಿದೆ.
ರಾಜ್ಯದಲ್ಲೂ ಮೋದಿ ಜನ್ಮ ದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳ ಜೊತೆಗೆ ವಿಶೇಷ ಮಹಾ ಲಸಿಕೆ ಅಭಿಯಾನವನ್ನು ರಾಜ್ಯ ಸರ್ಕಾರ ಆಯೋಜಿಸಿದೆ.
ಪ್ರಧಾನಿ ಮೋದಿ ಅವರ ಫೋಟೋ ಇರುವ 5 ಕೋಟಿ ಪೋಸ್ಟ್ಕಾರ್ಡ್ಗಳನ್ನು ದೇಶಾದ್ಯಂತ ಅಂಚೆ ಕಚೇರಿಗಳಿಂದ ಮೇಲ್ ಮಾಡಲಾಗುತ್ತಿದೆ.
ರಕ್ತದಾನ ಅಭಿಯಾನ, ನದಿಗಳ ಸ್ವಚ್ಛತಾ ಅಭಿಯಾನ, ಪಡಿತರ ಚೀಟಿಗಳ ವಿತರಣೆ ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಂತೆ ಮೋದಿ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ.
20 ದಿನಗಳ ಮೆಗಾ ಅಭಿಯಾನ ‘ಸೇವಾ ಔರ್ ಸಮರ್ಪನ್ ಅಭಿಯಾನ’ ಇಂದು ಆರಂಭವಾಗಲಿದ್ದು, ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಲಿದೆ. ಏತನ್ಮಧ್ಯೆ, ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದಲ್ಲಿಯೇ 27,000 ಬೂತ್ಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ರಾಜ್ಯದಲ್ಲಿ ವಿಶೇಷ ಲಸಿಕೆ ಅಭಿಯಾನ: ಪ್ರಧಾನಿ ಮೋದಿ ಅವರ ಜನ್ಮ ದಿನದ ಪ್ರಯುಕ್ತ ರಾಜ್ಯ ಸರ್ಕಾರ ಮಹಾ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಒಟ್ಟು 4.8 ಕೋಟಿ ಡೋಸ್ ಹಂಚಿಕೆಯಾಗಿದೆ. ಇಂದು ಲಸಿಕೆ ಅಭಿಯಾನಕ್ಕೆ 34 ಲಕ್ಷ ಡೋಸ್ ಮೀಸಲಿಡಲಾಗಿದೆ. ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ಲಸಿಕಾ ಕೇಂದ್ರದಲ್ಲಿ ಲಸಿಕೆ ಹಂಚಿಕೆ ಆಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 8,33,641 ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದ್ದು, ಈವರೆಗೂ 5,73,089 ಜನರಿಗೆ ಲಸಿಕೆಯನ್ನು ನೀಡಲಾಗಿದ್ದು, ಉಳಿದ 2,58,040 ಜನರಿಗೆ ಲಸಿಕೆಯನ್ನು ನೀಡಬೇಕಾಗಿರುವುದರಿಂದ ಈ ವಿಶೇಷ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ದೊಡ್ಡಬಳ್ಳಾಪುರ ತಾಲ್ಲೂಕಿಗೆ 30,000, ನೆಲಮಂಗಲ ತಾಲ್ಲೂಕಿಗೆ 22,000, ದೇವನಹಳ್ಳಿ ತಾಲ್ಲೂಕಿಗೆ 10,000 ಹಾಗೂ ಹೊಸಕೋಟೆ ತಾಲ್ಲೂಕಿಗೆ 10,000 ರಂತೆ ಜಿಲ್ಲೆಗೆ ಒಟ್ಟು 72 ಸಾವಿರಗಳ ಗುರಿಯನ್ನು ನೀಡಲಾಗಿದೆ.
ನಾಗರೀಕರು ಲಸಿಕೆಯನ್ನು ಪಡೆಯಲು ಸಹಕಾರಿಯಾಗುವಂತೆ ಅವರ ಗ್ರಾಮ ಮಟ್ಟಗಳಲ್ಲಿ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿಯೇ ಲಸಿಕಾಕರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆದ್ಯತೆಯುಳ್ಳ ಗುಂಪುಗಳಾದ ಕೈಗಾರಿಕಾ ವಸಾಹತು, ಕೊಳಗೇರಿ ಪ್ರದೇಶಗಳು, ಆಪಾರ್ಟ್ಮೆಂಟ್ಸ್ ಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಅಲೆಮಾರಿ ಗುಂಪುಗಳು, 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕ್ಯಾಬ್ ಡ್ರೈವರ್ ಗಳು, ಹೋಟಲ್ ಸಿಬ್ಬಂದಿಗಳು, ಗಾರ್ಮೆಂಟ್ಸ್ ನೌಕರರು ಹಾಗೂ ಇತರೆ ಎಲ್ಲಾ ಅರ್ಹ ನಾಗರೀಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹಳ್ಳಿಗಳಲ್ಲಿ ಲಸಿಕಾಕರಣವನ್ನು ನಡೆಸಲಾಗುವುದು.
ಲಸಿಕೆ ಪಡೆಯದೆ ಇರುವ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಪೊಟೋ ಕೃಪೆ:DD)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..